ರಜನಿಕಾಂತ್ ರಾಜಕೀಯಕ್ಕೆ ಏಕೆ ಧುಮುಕಬೇಕು : 5 ಕಾರಣ
ರಾಜಕಾರಣಿಗಳ ಬಣ್ಣ ಬಲ್ಲಂಥ ಭಾರತೀಯರು ಯಾವ ರಾಜಕಾರಣಿಯನ್ನೂ ನಂಬದಂಥ ಸ್ಥಿತಿಗೆ ತಲುಪಿಬಿಟ್ಟಿದ್ದಾರೆ. ಭ್ರಷ್ಟಾಚಾರವನ್ನು ತೊಳೆದು ಹಾಕುತ್ತೇನೆ ಎಂದು ಭಾಷಣಗಳನ್ನು ಬಿಗಿಯುತ್ತಿದ್ದ ಕೇಜ್ರಿವಾಲ್ ಅಂಥವರೇ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ.
"ಹೌದು ನಾನು ರಾಜಕೀಯಕ್ಕೆ ಧುಮುಕುತ್ತೇನೆ" ಎಂದು ತಮಿಳಿಗರ ಆರಾಧ್ಯ ದೈವವಾಗಿರುವ 'ತಲೈವಾ' ರಜನಿಕಾಂತ್ ಅವರು ಘೋಷಿಸಿದ್ದೇ ಆದಲ್ಲಿ ತಮಿಳುನಾಡು ರಾಜಕೀಯದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕೀಯದಲ್ಲಿ ಬಿರುಗಾಳಿಯೆದ್ದು ಅಲ್ಲೋಕಲ್ಲೋಲವಾಗುವುದು ಸತ್ಯ.
'Politics is the last resort for the scoundrels' ಎಂದು ಜಾರ್ಜ್ ಬರ್ನಾರ್ಡ್ ಷಾ ಅವರು ಶತಮಾನಗಳ ಹಿಂದೆ ಹೇಳಿದ್ದ ಮಾತನ್ನು ಭಾರತದ ಹಲವಾರು ರಾಜಕಾರಣಿಗಳು ಮೇಲಿಂದ ಮೇಲೆ ಸಾಬೀತು ಮಾಡಿ ತೊರಿಸಿದ್ದಾರೆ. ಅದರಲ್ಲೂ ತಮಿಳುನಾಡು ರಾಜಕೀಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ.[ರಜನಿಕಾಂತ್ ಮನೆ ಮುಂದೆ ಧರಣಿ: ತಲೈವಾ ಮನೆಗೆ ಬಿಗಿ ಭದ್ರತೆ]
ರಾಜಕಾರಣಿಗಳ ಬಣ್ಣ ಬಲ್ಲಂಥ ಭಾರತೀಯರು ಯಾವ ರಾಜಕಾರಣಿಯನ್ನೂ ನಂಬದಂಥ ಸ್ಥಿತಿಗೆ ತಲುಪಿಬಿಟ್ಟಿದ್ದಾರೆ. ಭ್ರಷ್ಟಾಚಾರವನ್ನು ತೊಳೆದು ಹಾಕುತ್ತೇನೆ ಎಂದು ಕ್ರಾಂತಿಕಾರಿ ಭಾಷಣಗಳನ್ನು ಬಿಗಿಯುತ್ತಿದ್ದ ಅರವಿಂದ್ ಕೇಜ್ರಿವಾಲ್ ಅಂಥವರೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.
ಅವರಿವರು ಮಾತ್ರವಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ರಜನಿಕಾಂತ್ ರಾಜಕೀಯಕ್ಕೆ ಧುಮುಕಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದಾರೆ. ಮನಃಸಾಕ್ಷಿ ಹೇಳಿದಂತೆ ಮಾತ್ರ ನಡೆದುಕೊಳ್ಳುವ 66ರ ಹರೆಯದ ರಜನಿಕಾಂತ್, ದೈವೇಚ್ಛೆಯಿದ್ದರೆ ರಾಜಕೀಯಕ್ಕೆ ಬಂದೇ ಬರುತ್ತೇನೆ ಎಂದು ಸಣ್ಣ ಸೂಚನೆ ಕೊಟ್ಟಿದ್ದಾರೆ.
ರಾಜಕೀಯಕ್ಕೆ ಎಂಥವರು ಬಂದರೂ ಅಷ್ಟೇ, ಕೊಳಕಿನಲ್ಲಿ ಯಾರೇ ಇಳಿಯಲು ಅವರೂ ಕೊಳಕಾಗುವುದಕ್ಕೆ ಹೆಚ್ಚುಹೊತ್ತು ಹಿಡಿಯುವುದಿಲ್ಲ ಎಂದು ಋಣಾತ್ಮಕವಾಗಿ ಚಿಂತಿಸದೆ, ಅವರು ಬಿಜೆಪಿಯನ್ನೇ ಸೇರಲಿ, ಸ್ವಂತ ಪಕ್ಷವನ್ನೇ ಆರಂಭಿಸಲಿ, ರಜನಿಕಾಂತ್ ಯಾಕೆ ರಾಜಕೀಯಕ್ಕೆ ಧುಮುಕಬೇಕು ಎಂಬುದಕ್ಕೆ ಇಲ್ಲಿ ಕೆಲವು ಕಾರಣಗಳಿವೆ.
ರೋಸತ್ತು ಹೋಗಿದ್ದಾರೆ ತಮಿಳುನಾಡಿನ ಜನತೆ
ತಮಿಳುನಾಡಿನಲ್ಲಿ ಜನತೆ ಜಯಲಲಿತಾ ಮತ್ತು ಕರುಣಾನಿಧಿ ರಾಜಕೀಯ ಕಂಡು ರೋಸತ್ತು ಹೋಗಿದ್ದಾರೆ. ಜಯಲಲಿತಾ ಸಾವಿನ ನಂತರ ಎಐಎಡಿಎಂಕೆ ಪಕ್ಷದ ಗುದ್ದಾಟ ಕಂಡು ಭ್ರಮನಿರಸನಗೊಂಡಿದ್ದಾರೆ. ಅಕ್ಷರಶಃ ಹೇಳಬೇಕೆಂದರೆ, ತಮಿಳುನಾಡಿನ ಜನತೆ ಸ್ವಚ್ಛ ರಾಜಕಾರಣವನ್ನು ಜನುಮದಲ್ಲೇ ಕಂಡಿಲ್ಲ. ಇಂಥ ಸ್ವಚ್ಛ ರಾಜಕಾರಣದ ಬಗ್ಗೆ ಮಾತನಾಡುವ ರಜನಿಕಾಂತ್ ತಮಿಳುನಾಡಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ಪ್ರಸ್ತುತರಾಗುತ್ತಾರೆ.
ಜನರ ಚಿಂತನೆ ಬದಲಾಯಿಸಲು ರಜನಿ ಬೇಕು
ರಜನಿ ಅಂದ್ರೆ ಇಡೀ ತಮಿಳುನಾಡು ಅಡ್ಡ ಬೀಳುತ್ತದೆ. ಜಯಲಲಿತಾ ಅಂಥವರನ್ನೇ ದೇವತೆಯನ್ನಾಗಿ ಮಾಡಿದವರು ತಮಿಳರು. ಇನ್ನು ರಜನಿಕಾಂತ್ ರಾಜಕೀಯಕ್ಕಿಳಿದರೆ ಅವರ ಮಾತನ್ನು ಚಾಚೂತಪ್ಪದೆ ಪಾಲಿಸುತ್ತದೆ. ಅವರು ಚಿಟಿಕೆ ಹೊಡೆದರೆ ಸಾಕು ಸಾವಿರಾರು ಜನರು ಹಿಂದೆ ಬರುತ್ತಾರೆ. ಜನರು ಕೂಡ ಹೊರದಿಕ್ಕಿನತ್ತ ಚಿಂತನೆ ಮಾಡಲು ರಜನಿಕಾಂತ್ ಅಂಥವರು ರಾಜಕೀಯಕ್ಕೆ ಧುಮುಕುವುದು ಅನಿವಾರ್ಯವಾಗಿದೆ.[ನಾನು ಅಪ್ಪಟ್ಟ ತಮಿಳಿಗ : ಸ್ವಾಮಿಗೆ ತಿರುಗೇಟು ಕೊಟ್ಟ ರಜನಿ]
ರಜನಿಯದು ಕಳಂಕರಹಿತ ವ್ಯಕ್ತಿತ್ವ
ತಮ್ಮಿಡೀ ಜೀವನದುದ್ದಕ್ಕೂ ಕಳಂಕರಹಿತರಾಗಿಯೇ ಜೀವನ ನಡೆಸಿದ, ಬಲಗೈ ಮಾಡಿದ ಕೆಲಸ ಎಡಗೈಗೂ ಅರಿಯದಂತೆ ಎಚ್ಚರಿಕೆ ವಹಿಸಿದ, ಭಾಷೆ ಗಡಿಯನ್ನು ಮೀರಿ ಪ್ರೀತಿ ಗೌರವವನ್ನು ಸಂಪಾದಿಸಿದ ರಜನಿಕಾಂತ್ ಅಂಥ ವ್ಯಕ್ತಿಯೊಬ್ಬರು ರಾಜಕೀಯಕ್ಕೆ ಕಾಲಿಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಶುದ್ಧ ವ್ಯಕ್ತಿತ್ವದ ರಜನಿಕಾಂತ್ ರಾಜಕೀಯಕ್ಕೆ ಧುಮುಕಿದರೆ ಸ್ವಾಮಿಯಂಥವರು ಕಳೆದುಕೊಳ್ಳುವುದಾದರೂ ಏನು?[ಮುಂದಿನ ವಾರ ರಜನಿಕಾಂತ್, ಮೋದಿ ಮಹತ್ವದ ಭೇಟಿ]
ಬಿಜೆಪಿಯಿಂದ ರಜನಿಗೆ ಮುಕ್ತಹಸ್ತ
ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಜನತಾ ಪಕ್ಷಕ್ಕೆ ತಮಿಳುನಾಡಿನಲ್ಲಿ ಅಸ್ವಿತ್ವ ಬೇಕಾಗಿದೆ. ಅಲ್ಲಿ ಬಿಜೆಪಿ ಪ್ರತಿನಿಧಿ ಯಾರೆಂದು ದುರ್ಬೀನು ಹಾಕಿ ಹುಡುಕಿದರೂ ಸಿಕ್ಕುವುದಿಲ್ಲ. ಈಗಾಗಲೆ ಕೆಲ ರಾಜಕೀಯ ಪಕ್ಷಗಳೊಂದಿಗೆ ಕೈಕುಲುಕಲು ಆರಂಭಿಸಿರುವ ಬಿಜೆಪಿ, ರಜನಿಕಾಂತ್ ರಾಜಕೀಯಕ್ಕೆ ಧುಮುಕುವ ಮೊದಲೇ ಅವರನ್ನು ಸೆಳೆಯಲು ಯತ್ನ ನಡೆಸಿದೆ. ಒಂದು ವೇಳೆ ಅವರು ಬಿಜೆಪಿಗೆ ಬರುವುದಾದರೆ ದ್ವಾರ ಮುಕ್ತವಾಗಿರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ದುಡ್ಡು ಮಾಡುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ
ಭಾರತದ ರಾಜಕೀಯ ಕುಲಗೆಟ್ಟು ಹೋಗಿದೆ. ಬರೀ ದುಡ್ಡು ಮಾಡುವವರು ರಾಜಕಾರಣಿಯ ವೇಷ ತೊಟ್ಟು ಕುಳಿತಿದ್ದಾರೆ. ನಾನು ಒಂದು ವೇಳೆ ಪಕ್ಷ ಕಟ್ಟಿದರೂ ನನ್ನ ಸುತ್ತ ಇಂಥವರು ಇರಲು ಅವಕಾಶವನ್ನೇ ನೀಡುವುದಿಲ್ಲ ಎಂದು ಹೇಳಿರುವುದು ರಜನಿಯಲ್ಲಿರುವ ಮೌಲ್ಯವನ್ನು ಎತ್ತಿಹಿಡಿದಿದೆ. ಕಡಿಮೆ ಮಾತಿನ ರಜನಿಕಾಂತ್ ಆಡುವುದಕ್ಕಿಂತ ಮಾಡಿ ತೋರಿಸುವವರು.[ರಾಜಕೀಯಕ್ಕೆ ಎಂಟ್ರಿ: ಮತ್ತೊಮ್ಮೆ ಸುಳಿವು ಕೊಟ್ಟ ರಜನೀಕಾಂತ್]