ನ್ಯಾಷನಲ್ ಹೆರಾಲ್ಡ್ ಆರಂಭಕ್ಕೆ 'ಕೈ' ಮುಂದೆ, ಏನಿದೆ ಹಿಂದೆ?
ನವದೆಹಲಿ, ಜುಲೈ, 11: ಆರ್ಥಿಕ ಸಂಕಷ್ಟದ ಕಾರಣಕ್ಕೆ 8 ವರ್ಷದ ಹಿ೦ದೆ ಸ್ಥಗಿತವಾಗಿದ್ದ ನ್ಯಾಷನಲ್ ಹೆರಾಲ್ಡ್ ಹಾಗೂ ಮತ್ತೆರಡು ಪತ್ರಿಕೆಗಳನ್ನು ಮರು ಪ್ರಕಾಶನಗೊಳಿಸಲು ಕಾಂಗ್ರೆಸ್ ಮುಂದಾಗಿದೆ.
ಅಷ್ಟಕ್ಕೂ ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ಇದೀಗ ಪತ್ರಿಕೆಗಳನ್ನು ಮತ್ತೆ ಆರಂಭ ಮಾಡಲು ಮುಂದಾಗಿರುವುದು ಯಾಕೆ ಎಂಬುದನ್ನು ವಿಶ್ಲೇಷಣೆ ಮಾಡಿದರೆ ಹಲವಾರು ಅಂಶಗಳು ನಮ್ಮೆದುರಿಗೆ ಬರುತ್ತವೆ.[ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್]
ಈ ನ್ಯಾಷನಲ್ ಹೆರಾಲ್ಡ್ ಎಂಬ ಹೆಸರು ಈಗಾಗಲೇ ಕಾಂಗ್ರೆಸ್ ಅಧಿನಾಯಕರನ್ನು ಸುತ್ತಿಕೊಂಡಿದೆ. ಬಡ್ಡಿ ರಹಿತವಾಗಿ ಕೋಟ್ಯಂತರ ಹಣ ಸಾಲವನ್ನು ಅಕ್ರಮವಾಗಿ ನೀಡಿದ ಪ್ರಕರಣವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಏಕಾಏಕಿ ಪತ್ರಿಕೆಯನ್ನು ಆರಂಭ ಮಾಡಲು ಮುಂದಾಗಿದ್ದು ಯಾಕೆ? ಉತ್ತರ ಮುಂದಿದೆ.
ಮಾಧ್ಯಮವೆಂಬ ಅಸ್ತ್ರ
ಮಾಧ್ಯಮಗಳ ಮೇಲೆ ಎಷ್ಟೆಂದರೂ ಆಡಳಿತ ಪಕ್ಷ ಪ್ರಭಾವ ಬೀರಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಪಕ್ಷದ ಎಲ್ಲ ಆಲೋಚನೆಗಳನ್ನು ಪ್ರಚುರ ಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಮಾಧ್ಯಮ ಇಲ್ಲದಂತಾಗಿದ್ದು ನ್ಯಾಷನಲ್ ಹೆರಾಲ್ಡ್ ಪುನರಾರಂಭಕ್ಕೆ ಕಾರಣವಾಗಿದೆ.
ಚುನಾವಣೆ ಸೋಲು
ರಾಜ್ಯಗಳ ವಿಧಾನಸಭೆ ಸೋಲನ್ನು ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾಕೆ ಸೋಲಾಯಿತು ಎಂಬ ಕಾರಣಗಳನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು ಅದಕ್ಕೆಲ್ಲ ಉತ್ತರ ಪತ್ರಿಕೆಯ ಪುನರಾರಂಭ ಎಂದು ಕಾಂಗ್ರೆಸ್ ನಂಬಿದೆ.
ಗೋವಾ, ಪಂಜಾಬ್, ಉತ್ತರ ಪ್ರದೇಶ ಚುನಾವಣೆ
ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಎಲ್ಲ ಚುನಾವಣೆಗಳು ಪ್ರಮುಖ. ಆಯಾ ರಾಜ್ಯದ ಹಿತಾಸಕ್ತಿಗಳು, ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರಗಳನ್ನು ಜನರಿಗೆ ಸುಲಭವಾಗಿ ತಿಳಿಸುವುದು ಪತ್ರಿಕೆ ಆರಂಭದ ಹಿಂದಿನ ಉದ್ದೇಶ.
ಸಾಮಾಜಿಕ ತಾಣಗಳು
ಸಾಮಾಜಿಕ ತಾಣಗಳು ಮಾಧ್ಯಮಗಳ ರೀತಿಯಲ್ಲೇ ಕೆಲಸ ಮಾಡುತ್ತ ಇರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಎಷ್ಟೋ ಸಂದರ್ಭ ವಿಪರೀತ ಟೀಕೆಗಳನ್ನು ಕಾಂಗ್ರೆಸ್ ಎದುರಿಸುತ್ತಿದ್ದು ಅದಕ್ಕೆಲ್ಲ ಉತ್ತರ ಪತ್ರಿಕೆ ಪುನಾರಂಭ.
ಚರ್ಚೆಗೆ ನಾಂದಿ ಹಾಡಲು
ಕೇಂದ್ರ ಸರ್ಕಾರದ ನೀತಿ ನಿಯಮಗಳನ್ನು ಖಂಡಿಸುವುದರೊಂದಿಗೆ ಚರ್ಚೆಗೆ ನಾಂದಿ ಹಾಡಲು ಪತ್ರಿಕೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಕಾಂಗ್ರೆಸ್ ನ ಮುಂದಿನ ಗುರಿ.