ಕಪಿಲ್ ಮಿಶ್ರಾ ಉಚ್ಛಾಟನೆಗೇಕೆ ಕೇಜ್ರಿ ಮುಂದಾಗುತ್ತಿಲ್ಲ?
ನವದೆಹಲಿ, ಮೇ 29: ಎಎಪಿ ನಾಯಕ ಕೇಜ್ರಿವಾಲ್ ಮೇಲೆ ಆರೋಪಗಳ ಸುರಿಮಳೆಯನ್ನೇ ಕಪಿಲ್ ಮಿಶ್ರಾ ಸುರಿಸುತ್ತಿದ್ದಾರೆ. ಆದರೂ ಅವರನ್ನು ಪಕ್ಷದಿಂದ ಹೊರ ಹಾಕಲು ಮಾತ್ರ ಕೇಜ್ರಿವಾಲ್ ಮನಸ್ಸು ಮಾಡುತ್ತಿಲ್ಲ ಯಾಕೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.
ಒಂದೊಮ್ಮೆ ಕಪಿಲ್ ಮಿಶ್ರಾರನ್ನು ಉಚ್ಛಾಟನೆ ಮಾಡಿದರೆ ಬೇರೆ ಪಕ್ಷ ಸೇರಲು ಅವರಿಗೆ ಅವಕಾಶ ನೀಡಿದಂತಾಗುತ್ತದೆ. ಮಾತ್ರವಲ್ಲ ದೆಹಲಿ ವಿಧಾನಸಭೆಯೊಳಗೆ ಅವರಿಗೆ ಪ್ರತ್ಯೇಕ ಗುಂಪು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಾಂತಾಗುತ್ತದೆ ಎಂಬ ಕಾರಣಕ್ಕೆ ಎಎಪಿ ಮಿಶ್ರಾರನ್ನು ಪಕ್ಷದಿಂದ ಹೊರ ಹಾಕುತ್ತಿಲ್ಲ.
ಇಲ್ಲಿಯವರೆಗೆ ಎಎಪಿ 5 ಜನ ಶಾಸಕರಾದ ದೇವಿಂದರ್ ಸಾಹ್ರವಾತ್, ಅಮಾನತುಲ್ಲಾಹ್ ಖಾನ್ ಮತ್ತು ಮಾಜಿ ಸಚಿವ ಅಸೀಮ್ ಅಹ್ಮದ್ ಖಾನ್ ಮತ್ತು ಸಂದೀಪ್ ಕುಮಾರ್ ರನ್ನು ಅಮಾನತು ಮಾಡಿದೆ. ಆದರೆ ಪಕ್ಷದಿಂದ ಇವರನ್ನು ಉಚ್ಛಾಟನೆ ಮಾಡಿಲ್ಲ. ಇವರಲ್ಲಿ ಅಮಾನತುಲ್ಲಾಹ್ ಖಾನ್ ಬಿಟ್ಟು ಉಳಿದವರೆಲ್ಲಾ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದವರಾಗಿದ್ದಾರೆ.
ಇನ್ನು ತಿಮರ್ ಪುರ್ ಶಾಸಕ ಪಂಕಜ್ ಪುಷ್ಕರ್ ಎಎಪಿಯಿಂದ ಉಚ್ಛಾಟನೆಗೊಂಡಿರುವ ಯೋಗೇಂದ್ರ ಯಾದವ್ ಗೆ ಆಪ್ತರಾಗಿದ್ದು ಅವರಿನ್ನೂ ಪಕ್ಷದಲ್ಲೇ ಒದ್ದಾರೆ. ಆದರೆ ಅವರನ್ನು ಪಕ್ಷದ ಕಾರ್ಯಕ್ರಮಗಳಿಂದ ಮಾತ್ರ ದೂರ ಇಡಲಾಗಿದೆ.
ವಿಶೇಷ ಎಂದರೆ ಅಮಾನತಾಗಿರುವ ಎಲ್ಲಾ ಶಾಸಕರು ವಿಧಾನಸಭೆಯಲ್ಲಿ ಮಾತ್ರ ಎಎಪಿ ನೀಡುವ ವಿಪ್ ಪಾಲಿಸಲೇಬೇಕಾಗಿದೆ. ಒಂದೊಮ್ಮೆ ವಿಪ್ ಉಲ್ಲಂಘಿಸಿದಲ್ಲಿ ಶಾಸಕ ಸ್ಥಾನವನನ್ನು ಅವರು ಕಳೆದುಕೊಳ್ಳಲಿದ್ದಾರೆ.
ಇನ್ನು ಸಂಸದರ ವಿರುದ್ಧವೂ ಎಎಪಿ ಇದೇ ರಣತಂತ್ರ ಬಳಸುತ್ತಿದೆ. ಪಂಜಾಬಿನಿಂದ ಆಯ್ಕೆಯಾಗಿರುವ ಇಬ್ಬರು ಸಂಸದರಾದ ಎಚ್.ಎಸ್. ಖಾಸ್ಲಾ ಮತ್ತು ಧರ್ಮವೀರ್ ಗಾಂಧಿಯನ್ನು ಯೋಗೇಂದ್ರ ಯಾದವ್ ನಿಕಟವರ್ತಿಗಳು ಎಂಬ ಕಾರಣಕ್ಕೆ ಪಕ್ಷದಿಂದ ಅಮಾನತು ಮಾಡಲಾಗಿದೆ. ಆದರೆ ಅವರೆಲ್ಲಾ ಎಎಪಿ ನಿಯಮಗಳನ್ನು ಲೋಕಸಭೆಯಲ್ಲಿ ಪಾಲಿಸುತ್ತಾರೆ.
ಇನ್ನು ಪಕ್ಷದ 20 ಶಾಸಕರು ಲಾಭ ದಾಯಕ ಹುದ್ದೆ ಪಡೆದ ಆರೋಪ ಎದುರಿಸುತ್ತಿದ್ದಾರೆ. ಒಂದೊಮ್ಮೆ ಇದು ಸಾಬೀತಾಗಿ 20ಶಾಸಕರು ಹುದ್ದೆ ಕಳೆದುಕೊಂಡಲ್ಲಿ ಎಎಪಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಶಾಸಕರನ್ನು ಅಮಾನತು ಮಾಡಿ ಸುಮ್ಮನಾಗಿದ್ದಾರೆ ಕೇಜ್ರಿವಾಲ್.