ನೋಟು ನಿಷೇಧ: ಬೆಟ್ಟವನ್ನು ಅಗೆದು ಇಲಿಯನ್ನು ಹಿಡಿದರೇ ಮೋದಿ?
ಪ್ರಧಾನಿ ಮೋದಿ ನವೆಂಬರ್ 8ರಂದು ಘೋಷಿಸಿದ್ದ ಐತಿಹಾಸಿಕ ನೋಟು ನಿಷೇಧದ ನಂತರ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸುವುದಾದರೆ, ಇಲಿಯನ್ನೇನೋ ಹಿಡಿದಿದ್ದಾರೆ, ಹೆಗ್ಗಣಗಳನ್ನು ಹಿಡಿಯುವುದೆಂತು ಎನ್ನುವ ಪ್ರಶ್ನೆ ಮೂಡುತ್ತದೆ.
ಅಪನಗದೀಕರಣದ ಬಗ್ಗೆ ವಾಟ್ಸಾಪ್ ನಲ್ಲಿ ಹೀಗೊಂದು ಮೆಸೇಜ್ ಬಂದಿತ್ತು, "To hunt crocodiles, the pond was dried. No crocodiles were found because they can live on land too. But all the small fishes died".
ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ ಎಂಟರಂದು ಘೋಷಿಸಿದ್ದ ಐತಿಹಾಸಿಕ ನೋಟು ನಿಷೇಧದ ನಂತರ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸುವುದಾದರೆ ಮೇಲಿನ ಸಂದೇಶ ವಸ್ತುಸ್ಥಿತಿಗೆ ಕನ್ನಡಿ ಹಿಡಿದಂತಿದೆ. (ಬಿಜೆಪಿ ಖಾತೆಯಲ್ಲಿ 5.65 ಲಕ್ಷ ಕೋಟಿ ಜಮೆ)
ದೇಶದ ಅಲ್ಲಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುತ್ತಿರುವುದು, ಹಳೇ ನೋಟನ್ನು ಸುಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದರೂ, ಈ ಕ್ಷಣಕ್ಕೆ ವರದಿ ಮಾಡುವುದಾದರೆ ನೋಟು ನಿಷೇಧದ ನಿಜವಾದ ಬಿಸಿತಟ್ಟುತ್ತಿರುವುದು ಜನಸಾಮಾನ್ಯರಿಗೆ, ಬೀದಿ ವ್ಯಾಪಾರಿಗಳಿಗೇ ಹೊರತು ಮೋದಿ 'ದಂಡಿಸಲು' ಬಯಸಿದ ಕಾಳಧನಿಕರಿಗಲ್ಲ.
ಸರಕಾರ ಚಾಪೆಯ ಕೆಳಗೆ ನುಗ್ಗಿದರೆ, ಕಪ್ಪುಹಣ ಹೊಂದಿರುವವರು ರಂಗೋಲಿ ಕೆಳಗೆ ನುಗ್ಗುತ್ತಲೇ ಇದ್ದಾರೆ. ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳು ಕಮಿಷನ್ ಆಧಾರದಲ್ಲಿ ಎಗ್ಗಿಲ್ಲದೇ ಆನ್ ದಿ ಟೇಬಲ್ ಸೆಟಲ್ ಆಗುತ್ತಲೇ ಇವೆ. ಸರಕಾರ ಎಚ್ಚೆತ್ತುಕೊಳ್ಳುವುದು ಯಾವಾಗ?
ಕೆಲವೊಂದು ಬ್ಯಾಂಕ್ ಅಧಿಕಾರಿಗಳು ಕಪ್ಪುಹಣ ವೈಟ್ ಮಾಡಿಕೊಳ್ಳಲು ಸಹಾಯ ಮಾಡುತ್ತಿರುವ ಹಿನ್ನಲೆಯಲ್ಲಿ ದೇಶದ ಇಡೀ ಬ್ಯಾಂಕಿಂಗ್ ವ್ಯವಸ್ಥೆ ಇಂತಹ ಹಣಪಿಪಾಸು ಆಫೀಸರ್ ಗಳಿಂದ ತಲೆತಗ್ಗಿಸುವಂತಾಗಿದೆ. ಮೋದಿ ಸರಕಾರ ಬಿಗಿಹಿಡಿತ ಸಾಧಿಸಬೇಕಾಗಿರುವುದು ಇಲ್ಲೇ..
ತಾನೊಂದು ಬಗೆದರೆ ಬೇರೆಯೇ ಬಗೆಯುವವರು ನಮ್ಮ ದೇಶದಲ್ಲಿ ಬೇಕಾದಷ್ಟಿದ್ದಾರೆ ಎನ್ನುವ ಸಿಂಪಲ್ 'ಅರ್ಥಶಾಸ್ತ್ರ'ದ ಪೂರ್ವ ತಯಾರಿ ನಡೆಸದೇ ಮೋದಿ ಆತುರಾತುರವಾಗಿ ನೋಟು ನಿಷೇಧಗೊಳಿಸಿ, ಜನಸಾಮಾನ್ಯರನ್ನು ಕ್ಯೂನಲ್ಲೇ ದಿನದೂಡುವಂತೆ ಮಾಡಿದರು ಎನ್ನುವ ಮಾತು ಸಾರ್ವಜನಿಕರಲ್ಲಿ ಬರಲಾರಂಭಿಸಿದೆ ಎಂದರೆ ಅದು ಮೋದಿ ಸರಕಾರಕ್ಕೆ ಎಚ್ಚರಿಕೆ ಗಂಟೆಯೇ ಸರಿ. ಮುಂದೆ ಓದಿ..
ಈಗಿನ ಪರಿಸ್ಥಿತಿಯೇ ಬೇರೆ
ಪ್ರಧಾನಿ ನೋಟು ನಿಷೇಧದ ಘೋಷಣೆ ಮಾಡಿದ ಒಂದು ವಾರದ ಅವಧಿಯಲ್ಲಿದ್ದ ಸ್ಥಿತಿಯೇ ಬೇರೆ, 35 ದಿನದ ನಂತರ ಈಗಿನ ಪರಿಸ್ಥಿತಿಯೇ ಬೇರೆ. ತಮ್ಮಲ್ಲಿರುವ ಹಳೇ ನೋಟಿಗೆ ಹೊಸ ದಾರಿ ಹುಡುಕುತ್ತಲೇ ಇರುವ ಕಾಳಧನಿಕರಿಂದಾಗಿ 'ಮೋದಿ ಉದ್ದೇಶ ಸಾರ್ಥಕತೆಯ ಕಡೆ'ಸಾಗುತ್ತಿದೆಯೇ ಎಂದು ಜನಸಾಮಾನ್ಯರು ಅನುಮಾನಿಸುವಂತಾಗಿದೆ. ಯಾಕೆಂದರೆ ಅವರು ಅನುಭವಿಸುತ್ತಿರುವ ನೋವು, ತೊಂದರೆ..
ಪ್ರಳಯಾಂತಕರು
ಹಳೇ ನೋಟಿನ ಅವಧಿ ಮುಗಿಯುಲು ಗಡುವು ಹತ್ತಿರ ಬರತ್ತಿದ್ದಂತೇ, ಹೊಸ ನೋಟಿಗೆ ಬದಲಾಯಿಸಲು ದಳ್ಳಾಳಿಗಳು ಪಡೆಯುತ್ತಿದ್ದ ಕಮಿಷನ್ ನೂರಕ್ಕೆ ಶೇ. 25 ರಿಂದ 30 ಇದ್ದದ್ದು, ಶೇ. 10 ರಿಂದ 15ಕ್ಕೆ ಇಳಿದಿದೆ. ಈಗಲೂ ಕೋಟಿ ಕೋಟಿ ರೂಪಾಯಿ ಹಳೆಯ ನೋಟು ಹೊಸ ನೋಟಿಗೆ ಬದಲಾವಣೆಗೊಳ್ಳುತ್ತಿದೆ.
ಆರ್ಬಿಐನಿಂದ ಹಣ
ದೇಶದ ಎಲ್ಲಾ ಬ್ಯಾಂಕಿನ ಶಾಖೆಗಳು 'ಕರೆನ್ಸಿ ಚೆಸ್ಟ್' ಪದ್ದತಿ ಮೂಲಕ ತಮ್ಮ ಶಾಖೆಗೆ ಬೇಕಾಗುವ ಹಣಕ್ಕೆ ರಿಸರ್ವ ಬ್ಯಾಂಕಿಗೆ ಇಂಡೆಂಟ್ ಸಲ್ಲಿಸಬೇಕು. ಆರ್ಬಿಐ, ಟ್ರೆಷರಿಯಲ್ಲಿ ಲಭ್ಯವಿರುವ ಹಣ ಹೊಂದಿಸಿ ಕರೆನ್ಸಿ ಚೆಸ್ಟ್ ಮೂಲಕವೇ ಅಯಾಯ ಬ್ರಾಂಚುಗಳಿಗೆ ಹಣ ಹೊಂದಿಸುತ್ತದೆ. ಆದರೆ, ಕರೆನ್ಸಿ ಚೆಸ್ಟ್ ನಿಂದ ಬ್ಯಾಂಕಿನ ಶಾಖೆಗಳಿಗೆ ಬಿಡುಗಡೆಗೊಂಡ ಹಣ ಏನಿದೆಯೋ ಅಷ್ಟೇ ಮೊತ್ತ ಶಾಖೆಗೆ ಜಮಾ ಆಗುತ್ತದೋ, ಇಲ್ಲೇ ಕಾಳಧನಿಕರು ವ್ಯವಹಾರ ಕುದುರಿಸುತ್ತಾರೋ ಎನ್ನುವುದೇ ಅನುಮಾನ.
ಕ್ಯಾಷ್ ಲೆಸ್ ವ್ಯವಹಾರ
ಕೇಂದ್ರ ಸರಕಾರ ಬಯಸಿರುವ ಕ್ಯಾಷ್ ಲೆಸ್ ವ್ಯವಹಾರ ಮುಂದೊಂದು ದಿನಕ್ಕೆ ಉಪಯೋಗಕ್ಕೆ ಬರುತ್ತದೆ ಎನ್ನುವ ಆಶಾವಾದ ಇಟ್ಟುಕೊಳ್ಳಬಹುದಾದರೂ, ಹೆಚ್ಚಿನ ವ್ಯವಹಾರ ಕ್ಯಾಷ್ ನಲ್ಲೇ ನಡೆಯುವ ಭಾರತದಂತಹ ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಸದ್ಯದ ಮಟ್ಟಿಗೆ ಇದು ಸಾಧ್ಯವೇ? ಎಲ್ಲರೂ ಕಾರ್ಡ್ ಸ್ವೈಪಿಂಗ್ ಮಿಷನ್ ಇಟ್ಟುಕೊಳ್ಳಲು ಆಗುತ್ತಾ, ದಿನಗೂಲಿ ವ್ಯಾಪಾರಸ್ಥರನ್ನೂ ಒಮ್ಮೆ ನೋಡಿ ಸ್ವಾಮಿ..
ಪ್ರಧಾನಿ ಭರವಸೆ
ಐವತ್ತು ದಿನಗಳಲ್ಲಿ ಎಲ್ಲಾ ಸರಿದಾರಿಗೆ ಬರುತ್ತಿದೆ ಎಂದು ಪ್ರಧಾನಿ ಭರವಸೆ ನೀಡಿದ್ದರೂ, ಕಾಳಧನಿಕರಿಗೆ ಶಿಕ್ಷೆಯಾಗದೇ ಇದ್ದಲ್ಲಿ ನೋಟು ನಿಷೇಧಿಸಿ ಮೋದಿ ಏನು ಸಾಧಿಸಿದಂತಾಯಿತು? ಇಂತವರಿಗೆ ಸಹಾಯ ಮಾಡುತ್ತಿರುವ ಅಧಿಕಾರಿಗಳಿಗೆ ಬಿಸಿಮುಟ್ಟಿಸದೇ ಇದ್ದಲ್ಲಿ ಜನಸಾಮಾನ್ಯರ ಬವಣೆ ಮುಂದುವರಿಯುತ್ತಲೇ ಇರುತ್ತದೆ ಅಲ್ಲವೇ? ತಮ್ಮ ಹಣಕ್ಕಾಗಿ ಕ್ಯೂನಲ್ಲಿ ನಿಂತುಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುತ್ತಿರುವ ಜನರ ಸಮಯಕ್ಕೆ ಬೆಲೆ ಕಟ್ಟಿಕೊಡುವವರು ಯಾರು? ಇದು ಜನರು, ಬೀದಿ ತಳ್ಳುಗಾಡಿ ವ್ಯಾಪಾರಿಗಳು ಆಡುತ್ತಿರುವ ಮಾತು.
ಬೆಟ್ಟ ಅಗೆದು ಇಲಿ ತೆಗೆದ ಪಿಎಂ
ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ದಾಳಿ ನಡೆಯುತ್ತಿದ್ದರೂ, ದೇಶದಲ್ಲಿ ನಡೆಯುತ್ತಿರುವ ಬ್ಲ್ಯಾಕ್ ಎಂಡ್ ವೈಟ್ ದಂಧೆಯ ಮುಂದೆ ಇದು ನಗಣ್ಯ. ನೋಟು ನಿಷೇಧದ ನಂತರದ ಈ 35ದಿನಗಳ ವಸ್ತುಸ್ಥಿತಿಯನ್ನು ಅವಲೋಕಿಸುವುದಾದರೆ ಮೋದಿಯ ನಿರ್ಧಾರ 'ಬೆಟ್ಟ ಅಗೆದು ಇಲಿ ತೆಗೆದಂತಾಗಿದೆ' ಎಂದರೆ ಯಾರೂ ಬೇಸರಿಕೊಳ್ಳಬಾರದು.