ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯವೂ ಉದ್ಧಾರವಾಗಲ್ಲ: ಮೋದಿ
ಇಂಫಾಲ್, ಫೆಬ್ರವರಿ 25: ಮಣಿಪುರದಲ್ಲಿ ಕಾಂಗ್ರೆಸ್ ಸರಕಾರ ಹದಿನೈದು ವರ್ಷದಿಂದ ನಡೆಸಿದ ಭ್ರಷ್ಟಾಚಾರವನ್ನು ನಾವು ಬಯಲು ಮಾಡುತ್ತೇವೆ. ಇಲ್ಲಿ ಸಾಕ್ಷಷ್ಟು ಭ್ರಷ್ಟಾಚಾರ ಹಗರಣಗಳು ನಡೆದಿವೆ. ಅವುಗಳನ್ನು ನಾವು ಜನರ ಮುಂದಿಡುತ್ತೇವೆ. ಮಣಿಪುರದ ಬೀದಿಬೀದಿಗಳಲ್ಲಿ ಮಕ್ಕಳು ಕೂಡ ಹೇಳ್ತಾರೆ: ಮುಖ್ಯಮಂತ್ರಿ ಒಕ್ರಾಂ ಇಬೋಬಿ ಸಿಂಗ್ ಸುಳ್ಳು ಹೇಳಿದ್ದಾರೆ ಅಂತ ಎಂದು ಮಣಿಪುರದ ರಾಜಧಾನಿ ಇಂಫಾಲದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮೋದಿ ಹೇಳಿದರು.
ನೀವು ಎಲ್ಲಾದರೂ 10 ಪರ್ಸೆಂಟ್ ಸಿಎಂ ಅಂತ ಕೇಳಿದ್ದೀರಾ? ಈ ದೇಶದ ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿಯ ಪರ್ಸಂಟೇಜ್ ಬಗ್ಗೆ ಜನ ಮಾತನಾಡಲ್ಲ. ಅದು ಶೂನ್ಯ ಪರ್ಸೆಂಟ್ ಆಗಬೇಕು. ನಿಮಗಿಲ್ಲಿ ಆಯ್ಕೆಗೆ ಅವಕಾಶ ಇದೆ. ನಿಮಗೆ ಹತ್ತು ಪರ್ಸೆಂಟ್ ಮುಖ್ಯಮಂತ್ರಿ ಬೇಕೋ ಅಥವಾ ನೂರು ಪರ್ಸೆಂಟ್ ಅಭಿವೃದ್ಧಿ ಮಾಡೋ ವ್ಯಕ್ತಿ ಬೇಕೋ ಎಂದು ಮೋದಿ ಪ್ರಶ್ನಿಸಿದರು.[ಬಿಜೆಪಿಗೆ ಪ್ಲಸ್ ಆಗಲಿವೆ ಉಪ್ರ ನಾಲ್ಕನೇ ಹಂತದ ಮತದಾನ ಕ್ಷೇತ್ರಗಳು]
ನಾಗಾ ಶಾಂತಿ ಒಪ್ಪಂದದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಏಕೆ ಈ ವಿಚಾರದಲ್ಲಿ ಮೌನವಾಗಿದೆ ಎಂದರು. ಇದಕ್ಕೆ ಒಂದೂವರೆ ವರ್ಷದ ಹಿಂದೆಯೇ ಸಹಿ ಬಿದ್ದಿದೆ. ಆಗ ಅವರೇನಾದರೂ ನಿದ್ದೆ ಮಾಡುತ್ತಿದ್ದರಾ? ಈಗ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅಣ್ಣ-ತಮ್ಮಂದಿರ ಮಧ್ಯೆ ಕಾಂಗ್ರೆಸ್ ಹೊಡೆದಾಟ ತಂದಿಡುತ್ತಿದೆ. ಯಾರಿಗೆ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲವೋ ಅವರಿಗೆ ಆಡಳಿತ ನಡೆಸುವ ಹಕ್ಕೂ ಇಲ್ಲ ಎಂದು ಹೇಳಿದರು.
ಈಶಾನ್ಯ ರಾಜ್ಯಗಳ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಪೂರ್ಣವಲ್ಲ
ಈಶಾನ್ಯ ರಾಜ್ಯಗಳ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಪೂರ್ಣವಾಗೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಣಿಪುರದ ರಾಜಧಾನಿ ಇಂಫಾಲದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿದರು. ಕಳೆದ ಹದಿನೈದು ವರ್ಷಗಳಿಂದ ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಏನಾದರೂ ಅಭಿವೃದ್ಧಿ ಕಾರ್ಯ ಆಗಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಯಾವುದೇ ಕೆಲಸ ಮಾಡಿಲ್ಲ
ಕಾಂಗ್ರೆಸ್ ಯಾವುದೇ ಕೆಲಸ ಮಾಡಿಲ್ಲ ಮತ್ತು ರಾಜ್ಯದ ಅಭಿವೃದ್ಧಿಯನ್ನೂ ಮಾಡಿಲ್ಲ. ಅವರು ಈ ಸ್ಥಾನದಲ್ಲಿ ಇರೋದಿಕ್ಕೆ ಅರ್ಹರಾ ಎಂದು ಮೋದಿ ಪ್ರಶ್ನಿಸಿದರು. ಕಾಂಗ್ರೆಸ್ ನವರು ಮಣಿಪುರದಲ್ಲಿ ಹದಿನೈದು ವರ್ಷದಿಂದ ಏನು ಮಾಡುವುದಕ್ಕೆ ಸಾಧ್ಯವಾಗಿಲ್ಲವೋ ನಾವದನ್ನು ಮಾಡಿ ತೋರಿಸುತ್ತೇವೆ ಎಂದು ಅವರು ಹೇಳಿದರು.
ಜನರಿಂದ ತುಂಬಿಹೋಗಿದೆ
ನಾನು ಕಳೆದ ಬಾರಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಇಲ್ಲಿಗೆ ಬಂದಿದ್ದೆ. ಇದೇ ಸ್ಥಳದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಈ ಮೈದಾನ ಅರ್ಧದಷ್ಟು ಮಾತ್ರ ಭರ್ತಿಯಾಗಿತ್ತು. ಈ ಸಲ ಜನರಿಂದ ತುಂಬಿಹೋಗಿದೆ ಎಂದು ಅವರು ಹೇಳಿದರು.
ಬಿಜೆಪಿಗೆ ಒಂದು ಅವಕಾಶ ಕೊಡಿ
ತನ್ನ ರಾಜಕೀಯ ಲಾಭಕ್ಕೋಸ್ಕರ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಕಾಂಗ್ರೆಸ್ ಎತ್ತಿಕಟ್ಟುತ್ತಿದೆ. ಮಣಿಪುರಕ್ಕೆ ಸೇವೆ ಸಲ್ಲಿಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಕಾಂಗ್ರೆಸ್ ಗೆ 15 ವರ್ಷ ಅವಕಾಶ ಕೊಟ್ಟಿದ್ದೀರಿ. ನಮಗೆ ಐದು ವರ್ಷ ಅವಕಾಶ ನೀಡಿ. ಮಣಿಪುರವನ್ನು ಅಭಿವೃದ್ಧಿಪಡಿಸುತ್ತೇವೆ ಎಂದರು.
ಕಾಂಗ್ರೆಸ್ ಇರುವ ಕಡೆ ಅಭಿವೃದ್ಧಿ ಹಿನ್ನಡೆ
ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರದಲ್ಲಿ ಇದೆಯೋ ಅಲ್ಲೆಲ್ಲ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಯುವಕರು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ. ಮಣಿಪುರದ ಯುವಜನ ಅದ್ಭುತಗಳನ್ನು ಮಾಡಬಲ್ಲರು. ಅವರು ಮಿಂಚಲು ನಾವು ಅವಕಾಶ ನೀಡಬೇಕಷ್ಟೆ. ಮಣಿಪುರದ ಜನರ ಒಗ್ಗಟ್ಟು, ಅಭಿವೃದ್ಧಿ ಮತ್ತು ಕಲ್ಯಾಣ ನಮ್ಮ ಗುರಿ ಎಂದು ಮೋದಿ ಹೇಳಿದರು.
ಮೊರಾರ್ಜಿ ದೇಸಾಯಿ ಬಂದಿದ್ದರು
ಕಳೆದ ನಲವತ್ತು ವರ್ಷಗಳಿಂದ ಈಶಾನ್ಯ ರಾಜ್ಯಗಳ ಕೌನ್ಸಿಲ್ ಚುನಾವಣೆ ಸಭೆಗೆ ಯಾವುದೇ ಪ್ರಧಾನಿ ಬಂದಿಲ್ಲ. ಮೊರಾರ್ಜಿ ದೇಸಾಯಿ ಅವರ ನಂತರ ಇಲ್ಲಿಗೆ ಬಂದಿದ್ದೇನೆ. ವಾಜಪೇಯಿ ಅವರು ಈಶಾನ್ಯ ರಾಜ್ಯಗಳಿಗಾಗಿ ಸಾಕಷ್ಟು ನೀತಿಗಳನ್ನು ತಂದರು. ಆದರೆ ಯಾವ ಒಳ್ಳೆ ಕೆಲಸವನ್ನೂ ಕಾಂಗ್ರೆಸ್ ಮುಂದುವರಿಸಲಿಲ್ಲ ಎಂದು ಮೋದಿ ಆರೋಪಿಸಿದರು.