ಏಳು ಜನರ ಹತ್ಯೆಗೆ ಕಾರಣವಾದ ವಾಟ್ಸಾಪ್ ಸುಳ್ಳುಸುದ್ದಿ
ವಾಟ್ಸಾಪ್ ಎಂಬುದು ಅತ್ಯುತ್ತಮ ಸಂಪರ್ಕ ಸಾಧನವೇನೋ ಆಗಿದೆ. ಹಲವಾರು ಉತ್ತಮ ಸಂಗತಿಗಳನ್ನು ವಿನಿಮಯ ಮಾಡಿಕೊಳ್ಳಲು, ಸ್ನೇಹಿತರನ್ನು ಸಂಪಾದಿಸಲು, ಬಂಧ ಬೆಸೆಯಲು ಅನುಕೂಲವಾಗಿದೆ. ಜೊತೆಗೆ, ಇಂತಹ ಅನಾಹುತಗಳಿಗೂ ಕಾರಣವಾಗುತ್ತಿದೆ.
ರಾಂಚಿ, ಮೇ 22 : ವಾಟ್ಸಾಪ್ ನಲ್ಲಿ ಬಂದಿದ್ದೆಲ್ಲ ನಿಜ ಎಂದು ನಂಬಿದರೆ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಜಾರ್ಖಂಡ್ ನ ಸಿಂಗಭಮ್ ಜಿಲ್ಲೆಯಲ್ಲಿ ಭೀಕರ ಘಟನೆಯೇ ಸಾಕ್ಷಿ. ಈ ನಿಟ್ಟಿನಲ್ಲಿ ವಾಟ್ಸಾಪನ್ನು ನಿಷೇಧಿಸಬೇಕಾ ಎಂಬ ಚಿಂತನೆ ನಡೆಸುವ ಅಗತ್ಯವಿದೆ.
ಯುವಕರ ಗ್ಯಾಂಗ್ ಮಕ್ಕಳ ಅಪಹರಣ ನಡೆಸುತ್ತಿದೆ ಎಂದು ವಾಟ್ಸಾಪಿನಲ್ಲಿ ಮಿಂಚಿನ ವೇಗದಲ್ಲಿ ಸುದ್ದಿ ಹಬ್ಬಿದ ಪರಿಣಾಮ, ಅನಾಮತ್ ಏಳು ಹೆಣಗಳು ಉರುಳಿವೆ. ಇದು ವಾಟ್ಸಾಪಿನಲ್ಲಿ ಹಬ್ಬಿರುವ ಸುಳ್ಳು ಸುದ್ದಿ ಎಂದು ಅರಿವಿಗೆ ಬರುವ ಹೊತ್ತಿಗೆ ಅನಾಹುತ ನಡೆದುಹೋಗಿತ್ತು.[22 ವರ್ಷ ಹಿಂದೆ ಶಾಸಕನ ಹತ್ಯೆ, RJD ಮಾಜಿ ಸಂಸದನಿಗೆ ಜೈಲು]
ನಾಗದಿಹ್ ಗ್ರಾಮದಲ್ಲಿ ಮೂವರನ್ನು ಸಾರ್ವಜನಿಕರು ಕೋಲಿನಿಂದ ಹೊಡೆದು ಸಾಯಿಸಿದ್ದರೆ, ಶೋಭಾಪುರ ಮತ್ತು ಸೋಸೋಮೌಳಿ ಗ್ರಾಮದಲ್ಲಿ ನಾಲ್ವರನ್ನು ಜನರು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಯುವಕರ ಸಂಬಂಧಿಕರ ಮೇಲೆಯೂ ಮಾರಣಾಂತಿಕ ಹಲ್ಲೆಗಳಾಗಿವೆ.
ಮಕ್ಕಳನ್ನು ಕಿಡ್ನಾಪ್ ಮಾಡುವ ತಂಡವೊಂದು ಹುಟ್ಟಿಕೊಂಡಿದೆ. ಆ ತಂಡ ಮಕ್ಕಳನ್ನು ಅಪಹರಿಸಿ ಅವರ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ವಾಟ್ಸಾಪಿನಲ್ಲಿ ಹಬ್ಬಿದ್ದೇ ಸಮಾಜವೇ ತಲೆತಗ್ಗಿಸುವಂಥ ಹೇಯ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಮೋದಿ ಬಗ್ಗೆ ಅವಹೇಳನ, ವಾಟ್ಸಪ್ ಗ್ರೂಪ್ ಅಡ್ಮಿನ್ ಅಂದರ್]
ಒಂದು ಘಟನೆಯಲ್ಲಂತೂ ಓರ್ವ ಪೊಲೀಸ್ ಆ ಸ್ಥಳದಲ್ಲಿದ್ದು ಕೊಲೆಗಳಾಗುವುದನ್ನು ತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಂತಕರು ಭಾರೀ ಸಂಖ್ಯೆಯಲ್ಲಿದ್ದರಿಂದ ಪೊಲೀಸನಿಗೆ ಏನೂ ಮಾಡಲಾಗಿಲ್ಲ. ಮೂಕಪ್ರೇಕ್ಷಕನಂತೆ ಆತ ಈ ದುರ್ಘಟನೆಯನ್ನು ನೋಡುತ್ತ ನಿಲ್ಲಬೇಕಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಈಗಾಗಲೆ ಬಂಧಿಸಲಾಗಿದೆ. ಇನ್ನೂ ಹಲವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಮೂಲ ವಾಟ್ಸಾಪ್ ಸಂದೇಶ ಕಳಿಸಿದವರಾರೆಂದು ಸೈಬರ್ ಕ್ರೈಂ ಪೊಲೀಸರು ಹುಡುಕುತ್ತಿದ್ದಾರೆ.
ವಾಟ್ಸಾಪ್ ಎಂಬುದು ಅತ್ಯುತ್ತಮ ಸಂಪರ್ಕ ಸಾಧನವೇನೋ ಆಗಿದೆ. ಹಲವಾರು ಉತ್ತಮ ಸಂಗತಿಗಳನ್ನು ವಿನಿಮಯ ಮಾಡಿಕೊಳ್ಳಲು, ಸ್ನೇಹಿತರನ್ನು ಸಂಪಾದಿಸಲು, ಬಂಧ ಬೆಸೆಯಲು ಅನುಕೂಲವಾಗಿದೆ. ಜೊತೆಗೆ, ಇಂತಹ ಅನಾಹುತಗಳಿಗೂ ಕಾರಣವಾಗುತ್ತಿದೆ. ವಾಟ್ಸಾಪಿನಲ್ಲಿಯೇ ಯುವಕ ಯುವತಿಯರು ಸಾಕಷ್ಟು ಸಮಯ ಕಳೆಯುತ್ತಿದ್ದಾರೆ.
{promotion-urls}