ರಾಹುಲ್ ನಾಯಕತ್ವದ ಮೇಲೆ ಕಾರ್ಮೋಡದ ಕರಿನೆರಳು!
ನವದೆಹಲಿ, ಫೆಬ್ರವರಿ 26 : ಉತ್ತರಪ್ರದೇಶಕ್ಕೆ ಇನ್ನೂ ಮೂರು ಹಂತಗಳ ಮತದಾನ ಬಾಕಿಯಿದ್ದು, ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ಸಿನಲ್ಲಿ ಮತ್ತೊಂದು ರೀತಿಯ ಕಳವಳ, ದುಗುಡ ಆರಂಭವಾಗಿದೆ.
ಸಮಾಜವಾದಿ ಪಕ್ಷದೊಡನೆ ಕೈಜೋಡಿಸಿರುವ ಕಾಂಗ್ರೆಸ್ ಉತ್ತರಪ್ರದೇಶ ಚುನಾವಣೆಯಲ್ಲಿಯೂ ಸೋತು ಸುಣ್ಣವಾದರೆ ಗತಿಯೇನು? ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಅಧಿನಾಯಕನನ್ನಾಗಿ ಮುಂದುವರಿಸಬೇಕೆ? ಅಥವಾ ಮತ್ತಾರಿಗಾದರೂ ಚುಕ್ಕಾಣಿಯನ್ನು ನೀಡಬೇಕೆ? ಎಂಬುದು. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ.[ಉತ್ತರಪ್ರದೇಶ ಚುನಾವಣೆ ಫಲಿತಾಂಶ: ಮೋದಿ ಬಗ್ಗೆ ರಾಹುಲ್ ನುಡಿದ ಭವಿಷ್ಯ]
2014ರ ಚುನಾವಣೆಯಲ್ಲಿ 543 ಸೀಟುಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಅಂಗಪಕ್ಷಗಳು ಗೆದ್ದಿದ್ದು ಕೇವಲ 44 ಸೀಟುಗಳು ಮಾತ್ರ. ತದನಂತರದಲ್ಲಿ ಕಾಂಗ್ರೆಸ್ ಚುನಾವಣೆಗಳಲ್ಲಿ, ಅದರಲ್ಲೂ ರಾಹುಲ್ ನಾಯಕತ್ವದಲ್ಲಿ ಅಂತಹ ಮಹತ್ತರ ಬದಲಾವಣೆಯನ್ನೇನೂ ಕಂಡಿಲ್ಲ.
ಇದೀಗ ಮುಕ್ತಾಯವಾಗಿರುವ ಮುಂಬೈ ಮತ್ತು ಓರಿಸ್ಸಾದ ಸ್ಥಳೀಯ ಚುನಾವಣೆಯಲ್ಲಿ ಕೂಡ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಮತದಾರರಿಗೆ ಮತ್ತೆ ಮುಖ ತೋರಿಸದಂತಾಗಿದೆ. ಇದಾಗ ಬಳಿಕ ಉದ್ಭವವಾದ ಪ್ರಶ್ನೆಯೇ, ಐದು ರಾಜ್ಯಗಳ ಚುನಾವಣೆಯಲ್ಲೂ ಇದೇ ಫಲಿತಾಂಶ ಬಂದರೆ ಮುಂದೇನು?[ಮೀರತ್ ನಲ್ಲಿ ರಾಹುಲ್, ಅಖಿಲೇಶ್ ಬೃಹತ್ ಪ್ರಚಾರ]
ಇಂತಹ ಅನುಮಾನಗಳು ಎದುರಾಗಲು, ಸಂದಿಗ್ಧತೆ ಎದುರಾಗಲು ಹಲವಾರು ಕಾರಣಗಳಿವೆ.
ನಾಯಕನೆಂದು ಮುಖಂಡರೇ ಒಪ್ಪಿಕೊಳ್ಳುತ್ತಿಲ್ಲ
ರಾಹುಲ್ ಗಾಂಧಿಯವರನ್ನು ಮೇಲುಸ್ತರದ ನಾಯಕನೆಂದು ಮತದಾರರು ಗುರುತಿಸುವುದಿರಲಿ, ಆ ಪಕ್ಷದ ಹಲವು ಮುಖಂಡರು ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚೆಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರೇ, ರಾಹುಲ್ ಅವರು ಪ್ರಬುದ್ಧರಾಗಲು ಇನ್ನೂ ಸಮಯ ಬೇಕು ಎಂದು ಹೇಳಿ, ರಾಹುಲ್ ಭಕ್ತರ ಕಣ್ಣುಗಳ ನಿಗಿನಿಗಿ ಕೆಂಪಾಗುವಂತೆ ಮಾಡಿದ್ದಾರೆ.
ಅಪಸ್ವರ ಹಾಡಲು ಶುರುಮಾಡಿದ್ದಾರೆ
ಕೆಲ ಕಾಂಗ್ರೆಸ್ ನಾಯಕರು ಈಗಾಗಲೆ ರಾಹುಲ್ ನಾಯಕತ್ವದ ಬಗ್ಗೆ ಅಪಸ್ವರ ಹಾಡಲು ಶುರುಮಾಡಿಕೊಂಡಿದ್ದಾರೆ. ಧೈರ್ಯವಾಗಿ ಮಾತನಾಡಲು ಯಾರಿಗೂ ಧೈರ್ಯವಿಲ್ಲದಿದ್ದರೂ, ಅಲ್ಲಲ್ಲಿ ಅವರಿವರೊಂದಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕುತ್ತಿದ್ದಾರೆ. ರಾಹುಲ್ ನಾಯಕತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಎಲ್ಲಿಯವರೆಗೆ ಮುಂದುವರಿಯಲಿದೆ?
ಏನು ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ
2014ರ ಚುನಾವಣೆಯಲ್ಲಿ ಪಾತಾಳ ಕಂಡಮೇಲೆ ಕಾಂಗ್ರೆಸ್ಸಿಗೆ ಮರುಜೀವ ಕೊಡುವ ರೀತಿಯಲ್ಲಿ ರಾಹುಲ್ ಗಾಂಧಿ ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ, ಯುವಜನತೆಯನ್ನು ಭೇಟಿ ಮಾಡುತ್ತಿದ್ದಾರೆ, ಚುನಾವಣೆಯ ಮುಂದಾಳತ್ವ ವಹಿಸುತ್ತಿದ್ದಾರೆ, ಕಾಂಗ್ರೆಸ್ಸನ್ನು ಮತ್ತೆ ಕಟ್ಟಲು ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಆದರೆ, ಫಲಿತಾಂಶ?
ರಾಹುಲ್ ಮಾತುಗಳು ಅಪಹಾಸ್ಯಕ್ಕೀಡಾಗುತ್ತಿವೆ
ಇದು ಬಹಳಷ್ಟು ನಾಯಕರನ್ನು ಕಂಗೆಡುವಂತೆ ಮಾಡಿದೆ. ಸಾಲದೆಂಬಂತೆ, ಭಾಷಣ ಮಾಡುವಾಗಲೆಲ್ಲ ರಾಹುಲ್ ಗಾಂಧಿ ಅವರಾಡುತ್ತಿರುವ ಮಾತುಗಳು ಅಪಹಾಸ್ಯಕ್ಕೀಡಾಗುತ್ತಿವೆ. ಸಂಸತ್ತಿನಲ್ಲಿ ಅವರಾಡಿದ 'ಭೂಕಂಪ'ದ ಮಾತು ಒಂದು ಕ್ಲಾಸಿಕ್ ಉದಾಹರಣೆ. ಅವರ ಮಾತುಗಳು ಅವರಿಗೇ ತಿರುಗುಬಾಣವಾಗುತ್ತಿವೆ. ನರೇಂದ್ರ ಮೋದಿ ಅವರನ್ನು ಕುರಿತು ಅವರು ಮಾಡುತ್ತಿರುವ ವಾಗ್ದಾಳಿಗಳನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಸ್ಟ್ರಾಟಜಿಯಾಗಲಿ, ಗೇಮ್ ಪ್ಲಾನ್ ಆಗಲಿ ಇಲ್ಲ
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ನಿಖರವಾದ ಸ್ಟ್ರಾಟಜಿಯಾಗಲಿ, ಗೇಮ್ ಪ್ಲಾನ್ ಆಗಲಿ ಇಲ್ಲದಿರುವುದೇ ಅಧಃಪತನಕ್ಕೆ ಕಾರಣ ಎಂಬ ಮಾತುಗಳು ಕೆಲ ಹಿರಿಯರ ಬಾಯಲ್ಲಿ ಕೇಳಿಬರುತ್ತಿವೆ. ರಾಹುಲ್ ಅವರನ್ನು ನಾಯಕರನ್ನಾಗಿಯೇನೋ ಬಿಂಬಿಸಲಾಗಿದೆ. ಆದರೆ, ಅವರಲ್ಲಿ ನಾಯಕತ್ವದ ಗುಣಗಳ ಕೊರತೆಯಿರುವುದೇ ಕಾಂಗ್ರೆಸ್ಸಿಗೆ ಕೊರತೆಯಾಗಿದೆ. ರಾಹುಲ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದರೆ ಸುಧಾರಣೆ ಕಾಣಬಹುದು ಎಂದು ಕೂಡ ಕೆಲವರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.
ಮುಂಚೂಣಿಗೆ ಬರ್ತಾರಾ ಪ್ರಿಯಾಂಕಾ ಗಾಂಧಿ ವದ್ರಾ
ಕೊನೆಗೆ ಎಲ್ಲರ ಗಮನ ಹರಿಯುವುದು ರಾಹುಲ್ ಅವರ ಅಕ್ಕ ಪ್ರಿಯಾಂಕಾ ಗಾಂಧಿ ವದ್ರಾ ಕಡೆಗೆ. ಮಾತುಗಾರಿಕೆಯಲ್ಲಿ, ನಿರ್ಣಯ ತೆಗೆದುಕೊಳ್ಳುವಲ್ಲಿ, ಸ್ಟ್ರಾಟಜಿ ರೂಪಿಸುವಲ್ಲಿ, ದಾಳ ಉರುಳಿಸುವಲ್ಲಿ, ಜನತೆಯನ್ನು ಆಕರ್ಷಿಸುವಲ್ಲಿ, ಉಳಿದ ನಾಯಕರ ವಿಶ್ವಾಸವನ್ನು ಗಳಿಸುವಲ್ಲಿ ರಾಹುಲ್ ಗಿಂತ ಪ್ರಿಯಾಂಕಾ ಸಾಕಷ್ಟು ಮುಂದಿದ್ದಾರೆ ಎಂಬ ಮಾತನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಇಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೆ?