ಇಸ್ರೇಲ್ಗಿಂತ ನಾವು ಯಾವುದರಲ್ಲೂ ಕಮ್ಮಿಯಿಲ್ಲ : ಮೋದಿ
ಮಂಡಿ (ಹಿಮಾಚಲಪ್ರದೇಶ), ಅಕ್ಟೋಬರ್ 18 : "ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮೊದಲು ಇಸ್ರೇಲನ್ನು ಕೊಂಡಾಡುತ್ತಿದ್ದರು. ಈಗ ಇಡೀ ವಿಶ್ವವೇ ಭಾರತೀಯ ಸೇನೆಯ ಬಗ್ಗೆ ಮಾತನಾಡುತ್ತಿದೆ. ನಾವು ಯಾರಿಗಿಂತಲೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದೇವೆ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ.
ಮುಂದಿನ ವರ್ಷ ಚುನಾವಣೆಗೆ ಸಿದ್ಧವಾಗಿರುವ ಹಿಮಾಚಲಪ್ರದೇಶದಲ್ಲಿ ಮೂರು ಹೈಡ್ರೋ ಪ್ರಾಜೆಕ್ಟುಗಳನ್ನು ಮಂಗಳವಾರ ಉದ್ಘಾಟಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರನ್ನು ಸದೆಬಡಿದ ಭಾರತೀಯ ಸೇನೆಯನ್ನು ಮತ್ತೊಮ್ಮೆ ಕೊಂಡಾಡಿದರು. [ಅಗತ್ಯಬಿದ್ದರೆ ಮತ್ತೆ ಸರ್ಜಿಕಲ್ ದಾಳಿ: ಸೇನೆ ಸ್ಪಷ್ಟನೆ]
"ನಮ್ಮ ಸೈನಿಕರ ಶೌರ್ಯವನ್ನು ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಮಾಡಿ ವಿರೋಧಿಗಳನ್ನು ಇಸ್ರೇಲ್ ದಮನ ಮಾಡಿದ ಬಗ್ಗೆ ಕೇಳುತ್ತಿದ್ದೆವು. ನಮ್ಮ ಭಾರತೀಯ ಸೇನೆ ಕೂಡ ಇಂಥ ದಾಳಿ ನಡೆಸಲು ಶಕ್ತವಾಗಿದೆ ಎಂದು ಸಾಬೀತುಪಡಿಸಿದೆ" ಎಂದು ಅವರು ಅಭಿಮಾನದ ಸುರಿಮಳೆಗರೆದರು.
ಆದರೆ, ಕೇಂದ್ರ ಸರಕಾರದ ಈ ನಡೆ ವಿರೋಧಿಗಳಿಂದ ತೀವ್ರ ಟೀಕೆಗೊಳಗಾಗಿತ್ತು. ಸರ್ಜಿಕಲ್ ಸ್ಟ್ರೈಕ್ ಮಾಡಿದ್ದ ಶ್ರೇಯವನ್ನು ಕೇಂದ್ರ ಸರಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದನ್ನು ತಿರಸ್ಕರಿಸಿದ್ದ ಬಿಜೆಪಿ, ಭಾರತೀಯ ಸೇನೆಯ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಲು ಪ್ರಚಾರ ಮಾಡುತ್ತಿದೆ ಎಂದು ತಿರುಗೇಟು ನೀಡಿತ್ತು. ['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]