ಮಲ್ಯ ಪಲಾಯನ: ಮೋದಿ ಸರ್ಕಾರಕ್ಕೆ ಕಾಂಗ್ರೆಸ್ 'ಪಂಚ್' ಪ್ರಶ್ನೆ
ನವದೆಹಲಿ, ಮಾರ್ಚ್ , 14: ಸಾಲ ಮಾಡಿ ಮರೆಯಾಗಿರುವ ಮಲ್ಯ ಪ್ರಕರಣ ಸಂಸತ್ ಕಲಾಪಗಳಲ್ಲಿ ಪ್ರತಿಧ್ವನಿ ಮಾಡುತ್ತಿದೆ. ನರೇಂದ್ರ ಮೋದಿ ಸರ್ಕಾರದ ನೋತಿಯನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಪ್ರಶ್ನೆಗಳ ಸರಮಾಲೆಯನ್ನು ಮುಂದೆ ಇಟ್ಟಿದೆ.
9 ಸಾವಿರ ಕೋಟಿ ಸಾಲ ಪಡೆದು ಟ್ವಿಟ್ಟರ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರವ ಮಲ್ಯ ಅವರನ್ನು ದೇಶದ ಜನರ ಎದುರು ಹಾಜರುಪಡಿಸಿ ಎಂದು ಕಾಂಗ್ರೆಸ್ ಸವಾಲು ಎಸೆದಿದೆ. ವಿಜಯ್ ಮಲ್ಯ ಕೆಲ ದಿನಗಳ ಹಿಂದೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದೆ.[ನನ್ನನ್ನು ಹುಡುಕಲು ನಿಮ್ಮ ಬಳಿ ಆಗಲ್ಲ: ಮಲ್ಯ ಸವಾಲು]
ಟ್ವಿಟ್ಟರ್ ಮೂಲಕ ನಾನು ಸದ್ಯ ಭಾರತಕ್ಕೆ ವಾಪಸ್ ಆಗುವುದಿಲ್ಲ, ಮಾಧ್ಯಮಗಳ ಬಳಿ ನನ್ನನ್ನು ಹುಡುಕಲು ಸಾಧ್ಯವಿಲ್ಲ ಎಂದು ಮಲ್ಯ ಸವಾಲು ಎಸೆಯುತ್ತಿದ್ದಾರೆ. ಇತ್ತ ಆಡಳಿತ ಪಕ್ಷವೇ ಮಲ್ಯ ಪಲಾಯನ ಮಾಡಲು ಕಾರಣವಾಗಿದೆ ಎಂಬ ಆರೋಪವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಮಲ್ಯಗೆ ಸಂಬಂಧಿಸಿ ಮೋದಿ ಸರ್ಕಾರಕ್ಕೆ ಪಂಚ ಪ್ರಶ್ನೆಗಳನ್ನು ಎಸೆದಿದ್ದಾರೆ.
ಪ್ರಶ್ನೆ 1: ಇಂಗ್ಲೆಂಡ್ ಮೇಲೆ ಒತ್ತಡ ಹಾಕುತ್ತೀರಾ?
ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವ ಕೆಲಸ ಬದಿಗಿಡಿ. ಸಾಲ ಮಾಡಿ ಮರೆಯಾಗಿರುವ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿಯನ್ನು ಹಿಂದಕ್ಕೆ ಕರೆಸಲು ಇಂಗ್ಲೆಂಡ್ ಸರ್ಕಾರದ ಮೇಲೆ ಒತ್ತಡ ಹಾಕುತ್ತೀರಾ?
ಪ್ರಶ್ನೆ 2: ಮಾಹಿತಿ ನೀಡಿದ್ದರೆ?
ವಿಜಯ್ ಮಲ್ಯ ವಿದೇಶಕ್ಕೆ ತೆರಳುವ ಮುನ್ನ ಮಾರ್ಚ್ 1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದರು. ಈ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತೆ? ಅರುಣ್ ಜೇಟ್ಲಿ ಅವರು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆಯೇ?
ಪ್ರಶ್ನೆ 3: ಸಂಸತ್ ಗೆ ಗೊತ್ತೆ
ರಾಜ್ಯಸಭಾ ಸದಸ್ಯರು ಆಗಿರುವ ವಿಜಯ್ ಮಲ್ಯ ದೇಶ ತೊರೆಯುವ ಸುದ್ದಿ ಸಂಸತ್ ಗೆ ಗೊತ್ತಿತ್ತೆ? ಅಥವಾ ಅದನ್ನು ಯಾರಾದರೂ ಬಹಿರಂಗ ಪಡಿಸಿದ್ದರೆ?
ಪ್ರಶ್ನೆ 4: ನೋಟಿಸ್ ಗೆ ಅರ್ಥವಿದೆಯೇ?
ಮಲ್ಯ ಅವರನ್ನು ಬಂಧನಕ್ಕೊಳಪಡಿಸುವಂತೆ ಸಿಬಿಐ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ನಂತರ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿತ್ತು. ಹೈದರಾಬಾದ್ ನ್ಯಾಯಾಲಯ ಕೂಡ ಜಾಮೀನು ರಹಿತ ಬಂಧನ ವಾರೆಂಟ್ ನ್ನು ಜಾರಿ ಮಾಡಿದೆ, ಮಲ್ಯ ಯಾವಾಗ ಹಿಂದಕ್ಕೆ ಬರುತ್ತಾರೆ ಎನ್ನುವುದೇ ಗೊತ್ತಿಲ್ಲ ಅಂದ ಮೇಲೆ ನೋಟಿಸ್ ಗಳಿಗೆ ಅರ್ಥವಿದೆಯೇ?
ಪ್ರಶ್ನೆ5: ಹಣ ಹೇಗೆ ವಸೂಲಿ ಮಾಡ್ತಿರಿ?
ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಸದ್ಯ ಡಿಯಾಜಿಯೋ ಒಡೆತನದಲ್ಲಿದೆ. ವಿಜಯ್ ಮಲ್ಯ ಅವರೊಂದಿಗೆ ಮಾಡಿಕೊಂಡಿದ್ದ ರು.515 ಕೋಟಿ ಒಪ್ಪಂದದಲ್ಲಿ ಕಂಪನಿ ಈಗಾಗಲೇ ಶೇ.75 ಹಣ ಪಾವತಿ ಮಾಡಿದೆ. ಅಂದ ಮೇಲೆ ಆ ಹಣದ ಮೇಲೆ ಇವರು ಹೇಗೆ ಹಕ್ಕು ಸಾಧಿಸುತ್ತಾರೆ?