ಮಲ್ಯಜೀ, ವಾರದೊಳಗೆ ಉತ್ರ ಕೊಡಿ, ಇಲ್ಲಾ ಬಂಧನ ಮಾಡ್ತೇವೆ
ನವದೆಹಲಿ, ಏಪ್ರಿಲ್, 16: ಸಾಲ ಮರುಪಾವತಿ ಬಗ್ಗೆ ಸ್ಪಷ್ಟ ಉತ್ತರ ನೀಡಲು ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಕೇವಲ ಇನ್ನು ಒಂದು ವಾರದ ಅವಕಾಶ ಮಾತ್ರ ಇದೆ. ಶುಕ್ರವಾರ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅಮಾನತು ಮಾಡಲಾಗಿತ್ತು. ವಾರದೊಳಗೆ ಉತ್ತರ ನೀಡದಿದ್ದರೆ ಮಲ್ಯ ಅವರನ್ನು ಬಂಧನ ಮಾಡಲಾಗುತ್ತದೆ.
ಮಲ್ಯ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ವಿದೇಶಾಂಗ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಂದು ವಾರದಲ್ಲಿ ಮಲ್ಯ ಸೂಕ್ತವಾಗಿ ಪ್ರತಿಕ್ರಿಯೆ ನೀಡಬೇಕು. ಅದಾದ ಮೇಲೆ ಅವರ ಪಾಸ್ ಪೋರ್ಟ್ ಅಮಾನತು ಬಗ್ಗೆ ಪುನರ್ ವಿಮರ್ಶೆ ಮಾಡಲು ಸಾಧ್ಯ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.[ಉದ್ಯಮಿ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅಮಾನತು]
ಐಡಿಬಿಐ ಸಾಲಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ನೀಡುವ ತೀರ್ಪನ್ನು ಸಹ ಕೇಂದ್ರ ಸರ್ಕಾರ ಎದುರು ನೋಡುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]
ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಹಾರಿರುವ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಕ್ಯಾರೆ ಅನ್ನದ ಮಲ್ಯ ಕಾಲಾವಕಾಶ ಕೇಳುತ್ತ ಬಂದಿದ್ದರು. ಆದರೆ ಅಂತಿಮವಾಗಿ ಬ್ಯಾಂಕ್ ಗಳ ಒಕ್ಕೂಟ ತೀವ್ರ ಒತ್ತಡ ತಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.