ರಾಮ್ ರಹೀಮ್ ಸಿಂಗ್ ತೀರ್ಪು ಹಿನ್ನಲೆ, ಚಂಡೀಗಢದಲ್ಲಿ ಭಿಗಿ ಭದ್ರತೆ
ಚಂಡೀಗಢ, ಆಗಸ್ಟ್ 24: ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ. ಈ ಹಿನ್ನಲೆಯಲ್ಲಿ ಚಂಡೀಗಢ ಹಾಗೂ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಯುವರಾಜ್ ಸಿಂಗ್ ಆಡಿದ್ದ ಮೈದಾನ ತಾತ್ಕಾಲಿಕ ಜೈಲಾಗುತ್ತಿದೆ
ಪಂಚಕುಲಾದಲ್ಲಿರುವ ಸಿಬಿಐ ನ್ಯಾಯಾಲಯ ವಿಚಾರಣೆ ಮುಗಿಸಿದ್ದು ತೀರ್ಪನ್ನು ಆಗಸ್ಟ್ 25 ಶುಕ್ರವಾರಕ್ಕೆ ಕಾಯ್ದಿರಿಸಿದೆ. ಶುಕ್ರವಾರ ತೀರ್ಪಿನ ವೇಳೆ ಹಾಜರಿರುವಂತೆ ಗುರ್ಮೀತ್ ರಾಮ್ ರಹೀಂ ಸಿಂಗ್ ರಿಗೆ ನ್ಯಾಯಾಲಯ ಸೂಚಿಸಿದೆ.
ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ದೇರಾ ಸಚ್ಚಾ ಸೌದಾ ಹಿಂಬಾಲಕರು ಜಮಾವಣೆಗೊಳ್ಳಲು ಆರಂಭಿಸಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 5000 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಪಂಜಾಬ್ ಮತ್ತು ಹರ್ಯಾಣ ರಾಜಧಾನಿ ಚಂಡೀಗಢಕ್ಕೆ ಕರೆಸಿಕೊಳ್ಳಲಾಗಿದೆ.
ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ ಎಂದು ಡಿಜಿಪಿ ತೇಜೇಂದರ್ ಸಿಂಗ್ ಲೂಥ್ರ ಹೇಳಿದ್ದಾರೆ.
ಈಗಾಗಲೇ ಸುಮಾರು 1 ಲಕ್ಷ ಜನ ದೇರಾ ಹಿಂಬಾಲಕರು ಚಂಡೀಗಢದ ಸೂಕ್ಷ್ಮ ಪ್ರದೇಶ ಪಂಚಕುಲಾದತ್ತ ಹೊರಟಿದ್ದಾರೆ ಎಂದು ಡಿಜಿಪಿ ತಿಳಿಸಿದ್ದು ಈ ಕಾರಣಕ್ಕೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ತೀರ್ಪು ಬರುವ ವೇಳೆ ಇಲ್ಲಿ ಸುಮಾರು 15-20 ಲಕ್ಷ ಬಂದು ಸೇರಬಹುದು ಎಂದು ಸ್ವತಃ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಈಗಾಗಲೇ ಚಂಡೀಗಢ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಏನಿದು ಪ್ರಕರಣ?
ಚಂಡೀಗಢದಿಂದ ಸುಮಾರು 260 ಕಿಲೋಮೀಟರ್ ದೂರದಲ್ಲಿರುವ ಸಿರ್ಸಾದ ದೇರಾದಲ್ಲಿ ಗುರ್ಮಿತ್ ರಾಮ್ ರಹೀಂ ಸಿಂಗ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣ ಇದಾಗಿದೆ. ಈ ಸಂಬಂಧ ಸಿಬಿಐ 2002ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. 2008ರ ಸುಮಾರಿಗೆ ಇದರ ವಿಚಾರಣೆ ಆರಂಭವಾಗಿತ್ತು.
ಇದೀಗ ವಿಚಾರಣೆ ಮುಗಿದಿದ್ದು ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಲಾಗಿದೆ.