ಉತ್ಕಲ್ ರೈಲು ದುರಂತ: 4ಅಧಿಕಾರಿಗಳ ಅಮಾನತು, 4 ಜನರಿಗೆ ಶಿಕ್ಷೆ
ಮುಜಾಫರ್ ನಗರ, ಆಗಸ್ಟ್ 21: ಶನಿವಾರ ರಾತ್ರಿ ಸಂಭವಿಸಿದ ಉತ್ಕಲ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ನಡವಳಿಕೆ ತೋರಿದ 8 ಅಧಿಕಾರಿಗಳಿಗೆ ರೈಲ್ವೇ ಇಲಾಖೆ ತಕ್ಕ ಶಿಕ್ಷೆ ನೀಡಿದೆ.
ರೈಲ್ವೇ ಅಧಿಕಾರಿಗಳ ಬೇಜವಾಬ್ದಾರಿಗೆ 23 ಜೀವಗಳು ಬಲಿ
ಉತ್ಕಲ್ ರೈಲು ದುರಂತದಲ್ಲಿ 22ಮಂದಿ ಸಾವಿಗೀಡಾಗಿ 156 ಜನ ಗಾಯಗೊಂಡಿದ್ದರು.
ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಲು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಈ ಕುರಿತು ರೈಲ್ವೇ ಸಂಚಾರ ಮಂಡಳಿಯ ಸದಸ್ಯ ಮೊಹಮ್ಮದ್ ಜೆಮ್ಶೆಡ್ ಭಾನುವಾರ ವರದಿ ನೀಡಿದ್ದರು. ಇದರಲ್ಲಿ 8 ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಘಟನೆ ಸಂಭವಿಸಿರುವುದಾಗಿ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವರದಿ ನೀಡದ ಒಂದು ಗಂಟೆಯೊಳಗೆ ರೈಲ್ವೇ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.
ರೈಲ್ವೆ ಇಲಾಖೆಯ ಕಾರ್ಯದರ್ಶಿ ದರ್ಜೆಯ ಮೂವರು ಹಿರಿಯ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿಲಾಗಿದೆ. ಇನ್ನು ನಾಲ್ವರನ್ನು ಕೆಲಸದಿಂದ ಅಮಾನತು ಮಾಡಿದ್ದು ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ.
ಮಂಡಳಿಯ ಸದಸ್ಯ ಮತ್ತು ಎಂಜಿನಿಯರ್ ಆದಿತ್ಯ ಕುಮಾರ್ ಮಿತ್ತಲ್, ಉತ್ತರ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಕುಲಶ್ರೇಷ್ಠ ಮತ್ತು ದೆಹಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎನ್.ಸಿಂಗ್ ರನ್ನು ರಜೆಯ ಮೇಲೆ ಕಳುಹಿಸಲಾಗಿದೆ.
ದೆಹಲಿಯ ಹಿರಿಯ ವಿಭಾಗೀಯ ಎಂಜಿನಿಯರ್ ಆರ್. ಕೆ. ವರ್ಮಾ, ಮೀರತ್ ಸಹಾಯಕ ಎಂಜಿನಿಯರ್ ರೋಹಿತ್ ಕುಮಾರ್, ಮುಜಾಫರ್ ನಗರದ ಹಿರಿಯ ವಿಭಾಗೀಯ ಎಂಜಿನಿಯರ್ ಇಂದರ್ ಜೀತ್ ಸಿಂಗ್, ಖಟೌಲಿ ಕಿರಿಯ ಎಂಜಿನಿಯರ್ ಪ್ರದೀಪ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ.
ಮುಖ್ಯ ಟ್ರಾಕ್ ಎಂಜಿನಿಯರ್ ಅಲೋಕ್ ಅನ್ಸಲ್ ರನ್ನು ವರ್ಗ ಮಾಡಿರುವುದಾಗಿ ರೈಲ್ವೇ ಸಚಿವಾಲಯ ಹೇಳಿದೆ.