ರೈನ್ ಕೋಟ್ ಹಾಕ್ಕೊಂಡು ಸ್ನಾನ ಮಾಡೋದು ಸಿಂಗ್ ಗೆ ಗೊತ್ತು: ಮೋದಿ
ಅಪನಗದೀಕರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ.
ನವದೆಹಲಿ, ಫೆಬ್ರವರಿ 8: ರೈನ್ ಕೋಟ್ ಹಾಕಿಕೊಂಡು ಮೈಗೆ ಒಂದು ಚೂರೂ ನೀರು ತಾಗದಂತೆ ಸ್ನಾನ ಮಾಡವುದು ಹೇಗೆಂಬುದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿಂತ ಚೆನ್ನಾಗಿ ಬಲ್ಲವರು ಮತ್ಯಾರೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದರು.
ಪ್ರಸಕ್ತ ವರ್ಷದ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಾಡಿದ್ದ ಭಾಷಣಕ್ಕೆ ವಂದನಾ ನಿರ್ಣಯಕ್ಕಾಗಿ ಕರೆಯಲಾಗಿದ್ದ ಲೋಕಸಭೆಯ ಅಧಿವೇಶದಲ್ಲಿ ಮಾತನಾಡಿದ ಅವರು, ಅಪನಗದೀಕರಣದ ಹಿನ್ನೆಲೆಯಲ್ಲಿ ರಾಷ್ಟ್ರದ ಹಣಕಾಸು ಪರಿಸ್ಥಿತಿ ಹಿನ್ನೆಡೆ ಕಂಡಿದ್ದನ್ನು ವಿರೋಧಿಸಿ ಆರೋಪ ಮಾಡಿದ್ದ ಡಾ. ಮನಮೋಹನ್ ಸಿಂಗ್ ಹಾಗೂ ಇನ್ನಿತರ ಕಾಂಗ್ರೆಸ್ಸಿಗರ ವಿರುದ್ಧ ಅವರು ಹರಿಹಾಯ್ದರು.['ಕ್ಷಮೆ ಕೇಳೋ ತನಕ ಮೋದಿಯನ್ನು ಸಂಸತ್ ಪ್ರವೇಶಿಸಲು ಬಿಡೆವು']
ಅಪನಗದೀಕರಣದ ವಿರುದ್ಧ ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕರು ಅಪನಗದೀಕರಣವನ್ನು ವಿರೋಧ ಪಕ್ಷಗಳನ್ನು ಹಣಿಯಲು ಮಾಡಲಾದ ಷಡ್ಯಂತ್ರ ಎಂದು ಟೀಕಿಸಿದರೆ, ಇದಕ್ಕೆ ಜಾಣ್ಮೆಯ ಉತ್ತರ ನೀಡಿರುವ ಪ್ರಧಾನಿ ಮೋದಿ, ಅಪನಗದೀಕರಣದಿಂದ ನಿಮಗೆ ತೊಂದರೆಯಾಗಿದೆ ಎಂದರೆ ನಿಮ್ಮಲ್ಲಿ ದೋಷವಿದೆ ಎಂದರ್ಥ ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.
ಬುಧವಾರ ನಡೆದ ವಂದನಾ ನಿರ್ಣಯದ ವೇಳೆ, ಪ್ರಧಾನಿಯವರ ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ಸಿಗರು ಸಭಾತ್ಯಾಗ ಮಾಡಿದರು.
ಇತ್ತ, ತಮ್ಮ ಮಾತನ್ನು ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ಅಪನಗದೀಕರಣದ ವಿಚಾರದಲ್ಲಿ ಪ್ರತಿಪಕ್ಷಗಳು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ರಾಜಕೀಯಕ್ಕೆಳೆದು ತಂದಿದ್ದನ್ನು ಆಕ್ಷೇಪಿಸಿದರು.
ಸಿಂಗ್ ವಿರುದ್ಧ ಟೀಕೆ ಏಕೆ?
ಇತ್ತೀಚೆಗಷ್ಟೇ, ಅಪನಗದೀಕರಣದಿಂದಾದ ಆರ್ಥಿಕ ಹಿನ್ನಡೆಗಳ ಬಗ್ಗೆ ಸಮಗ್ರ ವರದಿಯೊಂದನ್ನು ತಯಾರಿಸಿದ್ದ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸಮಿತಿಯು ಅದನ್ನು ಸಂಸತ್ತಿಗೆ ಸಲ್ಲಿಸಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಮನಮೋಹನ್ ಸಿಂಗ್, ಅವೈಜ್ಞಾನಿಕವಾದ ಅಪನಗದೀಕರಣದಿಂದ ಭಾರತೀಯ ಆರ್ಥಿಕತೆಗೆ ಭಾರೀ ಧಕ್ಕೆ ಉಂಟಾಗಿದೆ ಎಂದು ಟೀಕಿಸಿದ್ದರು.
ಸಿಂಗ್ ಅಧಿಕಾರಾವಧಿ ಟೀಕಿಸಿದ ಮೋದಿ
ಇದನ್ನು, ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ''ಡಾ. ಸಿಂಗ್ ಅವರು ಎರಡು ಅವಧಿಗೆ ಪ್ರಧಾನಿಯಾಗಿದ್ದಾಗ ಕೇಂದ್ರದಲ್ಲಿ ಬರೀ ಹಗರಣಗಳದ್ದೇ ಸದ್ದಾಗಿತ್ತು. ಕಲ್ಲಿದ್ದಲು ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ಹೆಲಿಕಾಪ್ಟರ್ ಹಗರಣ ಸೇರಿದಂತೆ ಹಲವಾರು ಹಗರಣಗಳಿಂದ ಸಾವಿರಾರು ಕೋಟಿ ರು.ಗಳು ಹಣವನ್ನು ಆಡಳಿತಗಾರರು, ಅಧಿಕಾರಿಗಳೇ ಲೂಟಿ ಹೊಡೆದಿದ್ದರು. ಆಗ ದೇಶದ ಆರ್ಥಿಕತೆಗೆ ಧಕ್ಕಯಾಗಲಿಲ್ಲವೇ'' ಎಂದು ಪ್ರಶ್ನಿಸಿದರು.
ಮುತ್ಸದ್ದಿಯನ್ನು ಛೇಡಿಸಿದ ಪ್ರಧಾನಿ
ಇಷ್ಟೆಲ್ಲಾ ಹಗರಣಗಳ ಕಂತೆಯನ್ನು ತಮ್ಮಲ್ಲಿಟ್ಟುಕೊಂಡಿರುವ ಅವರು, ಸಮಾಜದಲ್ಲಿ ಕಪ್ಪು ಹಣವನ್ನು ಮಟ್ಟಹಾಕಲು ಕೇಂದ್ರ ಸರ್ಕಾರವು ನಡೆಸಿದ ಹೋರಾಟವನ್ನು ಟೀಕಿಸುತ್ತಾರೆ. ಪ್ರಾಯಶಃ ರೈನ್ ಕೋಟ್ ಹಾಕಿಕೊಂಡು ನೀರು ಒಂದಿಷ್ಟೂ ಮೈಗೆ ಅಂಟಿಕೊಳ್ಳದಂತೆ ಸ್ನಾನ ಮಾಡುವುದು ಹೇಗೆಂದು ಕೇವಲ ಮನಮೋಹನ್ ಸಿಂಗ್ ಬಿಟ್ಟು ಮಿಕ್ಕವರಾರಿಗೂ ಗೊತ್ತಿಲ್ಲ ಎಂದು ಛೇಡಿಸಿದರು.
ಪ್ರಧಾನಿ ಮೋದಿ ಸ್ಪಷ್ಟನೆ
ಅಪನಗದೀಕರಣ ಅಸ್ತ್ರವು, ನಾವು (ಕೇಂದ್ರ) ಯಾವುದೇ ರಾಜಕೀಯ ಪಕ್ಷಗಳನ್ನು ಹಣಿಯಲು ಕೈಗೊಂಡ ಕ್ರಮವಲ್ಲ ಎಂದ ಪ್ರಧಾನಿ ಮೋದಿ, ಸಮಾಜದಲ್ಲಿ ಕಪ್ಪುಹಣವನ್ನು ಮಟ್ಟಹಾಕಿ, ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ದಿಟ್ಟ ನಿರ್ಧಾರ ಎಂದು ಅವರು ಹೇಳಿದರು.
ಪ್ರಧಾನಿ ಹೇಳಿಕೆ ಬಗ್ಗೆ ಬೇಸರ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟೀಕೆಯ ವಿರುದ್ಧ ಕಿಡಿಕಾರಿದ ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ''ಈವರೆಗೆ ಯಾವುದೇ ಪ್ರಧಾನಿ, ಮಾಜಿ ಪ್ರಧಾನಿಯನ್ನು ಇಷ್ಟು ಹೀನಾಯವಾಗಿ ಟೀಕಿಸಿರಲಿಲ್ಲ'' ಎಂದು ಬೇಸರಿಸಿದ್ದಾರೆ.
ಏನನ್ನೂ ಪ್ರತಿಕ್ರಿಯಿಸದ ಡಾ. ಸಿಂಗ್
ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಲು ಡಾ. ಮನಮೋಹನ್ ಸಿಂಗ್ ನಿರಾಕರಿಸಿದ್ದಾರೆ.
ಸಿಟ್ಟಿಗೆದ್ದ ಕಪಿಲ್ ಸಿಬಲ್
ಪ್ರಧಾನಿ ಮೋದಿಯವರ ಟೀಕೆಗೆ ಕಟು ಶಬ್ದಗಳಲ್ಲಿ ನಿಂದಿಸಿದ ಮಾಜಿ ಸಚಿವ ಕಪಿಲ್ ಸಿಬಲ್, ''ಅವರ (ಮೋದಿ) ಸೊಕ್ಕನ್ನು ನೋಡಿದಿರಾ... ಅಪನಗದೀಕರಣದ ಬಗ್ಗೆ ಚರ್ಚೆಗಳೆಲ್ಲವೂ ಮುಗಿಯುವ ಹಂತದಲ್ಲಿ ಬಂದ ಪ್ರತಿಪಕ್ಷಗಳನ್ನು ನಿಂದಿಸಲು ಅವರು ಶುರು ಮಾಡಿದ್ದಾರೆ'' ಎಂದು ಟೀಕಿಸಿದರು.