ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಡಿ.ಕೆ ಶಿವಕುಮಾರ್ ಮೇಲಿನ ಐಟಿ ರೈಡ್
ನವದೆಹಲಿ, ಆಗಸ್ಟ್ 2: ನಿರೀಕ್ಷೆಯಂತೆ ಡಿಕೆ ಶಿವಕುಮಾರ್ ಗುರಿಯಾಗಿಸಿ ನಡೆದ ಆದಾಯ ತೆರಿಗೆ ದಾಳಿ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹರಿಹಾಯ್ದಿದೆ.
ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : 10 ಬೆಳವಣಿಗೆ
ಅಧಿವೇಶನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಐಟಿ ದಾಳಿ ವಿಚಾರ ಪ್ರಸ್ತಾಪಿಸಿದರು. "ಅಧಿಕಾರ ದುರ್ಬಳಕೆ ಮಾಡುವುದು ಈಗ ಟ್ರೆಂಡ್ ಆಗುತ್ತಿದೆ," ಎಂದು ಕೇಂದ್ರ ಸರಕಾದ ವಿರುದ್ಧ ಕಿಡಿಕಾರಿದರು.
"ಸಚಿವರು ಮತ್ತು ಅವರ ಸಹೋದರರು ಗುಜರಾತ್ ಶಾಸಕರ ಮೇಲುಸ್ತುವಾರಿ ವಹಿಸಿದ್ದರು. ಈ ಕಾರಣಕ್ಕೆ ದಾಳಿ ನಡೆಸಲಾಗಿದೆ. ಇದೊಂದು ಪ್ರತೀಕಾರದ ದಾಳಿ," ಎಂದು ಹರಿಹಾಯ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಹಣಕಾಸು ಮತ್ತು ರಕ್ಷಣಾ ಸಚಿವ ಅರುಣ್ ಜೇಟ್ಲಿ, "ಡಿಕೆ ಶಿವಕುಮಾರ್ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ಯಾವುದೇ ಶಾಸಕರ ಮೇಲೆ ದಾಳಿ ನಡೆಸಲಾಗಿಲ್ಲ," ಎಂದು ಸ್ಪಷ್ಟನೆ ನೀಡಿದರು.
ಡಿಕೆ ಶಿವಕುಮಾರ್ ಸಂಕ್ಷಿಪ್ತ ಪರಿಚಯ
ನಂತರ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಕೊನೆಗೆ ಸತತ ಪ್ರಯತ್ನದ ನಂತರ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಈ ವೇಳೆ ಅವರು, "ಹಣ ಹಂಚುತ್ತಿರುವುದು ನಾವಲ್ಲ, ನೀವು ಬಿಜೆಪಿಯವರು. ಶಾಸಕರಿಗೆ 15 ಕೋಟಿ ಆಫರ್ ನೀಡಿದ ನಿಮ್ಮ ಶಾಸಕರ ಮೇಲೆ ದಾಳಿ ನಡೆಸಿ," ಎಂದು ಸವಾಲು ಹಾಕಿದರು.
ನಂತರ ಕಾಂಗ್ರೆಸ್ ಸದಸ್ಯರ ಸದನದ ಬಾವಿಗಿಳಿದು ಕೇಂದ್ರ ಸರಕಾರದವ ವಿರುದ್ಧ ಘೋಷಣೆ ಕೂಗಿದರು. ಕೊನೆಗೆ ಅನಿವಾರ್ಯವಾಗಿ ಸದನವನ್ನು ಸ್ಪೀಕರ್ 10 ನಿಮಿಷಗಳ ಕಾಲ ಮುಂದೂಡಲಾಯಿತು. ಆದರೆ ಮತ್ತೆ ಪುನಃ ಅಧಿವೇಶನ ಆರಂಭವಾದಾಗಲೂ ಗದ್ದಲ ನಿಲ್ಲದ ಹಿನ್ನಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಅಧಿವೇಶನವನ್ನು ಮುಂದೂಡಲಾಯಿತು.