ತಿವಾರಿ ಸಾವಿನ ಕೇಸ್, ಶೋಭಾ ಮನವಿ ಪುರಸ್ಕರಿಸಿದ ಸಿಎಂ ಯೋಗಿ
ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಅವರ ಸಾವಿನ ತನಿಖೆಯನ್ನು ವಿಶೇಷ ತನಿಖಾ ದಳ(ಎಸ್ಐಟಿ) ಕೈಗೆತ್ತಿಕೊಂಡಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ಲಕ್ನೋ, ಮೇ 19: ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಅವರ ಸಾವಿನ ತನಿಖೆಯನ್ನು ವಿಶೇಷ ತನಿಖಾ ದಳ(ಎಸ್ಐಟಿ) ಕೈಗೆತ್ತಿಕೊಂಡಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ಅನುರಾಗ್ ತಿವಾರಿ ಅವರ ಸಾವಿನ ತನಿಖೆ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಫೋನ್ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿದ ಯೋಗಿ ಅವರು ತನಿಖೆ ತೀವ್ರಗೊಳಿಸಲು ಸೂಚಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ಬೆಂಬಲವಿರುವ ಸಾವಿರಾರು ಕೋಟಿ ರುಪಾಯಿ ಹಗರಣ ಬಯಲಿಗೆಳೆಯಲು ಐಎಎಸ್ ಅಧಕಾರಿ ಅನುರಾಗ್ ತಿವಾರಿ ಸಜ್ಜಾಗಿದ್ದರು ಎಂದು ಉತ್ತರ ಪ್ರದೇಶ ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಗುರುವಾರ ವಿಧಾನಸಭೆಯಲ್ಲಿ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಕರ್ನಾಟಕ ಸರ್ಕಾರ ತಳ್ಳಿ ಹಾಕಿದೆ.[ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ, ತಿವಾರಿ ಸಾವಿಗೆ ಪ್ರತಾಪ್ ಕಂಬನಿ]
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜನನಿಬಿಡ ಹಜರಂತ್ ಗಂಜ್ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ರಸ್ತೆ ಬದಿ ಶವವಾಗಿ ಪತ್ತೆಯಾಗುತ್ತಾರೆ ಎಂದರೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ, ಕಲಾಪದಲ್ಲಿ ಭಾರಿ ಗದ್ದಲ ಉಂಟು ಮಾಡಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್ ಖನ್ನಾ, ತಿವಾರಿ ಅವರ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ 72 ಗಂಟೆಗಳಲ್ಲಿ ವಿಶೇಷ ತನಿಖಾ ದಳ ತನ್ನ ವರದಿಯನ್ನು ನೀಡಲಿದೆ ಎಂದರು.
2 ಸಾವಿರ ಕೋಟಿ ರೂ ಮೊತ್ತದ ಹಗರಣ
ಸುಮಾರು 2 ಸಾವಿರ ಕೋಟಿ ರೂ. ಮೊತ್ತದ ಹಗರಣವೊಂದನ್ನು ಬಯಲು ಮಾಡಲು ಅನುರಾಗ್ ಸಜ್ಜಾಗಿದ್ದರು. ಹೀಗಾಗಿ, ತಿವಾರಿಯನ್ನು ವ್ಯವಸ್ಥಿತವಾಗಿ ಹತ್ಯೆಗೈಯ್ಯಲಾಗಿದೆ ಎಂದು ಕುಟುಂಬ ವರ್ಗದವರು ಆರೋಪಿಸಿದೆ. ಆದರೆ, ಇದನ್ನು ಕರ್ನಾಟಕ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಇಂಥ ಯಾವುದೇ ಹಗರಣ ನಡೆದಿಲ್ಲ ಮತ್ತು ಅನುರಾಗ್ ಯಾವುದೇ ಹಗರಣವನ್ನು ಬಯಲಿಗೆ ಎಳೆದಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಷಪ್ರಾಶನ ಮಾಡಲಾಗಿತ್ತೆ?
ಕರ್ನಾಟಕ ರಾಜ್ಯ ಆಹಾರ ಇಲಾಖೆ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಮರಣೊತ್ತರ ಪರೀಕ್ಷೆಯಲ್ಲಿ ವಿಷಪ್ರಾಶನವಾಗಿದೆ ಎಂಬ ಮಾಹಿತಿ ಪತ್ತೆ ಆಗಿದೆ ಎಂಬ ಸುದ್ದಿ ಬಂದಿದೆ. ಆದರೆ, ಇನ್ನೂ ಅಟಾಪ್ಸಿ ವರದಿ ಬಂದಿಲ್ಲ ಎಂದು ಯುಪಿ ಪೊಲೀಸ್ ಅಧಿಕಾರಿ ಖನ್ನ ಹೇಳಿದ್ದಾರೆ. ತಿವಾರಿ ಅವರಿಗೆ ಮಾನಸಿಕ ಒತ್ತಡ ಇದ್ದಿದ್ದು ನಿಜ, ಕೌಟುಂಬಿಕ ಕಲಹದ ಜತೆಗೆ ವೃತ್ತಿ ಬದುಕಿನಲ್ಲಿ ಒತ್ತಡವಿತ್ತೇ ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ.
ಯುಪಿ ಮೂಲದ ತಿವಾರಿ
ಸುಮಾರು ಎಂಟು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಮದುವೆಯಾಗಿದ್ದ ತಿವಾರಿ ಅವರ ವೈವಾಹಿಕ ಬದುಕು ಸುಖಮಯವಾಗಿರಲಿಲ್ಲ. ಗಂಡ-ಹೆಂಡತಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆದರೆ, 36ನೇ ಹುಟ್ಟುಹಬ್ಬ ಆಚರಣೆಗೆ ಬಂದಿದ್ದ ತಿವಾರಿ ಅವರು, ಈ ವಿಷಯವಾಗಿ ಮನನೊಂದಿದ್ದರು. ಇದೇ ಸಾವಿಗೆ ಕಾರಣ ಎನ್ನಲಾಗದು ಎಂದು ಆಪ್ತರು ಹೇಳಿದ್ದಾರೆ.
ತಿವಾರಿ ಜೀವಕ್ಕೆ ಅಪಾಯವಿತ್ತೆ
ನನ್ನ ಸೋದರ ತಿವಾರಿ ಜೀವಕ್ಕೆ ಅಪಾಯವಿತ್ತು. ಇದೇ ಕಾರಣಕ್ಕೆ ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ವರ್ಗಾವಣೆ ಬಯಸಿದ್ದರು. ಒಂದು ತಿಂಗಳು ರಜೆ ಕೇಳಿದರೆ ನಾಲ್ಕು ದಿನ ಮಾತ್ರ ರಜೆ ಸಿಕ್ಕಿತ್ತು. ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದ. ತಿವಾರಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ ನ್ಯಾಯ ಒದಗಿಸಿಕೊಡಿ ಎಂದು ಅನುರಾಗ್ ತಿವಾರಿ ಅವರ ಸೋದರ ಮಾಯಾಂಕ್ ಅವರು ಕಣ್ಣೀರಿಟ್ಟಿದ್ದಾರೆ. ಚಿತ್ರದಲ್ಲಿ : ತಿವಾರಿ ಅವರ ಉತ್ತರಪ್ರದೇಶದ ಮನೆ
ಯುಟಿ ಖಾದರ್ ಹೇಳಿಕೆ
ಅನುರಾಗ್ ತಿವಾರಿ ಮೇಲೆ ಸರ್ಕಾರದ ಯಾವುದೇ ಒತ್ತಡ ಇರಲಿಲ್ಲ. ಸಿಎಂ ಸಿದ್ದರಾಮಯ್ಯರ ಆಪ್ತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಹೆಚ್ಚುವರಿ ಆಯುಕ್ತರಾಗಿ, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ, ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅವರನ್ನು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅನುರಾಗ್ರನ್ನು ರಾಜ್ಯ ಸರ್ಕಾರ ಸರಿಯಾಗಿಯೇ ನೋಡಿಕೊಂಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
{promotion-urls}