'ಹುಲಿ' ಹೊಡೆಯಲು ಬಡಿಗೆ ಬಿಸಾಡಿ 'ಬಂದೂಕು' ಕೈಗೆತ್ತಿಕೊಂಡ ಮೋದಿ!
ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶ ಚುನಾವಣೆ ಪ್ರಚಾರದಲ್ಲಿ ದಿಢೀರನೆ ಮಾತಿನ ವರಸೆ ಬದಲಿಸಿದ್ದಾರೆ. ಇದರ ಹಿಂದಿನ ಲೆಕ್ಕಾಚಾರ ಏನು, ಹೀಗೆ ಮಾತನಾಡಿದ್ದರ ಹಿಂದಿನ ಕಾರಣ ಏನು ಎಂಬುದರ ವಿಶ್ಲೇಷಣೆ ಇಲ್ಲಿದೆ
ಲಖನೌ, ಫೆಬ್ರವರಿ 21: "ಹಳ್ಳಿಗಳಲ್ಲಿ ಖಬರಸ್ತಾನ್ ನಿರ್ಮಿಸುವುದಕ್ಕೆ ಆಗುತ್ತೆ ಅನ್ನೋದಾದರೆ ಸ್ಮಶಾನಕ್ಕೂ ಜಾಗ ಒದಗಿಸಿ. ರಂಜಾನ್ ನಲ್ಲಿ ನಿರಂತರ ವಿದ್ಯುತ್ ಪೂರೈಸುವುದಕ್ಕೆ ಆಗುತ್ತೆ ಅಂದರೆ, ದೀಪಾವಳಿಯಲ್ಲೂ ಪೂರೈಸಿ. ಯಾವುದೇ ಭೇದ-ಭಾವ ಮಾಡಬೇಡಿ" -ಇದು ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳು.
ಇಷ್ಟು ದಿನ ಈ ಪರಿಯ ದಾಳಿ ಮಾಡದ ಮೋದಿ ಅವರಲ್ಲಿ ದಿಢೀರನೆ ಬದಲಾವಣೆ ಕಾಣಲು ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವರ ಅಭಿಪ್ರಾಯದ ಪ್ರಕಾರ ಬಿಜೆಪಿ ರಣತಂತ್ರದಲ್ಲಿ ಬದಲಾವಣೆ ಮಾಡಿಕೊಂಡಿದೆ. ಸಮಾಜವಾದಿ ಪಕ್ಷವು ಅಲ್ಪಸಂಖ್ಯಾತರ ಪರವಾದ ನಿಲುವು ತಳೆದಿರುವುದನ್ನು ಬೊಟ್ಟು ಮಾಡಿ ತೋರಿಸುವುದು ಈ ಮಾತಿನ ಗುರಿ.[ಶೇಮ್ ! ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅಸಂವಿಧಾನಿಕ ಪದ ಪ್ರಯೋಗ]
ಇದರಿಂದ ಎದುರಾಳಿಯ ವಿರುದ್ಧ ಪ್ರತಿತಂತ್ರ ಹೆಣೆಯಲು ನೆರವಾಗುತ್ತದೆ ಎಂಬುದು ತಜ್ಞರ ಅಭಿಮತ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೂರು ಹಂತದ ಮತದಾನ ಮುಗಿದಿದೆ. ಅದರೆ ಯಾರ ಗೆಲ್ಲಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹಲವರ ಪ್ರಕಾರ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.
ಉತ್ತರಪ್ರದೇಶದಲ್ಲಿ ದೊಡ್ಡ ಗೆಲುವಿನ ಕನಸು ಕಾಣುತ್ತಿರುವ ಬಿಜೆಪಿಗೆ ಇಂಥ ಹೇಳಿಕೆಗಳು ಸಹಾಯ ಮಾಡುತ್ತವೆ. ಮೇಲ್ಜಾತಿ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇದರ ಜೊತೆಗೆ ಯಾದವರ ಹಾಗೂ ಹಿಂದುಳಿದ ವರ್ಗದವರ ಮತಗಳನ್ನು ಕೂಡ ಒಟ್ಟುಹಾಕುತ್ತಿದೆ. ಈ ರೀತಿ ಹೇಳಿಕೆಗಳು ಉತ್ತರಪ್ರದೇಶದಲ್ಲಿ ಹಿಂದೂಗಳಿಗೆ ಮೆಚ್ಚುಗೆ ಆಗುತ್ತದೆ. ಇನ್ನು ಎಲ್ಲ ಜಾತಿಗಳನ್ನು ಹಿಂದೂ ಎಂಬ ಒಂದು ಛತ್ತರಿ ಕೆಳಗೆ ತರಲು ಅನುಕೂಲ ಆಗುತ್ತದೆ.[ಮುಸ್ಲಿಮರ ಖಬರಸ್ತಾನ್ ಗೆ ಜಾಗ, ಆದ್ರೆ ಹಿಂದೂಗಳ ಸ್ಮಶಾನಕ್ಕೇಕಿಲ್ಲ?: ಮೋದಿ]
ಮುಂದಿನ ನಾಲ್ಕು ಹಂತದ ಮತದಾನ ಬಹಳ ಪ್ರಮುಖವಾದದ್ದು. ಮೊದಲ ಮೂರು ಹಂತದ ಮತದಾನದ ವೇಳೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯಾಯಿತು. ಇನ್ನು ಮುಂದಿನ ನಾಲ್ಕು ಹಂತದಲ್ಲಿ ಮಧ್ಯ ಯುಪಿ, ಪೂರ್ವಾಂಚಲ್ ನ ಮತದಾರರು ಮುಖ್ಯ ಪಾತ್ರ ವಹಿಸುತ್ತಾರೆ.
ಪೂರ್ವಾಂಚಲ್ ನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಅತಿ ಹೆಚ್ಚು ನತ ಪಡೆಯುವ ಸಲುವಾಗಿ ಎಸ್ ಪಿ-ಕಾಂಗ್ರೆಸ್ ಮೈತ್ರಿ ಕೂಟ ಹಾಗೂ ಬಿಎಸ್ ಪಿ ಯತ್ನಿಸುತ್ತಿವೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಅತಿ ಹೆಚ್ಚು ಹಿಂದೂ ಮತಗಳನ್ನು ಸೆಳೆಯುವುದು ಈಗ ಬಿಜೆಪಿಗೆ ತುಂಬ ಮುಖ್ಯ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೆ ಪ್ರಧಾನಿ ನರೇಂದ್ರ ಮೋದಿ ಖಬರಸ್ತಾನದ ಹೇಳಿಕೆ ನೀಡಿದ್ದಾರೆ.