ಉತ್ತರಪ್ರದೇಶ ಚುನಾವಣಾ ಪ್ರಚಾರ: ಅಡ್ವಾಣಿ, ಜೋಷಿಗೆ ಹಿನ್ನಡೆ
ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಉತ್ತರ ಪ್ರದೇಶ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಚಾರಕರ ಪಟ್ಟಿಯಿಂದ ಪಕ್ಷದ ಹಿರಿಯ ಮುಖಂಡರಾದ ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿ ಅವರ ಹೆಸರನ್ನು ಕೈಬಿಡಲಾಗಿದೆ.
ನವದೆಹಲಿ, ಜ 22 (ಪಿಟಿಐ): ಬಹು ನಿರೀಕ್ಷಿತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಸ್ಟಾರ್ ಕ್ಯಾಂಪೇನರ್ (ತಾರಾ ಪ್ರಚಾರಕರು) ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಹಿರಿಯ ಮುಖಂಡರಿಬ್ಬರನ್ನು ಮತ್ತೆ ಕಡೆಗಣಿಸಲಾಗಿದೆ.
ಅಪನಗದೀಕರಣದ ನಂತರ ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಉತ್ತರ ಪ್ರದೇಶ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಚಾರಕರ ಪಟ್ಟಿಯಿಂದ ಪಕ್ಷದ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿ ಅವರ ಹೆಸರನ್ನು ಕೈಬಿಡಲಾಗಿದೆ. (ಎಸ್ ಪಿ-ಕಾಂಗ್ರೆಸ್ ಮಧ್ಯೆ ಸೀಟು ಹಂಚಿಕೆ ಚೌಕಾಶಿ)
ಇನ್ನೊಂದು ಆಶ್ಚರ್ಯಕರ ನಿರ್ಧಾರದಲ್ಲಿ ಫೈರ್ ಬ್ರಾಂಡ್ ಖ್ಯಾತಿಯ, ಸಂಸದ ವರುಣ್ ಗಾಂಧಿ ಹೆಸರು ಕೂಡಾ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲದೇ ಇರುವುದು. ಉತ್ತರಪ್ರದೇಶದ ಸಿಎಂ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ವರುಣ್ ಹೆಸರು ಕೂಡಾ ಕೇಳಿ ಬರುತ್ತಿತ್ತು.
ಜೊತೆಗೆ, ರಾಮ ಮಂದಿರ ನಿರ್ಮಾಣದ ಚಳುವಳಿಯಲ್ಲಿ ಮಂಚೂಣಿಯಲ್ಲಿ ಕೇಳಿ ಬರುತ್ತಿದ್ದ ಹೆಸರಾದ ವಿನಯ್ ಕಟಿಯಾರ್ ಹೆಸರನ್ನು ಕೈಬಿಟ್ಟಿದ್ದರೆ, ಪಕ್ಷದ ವಿವಾದಾತ್ಮಕ ಮುಖಂಡ ಯೋಗಿ ಆದಿತ್ಯನಾಥ್ ಮತ್ತು ಸಚಿವೆ ಮನೇಕಾ ಗಾಂಧಿ ಹೆಸರು ಪಟ್ಟಿಯಲ್ಲಿದೆ.
34 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ಸ್ಮೃತಿ ಇರಾನಿ, ಉಮಾ ಭಾರತಿ ಮುಂತಾದವರ ಹೆಸರಿದೆ.
ಏಳು ಹಂತದಲ್ಲಿ ನಡೆಯುವ ಉತ್ತರ ಪ್ರದೇಶ ಚುನಾವಣೆ ಫೆಬ್ರವರಿ 11, 15, 19, 23, 27 ಮತ್ತು ಮಾರ್ಚ್ 4 ಮತ್ತು 8ರಂದು ನಡೆಯಲಿದೆ. ಮಾರ್ಚ್ 11ರಂದು ಫಲಿತಾಂಶ ಹೊರಬೀಳಲಿದೆ.