ಗೋವಾದಲ್ಲಿ ಬಿಜೆಪಿ ಸೂಟ್ ಕೇಸ್ ಡೀಲ್: ಕಣ್ಣಾರೆ ನೋಡಿದಂತೆ ವಿವರಿಸಿದ ದಿಗ್ವಿಜಯ್ ಸಿಂಗ್
ಗೋವಾದಲ್ಲಿ ಅಧಿಕಾರ ಕುದುರಿಸಲು ಬಿಜೆಪಿ ಸೂಟ್ ಕೇಸ್ ಡೀಲ್ ನಡೆಸಿದೆ, ಈ ಬಗ್ಗೆ ನಮ್ಮಲ್ಲಿ ಪುರಾವೆಯಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪ.
ನವದೆಹಲಿ, ಮಾ 15: ಗೋವಾದಲ್ಲಿ ಬಿಜೆಪಿ ಸೂಟ್ ಕೇಸ್ ಡೀಲ್ ಮೂಲಕ ಅಧಿಕಾರ 'ಕುದುರಿಸಿಕೊಂಡಿದೆ' ಎನ್ನುವ ಗಂಭೀರ ಆರೋಪವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮಾಡಿದ್ದಾರೆ.
ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚನೆ ಸಾಧ್ಯವಾಗಲಿಲ್ಲ ಎನ್ನುವ ಸಿಟ್ಟೋ, ಗೋವಾದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರೂ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಹತಾಶೆಯೋ, ಒಟ್ಟಿನಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದಂತೆ, ಬಿಜೆಪಿ ಕುದುರೆ ವ್ಯಾಪಾರ ಕುದುರಿಸಿತ್ತು ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಗೋವಾದ ಸಿಎಂ ಮನೋಹರ್ ಪಾರಿಕ್ಕಾರ್ ಮತ್ತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಇಬ್ಬರಲ್ಲಿ ಇರುವಷ್ಟು ದುಡ್ಡು ಕಾಂಗ್ರೆಸ್ ನಲ್ಲಿದ್ದರೆ, ನಾವೂ ಅಧಿಕಾರಕ್ಕೆ ಬರುತ್ತಿದ್ದೆವು ಎನ್ನುವ ಆರೋಪವನ್ನು ದಿಗ್ವಿಜಯ್ ಸಿಂಗ್ ಮಾಡಿದ್ದಾರೆ.
ದೆಹಲಿಯಿಂದ ಮಾರ್ಚ್ ಹದಿಮೂರನೇ ತಾರೀಕು ವಿಶೇಷ ವಿಮಾನದ ಮೂಲಕ ಸಂಜೆ ಆರು ಗಂಟೆಗೆ ನಿತಿನ್ ಗಡ್ಕರಿ ಸೂಟ್ ಕೇಸ್ ನೊಂದಿಗೆ ಗೋವಾಗೆ ಬರುತ್ತಾರೆ.
ಅಲ್ಲಿ ಅವರು ಪಕ್ಷೇತರರು ಮತ್ತು ನಮ್ಮ ಪಕ್ಷದ ಕೆಲವು ಶಾಸಕರನ್ನು ಭೇಟಿ ಮಾಡಿ ವ್ಯವಹಾರ ಕುದುರಿಸಿ ದೆಹಲಿಗೆ ವಾಪಸ್ ಆಗುತ್ತಾರೆ, ನಮ್ಮಲ್ಲಿ ಈ ಸಂಸ್ಕೃತಿ ಇಲ್ಲಪ್ಪಾ.. ಎಂದು ದಿಗ್ವಿಜಯ್ ಸಿಂಗ್ ಗೋವಾ ವಿದ್ಯಮಾನದ ಬಗ್ಗೆ ವೀಕ್ಷಕ ವಿವರಣೆ ನೀಡಿದ್ದಾರೆ.
ಬಿಜೆಪಿ ಚುನಾಯಿತ ಸದಸ್ಯರಿಗಿಂತ ಪಕ್ಷೇತರರಿಗೆ ಸಂಪುಟದಲ್ಲಿ ಮಣೆ ನೀಡಲಾಗಿದೆ, ಗಡ್ಕರಿ ಚೆಕ್ ಮೂಲಕ ಇವರಿಗೆ ಹಣ ಸಂದಾಯ ಮಾಡಿರುವುದಕ್ಕೆ ನಮ್ಮಲ್ಲಿ ಪುರಾವೆಯಿದೆ ಎಂದಿರುವ ದಿಗ್ವಿಜಯ್ ಸಿಂಗ್, ಪುರಾವೆಯನ್ನು ಮಾತ್ರ ಬಹಿರಂಗ ಪಡಿಸಲಿಲ್ಲ.
ಕಾಂಗ್ರೆಸ್ ನಲ್ಲಿದ್ದರೆ ದುಡ್ಡು ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ, ಜನಪ್ರತಿನಿಧಿಗಳು ಬಿಜೆಪಿಗೆ ಹೋಗಿ ಒಂದಷ್ಟು ದುಡ್ಡು ಮಾಡಿಕೊಳ್ಳಲು ಹೋಗುತ್ತಿದ್ದಾರೆ. ಬಿಜೆಪಿ ಬಾಗಿಲು ತಟ್ಟಿದ್ದ ನಮ್ಮ ಪಕ್ಷದ ಶಾಸಕನನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದೇನೆಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೀರಸ ಪ್ರದರ್ಶನಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸುವುದು ಸರಿಯಲ್ಲ ಎಂದು ದಿಗ್ವಿಜಯ್ ಸಿಂಗ್ ಮತ್ತೆ ರಾಹುಲ್ ಅವರ ಸಮರ್ಥನೆ ಮಾಡುವುದನ್ನು ಮಾತ್ರ ಮರೆಯಲಿಲ್ಲ.