SBI ಆಯ್ತು: ಮತ್ತೆ 3 ಪ್ರಮುಖ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಚಾಲನೆ
ಭಾರತೀಯ ಸ್ಟೇಟ್ ಬ್ಯಾಂಕ್ ವಿಲೀನ ಪ್ರಕ್ರಿಯೆ ಯಶಸ್ವೀಯಾಗಿ ಪೂರ್ಣಗೊಂಡ ನಂತರ ಕೇಂದ್ರ ಸರಕಾರ ಮೂರು ರಾಷ್ಟ್ರೀಕೃತ ಬ್ಯಾಂಕುಗಳ ಮತ್ತೊಂದು ವಿಲೀನ ಪ್ರಕ್ರಿಯೆ ಸಂಬಂಧ ಮಾತುಕತೆ ಆರಂಭಿಸಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದ ನಂತರ ಇದಕ್ಕೆ ಚಾಲನೆ ಸಿ
ಮೈಸೂರು ಬ್ಯಾಂಕ್ ಮತ್ತು ಇತರ ನಾಲ್ಕು ಸಹವರ್ತಿ ಬ್ಯಾಂಕುಗಳು ಭಾರತೀಯ ಸ್ಟೇಟ್ ಬ್ಯಾಂಕಿಗೆ ವಿಲೀನಗೊಂಡ ನಂತರ ಕೇಂದ್ರ ಸರಕಾರ ಮೂರು ರಾಷ್ಟ್ರೀಕೃತ ಬ್ಯಾಂಕುಗಳ ಮತ್ತೊಂದು ವಿಲೀನ ಪ್ರಕ್ರಿಯೆ ಸಂಬಂಧ ಮಾತುಕತೆ ಆರಂಭಿಸಿದೆ.
ಕರ್ನಾಟಕದ ಮೂಲದ ಪ್ರಮುಖ ಎರಡು ರಾಷ್ಟ್ರೀಕೃತ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್, ಈ ಮೂರು ಬ್ಯಾಂಕುಗಳು ವಿಲೀನಗೊಳ್ಳುವ ಸಂಬಂಧ ಬ್ಯಾಂಕಿನ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ಆರಂಭಿಸಲು ಕೇಂದ್ರ ಹಣಕಾಸು ಸಚಿವಾಲಯ ಸೂಚಿಸಿದೆ.
ಎಟಿಎಂನಲ್ಲೇ ಬ್ಯಾಂಕ್ ಅಕೌಂಟ್ ಓಪನಿಂಗ್, ಚೆಕ್ ಕ್ಲಿಯರೆನ್ಸ್
ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಕೆನರಾ ಬ್ಯಾಂಕ್ ಜೊತೆ ವಿಲೀನಗೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಇಕಾನಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಜೊತೆ ವಿಜಯಾ ಮತ್ತು ದೇನಾ ಬ್ಯಾಂಕ್ ವಿಲೀನಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಇನ್ನು ನಾಲ್ಕೈದು ತಿಂಗಳಲ್ಲಿ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿದೆ.
ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿ ಮೋದಿ ಸರಕಾರ, ಬ್ಯಾಂಕಿಂಗ್ ವಲಯದಲ್ಲಿ ಮತ್ತೊಂದು ಮಹತ್ವದ ಬದಲಾವಣೆಗೆ ಮುಂದಾಗಿದೆ, ಮುಂದೆ ಓದಿ..
ನಾಲ್ಕನೇ ಸ್ಥಾನದಲ್ಲಿರುವ ಕೆನರಾ ಬ್ಯಾಂಕ್
ಮಾರುಕಟ್ಟೆ ಬಂಡವಾಳ ಮತ್ತು ಒಟ್ಟಾರೆ ಆಸ್ತಿಮೌಲ್ಯದ ಲೆಕ್ಕಾಚಾರದಲ್ಲಿ ಕೆನರಾ ಬ್ಯಾಂಕ್ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲ ಮೂರು ಸ್ಥಾನದಲ್ಲಿದೆ.
ಮಳೆಗಾಲದ ಅಧಿವೇಶನದ ನಂತರ ಪ್ರಸ್ತಾವನೆ
ಇದೇ ಬರುವ ಆಗಸ್ಟ್ ನಲ್ಲಿ ಮುಕ್ತಾಯಗೊಳ್ಳಲಿರುವ ಲೋಕಸಭೆ/ರಾಜ್ಯಸಭೆಯ ಮಳೆಗಾಲದ ಅಧಿವೇಶನದ ನಂತರ ಕೇಂದ್ರ ಸರಕಾರ ಪ್ರಸ್ತಾವನೆ ಸಲ್ಲಿಸಲಿದೆ. ಮಳೆಗಾಲದ ಅಧಿವೇಶನದಲ್ಲಿ ಜಿಎಸ್ಟಿ ಮತ್ತು ರಾಷ್ಟ್ರಪತಿ ಚುನಾವಣೆ ಸಂಬಂಧ ಚರ್ಚೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ಮತ್ತೊಂದು ಬ್ಯಾಂಕ್ ವಿಲೀನ ಪ್ರಕ್ರಿಯೆ ಸಂಬಂಧ ಸದನದಲ್ಲಿ ಪ್ರಸ್ತಾವನೆ ಸಲ್ಲಿಸದೇ ಇರಲು ಮೋದಿ ಸರಕಾರ ನಿರ್ಧರಿಸಿದೆ.
ಮತ್ತೊಂದು ಸುತ್ತಿನ ಮರ್ಜರ್ ನಡೆಯಲಿದೆ
ಕೆನರಾ ಬ್ಯಾಂಕ್ ಜೊತೆ ವಿಲೀನದ ನಂತರ ಮತ್ತೊಂದು ಸುತ್ತಿನ ಮರ್ಜರ್ ಕೂಡಾ ನಡೆಯಲಿದೆ ಎನ್ನುವ ಮಾಹಿತಿಯಿದೆ. ಮೂರನೇ ವಿಲೀನ ಪ್ರಕ್ರಿಯೆ ಸಿಂಡಿಕೇಟ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕುಗಳ ಮಧ್ಯೆ ನಡೆಯಲಿದೆ. ಈ ಬ್ಯಾಂಕುಗಳು ಯಾವ ಬ್ಯಾಂಕ್ ಜೊತೆ ವಿಲೀನಗೊಳ್ಳಲಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಜೇಟ್ಲಿ ನೀಡಿದ್ದ ಸುಳಿವು
ಎಸ್ಬಿಐ ನಂತರ ಮತ್ತೆರಡು ಸುತ್ತಿನ ವಿಲೀನ ಪ್ರಕ್ರಿಯೆ ಬಗ್ಗೆ ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಲಾಭ ದಾಖಲಿಸಿದ ಕೆನರಾ ಬ್ಯಾಂಕ್
ದೇಶಾದ್ಯಂತ ಸುಮಾರು ಏಳು ಸಾವಿರ ಶಾಖೆಯನ್ನು ಹೊಂದಿರುವ ಕೆನರಾ ಬ್ಯಾಂಕ್, ಕಳೆದ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ 214.18 ಕೋಟಿ ಲಾಭ ಗಳಿಸಿತ್ತು. ವರ್ಷದ ಹಿಂದೆ 3905.49 ಕೋಟಿ ನಷ್ಟ ದಾಖಲಿಸಿದ್ದ ಕೆನರಾ ಬ್ಯಾಂಕ್, ಭಾರೀ ಸುಧಾರಣಾ ಮತ್ತು ಕಟ್ಟುನಿಟ್ಟಿನ ಸಾಲ ಮರುಪಾವತಿ ಕ್ರಮದಿಂದಾಗಿ ಲಾಭದತ್ತ ಸಾಗಿದೆ.