ಕೇಂದ್ರ ಬಜೆಟ್ 2016 : ಯಾರು, ಏನು ಹೇಳಿದರು?
ನವದೆಹಲಿ, ಫೆಬ್ರವರಿ 29 : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 2016-17ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಸೋಮವಾರ ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡನೆ ಮಾಡಿದರು.
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಅರುಣ್ ಜೇಟ್ಲಿ ಅವರು, ಐಷಾರಾಮಿ ಕಾರುಗಳು, ಬ್ರಾಂಡೆಡ್ ಬಟ್ಟೆಗಳು ಮತ್ತು ಚಿನ್ನಾಭರಣ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಅರುಣ್ ಜೇಟ್ಲಿ ಅವರು ಮಂಡನೆ ಮಾಡಿದ ಬಜೆಟ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
'ದೇಶದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಅಡಿಪಾಯ ಹಾಕುವ ಬಜೆಟ್ ಮಂಡನೆ ಮಾಡಿದ್ದಾರೆ' ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯತ್ ಪ್ರತಿಕ್ರಿಯೆ ನೀಡಿದ್ದಾರೆ. [ಕೇಂದ್ರ ಬಜೆಟ್ 2016 : ಕ್ಷಣ-ಕ್ಷಣದ ಮಾಹಿತಿ]
'ಇದು ಕೇವಲ ಅಂಕಿ ಸಂಖ್ಯೆಗಳ ಬಜೆಟ್' ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟೀಕಿಸಿದ್ದಾರೆ. 'ಯುಪಿಎ ಸರ್ಕಾರದ ಹಲವು ನಿಯಮಗಳನ್ನು ಬಜೆಟ್ನಲ್ಲಿ ತೆಗೆದುಕೊಳ್ಳಲಾಗಿದೆ' ಎಂದು ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. ಬಜೆಟ್ ಬಗ್ಗೆ ಯಾರು ಏನು ಹೇಳಿದರು ಚಿತ್ರಗಳಲ್ಲಿ ನೋಡಿ...[ತೆರಿಗೆ ಉಳಿಸಲು HDFC ಯುಲಿಪ್ ನಲ್ಲಿ ಹೂಡಿಕೆ ಮಾಡಿ]
'ಹಳೆಯ ನೀತಿಗಳಿಗೆ ಬಣ್ಣ ಬಳಿದಿದೆ'
'ಕೇಂದ್ರ ಸರ್ಕಾರ ಯುಪಿಎ ಸರ್ಕಾರದ ಹಳೆಯ ಕೆಲವು ನೀತಿಗಳಿಗೆ ಬಣ್ಣ ಬಳಿದು ಮತ್ತೊಮ್ಮೆ ಮಂಡನೆ ಮಾಡಿದೆ' ಎಂದು ಮಾಜಿ ಕೇಂದ್ರ ಸಚಿವ ಮತ್ತು ಸಂಸದ ಶಶಿ ತರೂರ್ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಂಡಿಲ್ಲ'
'ಬಜೆಟ್ನಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಏನು ಅಗತ್ಯವಿತ್ತೋ ಅದನ್ನು ಬಜೆಟ್ನಲ್ಲಿ ಮಾಡಿಲ್ಲ' ಎಂದು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
|
ಉತ್ತಮ ಬಜೆಟ್
'ದೇಶದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಅಡಿಪಾಯ ಹಾಕುವ ಬಜೆಟ್' ಮಂಡಿಸಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಘೋಯಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
'ಎಲ್ಲರಿಗೂ ಆದ್ಯತೆ ನೀಡಲಾಗಿದೆ'
'ಕೇಂದ್ರ ಬಜೆಟ್ನಲ್ಲಿ ಎಲ್ಲಾ ವರ್ಗದವರಿಗೂ ಆದ್ಯತೆ ನೀಡಲಾಗಿದೆ' ಎಂದು ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
|
'ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್'
'ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್ ಮಂಡನೆ ಮಾಡಿದ್ದಾರೆ' ಎಂದು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಪ್ರತಿಕ್ರಿಯೆ ನೀಡಿದ್ದಾರೆ.
'ಸರ್ಕಾರ 2019ಕ್ಕೆ ಬಿದ್ದು ಹೋಗುತ್ತದೆ'
'ಬಜೆಟ್ನಲ್ಲಿ 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಸರ್ಕಾರ 2019ಕ್ಕೆ ಬಿದ್ದು ಹೋಗುತ್ತದೆ. ನಂತರವೂ ರೈತರು ಉಸಿರು ಹಿಡಿದುಕೊಂಡಿರಬೇಕೆ?' ಎಂದು ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
'ಉದ್ಯಮಿಗಳಿಗೆ ಮಣೆ ಹಾಕಲಾಗಿದೆ'
'ಸರ್ಕಾರಕ್ಕೆ ಹತ್ತಿರವಾಗಿರುವ ಉದ್ಯಮಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ವರ್ಗಕ್ಕೆ ಬಜೆಟ್ನಲ್ಲಿ ಏನೂ ಸಿಕ್ಕಿಲ್ಲ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
|
ತೆರಿಗೆ ಹೆಚ್ಚಿಸಬಾರದಿತ್ತು
10 ಲಕ್ಷ ರೂ ಮತ್ತು ಹೆಚ್ಚಿನ ಬೆಲೆಯ ಕಾರುಗಳ ಮೇಲೆ ತೆರಿಗೆ ಹೆಚ್ಚಿಸಿರುವುದಕ್ಕೆ ಮಹೀಂದ್ರಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಮಹೀಂದ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
'ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಹಣ ನೀಡಲಾಗಿದೆ'
ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಇತಿಹಾಸದಲ್ಲೇ ಮೊದಲ ಬಾರಿಗೆ ರಸ್ತೆಗಳ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಹಣ ಮೀಸಲಾಗಿಡಲಾಗಿದೆ' ಎಂದು ಹೇಳಿದ್ದಾರೆ.
ದೃಢ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ
'ಬಜೆಟ್ನಲ್ಲಿ ಕೃಷಿ ಮತ್ತು ರೈತರ ಅಭಿವೃದ್ಧಿ ಬಗ್ಗೆ ಮಾತನಾಡಲಾಗಿದೆ. ಆದರೆ, ಅದಕ್ಕಾಗಿ ದೃಢವಾದ ಯಾವ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
|
ಎಲ್ಲಾ ಬೇಡಿಕೆಗಳನ್ನು ಪರಿಗಣಿಸಲಾಗಿದೆ
ಬಜೆಟ್ನಲ್ಲಿ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಲಾಗಿದೆ ಎಂದು ಹಿರೋ ಸಮೂಹದ ಸುನೀಲ್ ಮಂಜಲ್ ಹೇಳಿದ್ದಾರೆ.
'ಉದ್ಯೋಗ ಸೃಷ್ಟಿಗೆ ಆದ್ಯತೆ ಬೇಕಿತ್ತು'
'ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದರು. ಆದರೆ, ಬಜೆಟ್ ನಂತರ ನಿರೀಕ್ಷೆ ಹುಸಿಯಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. 'ರೈತರ ವಾರ್ಷಿಕ ಆದಾಯ ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚು ಆದ್ಯತೆ ನೀಡಿಬಹುದಿತ್ತು. ಇದು ರೈತ ಸ್ನೇಹಿ ಅಲ್ಲವೇ ಅಲ್ಲ. ಇದೊಂದು ನಿರಾಶಾದಾಯಕ ಬಜೆಟ್' ಎಂದು ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.