ಅರುಣ್ ಜೇಟ್ಲಿ ಬಜೆಟ್ : ಯಾರು, ಏನು ಹೇಳಿದರು?
ಬೆಂಗಳೂರು, ಫೆ. 28 : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎನ್ಡಿಎ ಸರ್ಕಾರದ 2015-16ರ ಪೂರ್ಣಪ್ರಮಾಣದ ಬಜೆಟ್ಅನ್ನು ಲೋಕಸಭೆಯಲ್ಲಿ ಶನಿವಾರ ಮಂಡಿಸಿದ್ದಾರೆ. ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಲಾಗಿಲ್ಲ.
ಕೇಂದ್ರ ಸರ್ಕಾರದ ಮಹತ್ವದ ಸ್ವಚ್ಛ ಭಾರತ, ಸ್ವಚ್ಛ ಗಂಗಾ, ಸುಕನ್ಯಾ ಸಮೃದ್ಧಿ ಯೋಜನೆಗಳಿಗೆ ನೀಡಲಾಗುವ ಯಾವುದೇ ಹಣಕ್ಕೆ ಪೂರ್ಣ ತೆರಿಗೆ ವಿನಾಯಿತಿ ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದ ಬಳಿಕ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್ನಲ್ಲಿ ಜೇಟ್ಲಿ, ಬಡವರ ಏಳಿಗೆ, ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ, ಆರೋಗ್ಯ-ಶಿಕ್ಷಣಕ್ಕೆ ಒತ್ತು ನೀಡಿದರು.[ಜೇಟ್ಲಿ ಬಜೆಟ್ ಭಾಷಣದ ಮುಖ್ಯಾಂಶಗಳು]
ವಿದೇಶದಲ್ಲಿ ಕಪ್ಪು ಹಣ ಇಡುವವರಿಗೆ ಕಠಿಣ ಎಚ್ಚರಿಕೆ ನೀಡಿದ ಅರುಣ್ ಜೇಟ್ಲಿ, ಬಜೆಟ್ ಅಧಿವೇಶನದಲ್ಲೇ ಇದಕ್ಕೆ ಕಠಿಣ ಕಾನೂನು ರೂಪಿಸುವುದಾಗಿ ಹೇಳಿದರು. ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವರು ಹಣ ದುಬ್ಬರ ಕಡಿಮೆ ಮಾಡಲು ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಬಜೆಟ್ ಅನ್ನು ಹೊಗಳಿದ್ದಾರೆ.
ಪ್ರಾಯೋಗಿಕವಾದ ಬಜೆಟ್ ಅಂದ್ರು ಪಿಎಂ
ಈ ಬಜೆಟ್ಗೆ ಒಂದು ಗುರಿ ಇದೆ. ಇದು ಪ್ರಾಯೋಗಿಕವಾದ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ರೈತರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯುವಕರು, ಬಡವರು, ಸಾಮಾನ್ಯ ವರ್ಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕೇಂದ್ರ ಬಜೆಟ್ : ಯಾರು, ಏನು ಹೇಳಿದರು?
ಇದು ಐತಿಹಾಸಿಕ ಬಜೆಟ್ ಎಲ್ಲಾ ವರ್ಗದವರಿಗೂ ಆದ್ಯತೆ ನೀಡಲಾಗಿದೆ. ಮಧ್ಯಮ ವರ್ಗದವರು ಮತ್ತು ಬಡವರಿಗೆ ಸಹಕಾರಿಯಾಗುವ ಬಜೆಟ್ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಅರುಣ್ ಜೇಟ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯಮಿಗಳ ಮನವೊಲಿಕೆ ಮಾಡಿದೆ
ಬಿಜೆಪಿ ಸರ್ಕಾರ ಉದ್ಯಮಿಗಳ ಮನವೊಲಿಕೆ ಕಾರ್ಯವನ್ನು ಮುಂದುವರೆಸಿದೆ. ಉದ್ಯಮಿಗಳು, ಕಾರ್ಪೊರೇಟ್ ವರ್ಗದವರಿಗೆ ಅನುಕೂಲ ಮಾಡಿಕೊಡುವ ಬಜೆಟ್ ಇದಾಗಿದೆ ಎಂದು ಅಂಬಿಕಾ ಸೋನಿ ಪ್ರತಿಕ್ರಿಯೆ ನೀಡಿದ್ದಾರೆ.
ಹಣ ದುಬ್ಬರ ಇಳಿಸಲು ಕ್ರಮ ಕೈಗೊಳ್ಳಲಾಗಿದೆ
ಇದೊಂದು ಉತ್ತಮವಾದ ಕೇಂದ್ರ ಬಜೆಟ್ ಆಗಿದೆ. ಹಣ ದುಬ್ಬರವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾನ್ಯ ಜನರನ್ನು ಕಡೆಗಣಿಸಲಾಗಿದೆ
ಈ ಬಜೆಟ್ನಲ್ಲಿ ಸಾಮಾನ್ಯ ಜನರು ಮತ್ತು ಬಡವರನ್ನು ಕಡೆಗಣಿಸಲಾಗಿದೆ. ಇದು ಪ್ರಾಯೋಗಿಕವಾದ ಬಜೆಟ್ ಅಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರತಿಕ್ರಿಯೆ ನೀಡಿದ್ದಾರೆ.
|
ಇದು ಉದ್ಯಮಿಗಳ ಬಜೆಟ್ ಅಂದ್ರು ಖರ್ಗೆ
ಇದು ಉದ್ಯಮಿಗಳು ಮತ್ತು ಕಾರ್ಪೊರೇಟ್ ವಲಯದವರ ಬಜೆಟ್ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಮಂತರ ಹೊರೆ ಇಳಿಸಿದ್ದಾರೆ
ಅರುಣ್ ಜೇಟ್ಲಿ ಅವರಿಗೆ ಉತ್ತಮ ಬಜೆಟ್ ಮಂಡಿಸಲು ಅವಕಾಶವಿತ್ತು. ಸುವರ್ಣಾವಕಾಶವನ್ನು ಬಳಸಿಕೊಳ್ಳಲು ಅವರು ವಿಫಲರಾಗಿದ್ದಾರೆ. ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹೊರಿಸಿದ್ದಾರೆ ಮತ್ತು ಶ್ರೀಮಂತರ ಹೊರೆಯನ್ನ ಇಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.