ದೇಶದ ಜೈಲಲ್ಲಿರುವ ವಿಚಾರಣಾಧೀನ ಕೈದಿಗಳು 2.75 ಲಕ್ಷಕ್ಕೂ ಹೆಚ್ಚು!
ಬೆಂಗಳೂರು, ಅಕ್ಟೋಬರ್ 17: ಭಾರತದಲ್ಲಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆ ಎಷ್ಟಿದೆ ಗೊತ್ತಾ? 2,82,879. -ಈ ಸಂಖ್ಯೆ ಕೆರೆಬಿಯನ್ ದ್ವೀಪ ರಾಷ್ಟ್ರ ಬಾರ್ಬಡೋಸ್ ಜನಸಂಖ್ಯೆಗೆ ಸಮನಾಗಿದೆ. 1953ರಲ್ಲಿ ಬಂಧಿಸಿದ ರುದಲ್ ಷಾ 1968ರಲ್ಲಿ ಖುಲಾಸೆಯದರೂ ಮೂವತ್ತು ವರ್ಷಗಳ ಕಾಲ ಬಿಹಾರದ ಮುಜಾಫರ್ ಪುರ್ ಜೈಲಲ್ಲಿದ್ದರು.
ಇನ್ನು ಬೋಕಾ ಠಾಕೂರ್ 16 ವರ್ಷದವನಿದ್ದಾಗ ಬಿಹಾರದ ಮಧುಬನಿ ಜೈಲು ಸೇರಿದ್ದು, ಆತನ ವಿಚಾರಣೆಯೇ ನಡೆಸದೆ 36 ವರ್ಷ ಜೈಲಲ್ಲಿ ಕಳೆದಿದ್ದಾನೆ. ಇದು ಕೇವಲ ಒಂದೆರಡು ಉದಾಹರಣೆ ಅಷ್ಟೇ. 'ಇಂಡಿಯಾ ಸ್ಪೆಂಡ್' ನ ಅಧ್ಯಯನ ಹೊರಹಾಕಿರುವ ಅಂಕಿ ಮತ್ತಷ್ಟು ಮಾಹಿತಿ ಹೊರಹಾಕಿದೆ.[ಸನ್ನಡತೆಯ ಜೈಲು ಹಕ್ಕಿಗಳ ಪರ ನಿಂತ ಮುತಾಲಿಕ್]
2010-14ರ ಮಧ್ಯೆ ಶೇ 25ರಷ್ಟು ವಿಚಾರಣಾಧೀನ ಕೈದಿಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜೈಲಲ್ಲಿದ್ದಾರೆ. ಈ ಅವಧಿಯಲ್ಲಿ ವಿಚಾರಣೆ ಹಂತದಲ್ಲಿರುವ ಕೈದಿಗಳ ಪ್ರಮಾಣ ಶೇ 65ಕ್ಕಿಂತ ಹೆಚ್ಚಿದೆ. 2014ರಲ್ಲಿ ಪ್ರತಿ ಹತ್ತಕ್ಕೆ ಏಳು ಮಂದಿ ವಿಚಾರಣಾ ಕೈದಿಗಳು. ಇನ್ನು ಹತ್ತಕ್ಕೆ ಇಬ್ಬರು ಶಿಕ್ಷೆಯಾಗದಿದ್ದರೂ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜೈಲಲ್ಲಿದ್ದವರು.
ಪ್ರಕರಣವು ವಿಚಾರಣೆ, ತನಿಖೆ ಹಂತದಲ್ಲಿರುವ ಕಾರಣಕ್ಕೆ, ನಿರಪರಾಧಿ ಎಂದು ಇನ್ನೂ ಸಾಬೀತಾಗದ ಕಾರಣಕ್ಕೆ ಜೈಲಲ್ಲಿರುವವರನ್ನು ವಿಚಾರಣಾ ಕೈದಿಗಳು ಅಂತಾರೆ. ಆದರೆ ಅವರ ಮೇಲೆ ಮಾನಸಿಕ ಹಾಗೂ ದೈಹಿಕ ಹಲ್ಲೆಗಳು ಆಗುತ್ತವೆ. ಜೈಲಲ್ಲಿ ನಡೆಯುವ ಹಿಂಸಾಚಾರದ ವೇಳೆ ತೊಂದರೆ ಅನುಭವಿಸುತ್ತಾರೆ. ಅಲ್ಲಿನ ನಿಕೃಷ್ಟ ಸ್ಥಿತಿಯಿಂದ ಹಲವರು ಕುಟುಂಬದೊಂದಿಗಿನ ನಂಟನ್ನೇ ಕಳೆದುಕೊಳ್ತಾರೆ.[ಸೆರೆಮನೆಯಲ್ಲಿ ಸುರತ ನ್ಯಾಯಸಮ್ಮತ]
ವಿಚಾರಣಾಧೀನ ಕೈದಿಗಳು ಹಣಕಾಸಿನ ತೊಂದರೆಯಿಂದ, ಜೈಲಿನಿಂದ ಹೊರಗಡೆಯವರನ್ನು ಸಂಪರ್ಕಿಸಲು ಸಾಧ್ಯವಾಗದೆ ಕಾನೂನು ನೆರವು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. 1980ರಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನ ಪರಿಚ್ಛೇದ 21ರ ಪ್ರಕಾರ ಕೈದಿಗಳ ನ್ಯಾಯೋಚಿತ ಹಾಗೂ ಶೀಘ್ರ ವಿಚಾರಣೆ ಮಾಡುವುದು ಮೂಲಭೂತ ಹಕ್ಕು ಎಂದಿದೆ.
ಒಂದು ವೇಳೆ ಅವರು ಮಾಡಿದ ತಪ್ಪಿಗೆ ಶಿಕ್ಷೆಯೇ ಘೋಷಣೆಯಾದರೆ ಜೈಲಲ್ಲಿ ಇರಬೇಕಾದ ಅವಧಿಗಿಂತ ಹೆಚ್ಚು ಸಮಯವನ್ನು ಜೈಲಲ್ಲಿ ಈಗಾಗಲೇ ವಿಚಾರಣೆಯೇ ಎದುರಿಸದೆ ಕಳೆದವರು ಇದ್ದಾರೆ. 2014 ಮಾಹಿತಿ ಪ್ರಕಾರ ಜಮ್ಮು-ಕಾಶ್ಮೀರ (ಶೇ 54), ಗೋವಾ (ಶೇ 50), ಮತ್ತು ಗುಜರಾತ್ (ಶೇ 42) ಈ ಪ್ರಮಾಣ ಹೆಚ್ಚಿದೆ. ಇನ್ನು ಉತ್ತರ ಪ್ರದೇಶದಲ್ಲಿ ವಿಚರಣಾ ಕೈದಿಗಳ ಸಂಖ್ಯೆ (18,214) ಅತಿ ಹೆಚ್ಚಿದೆ.[ಕಲಬುರಗಿ ಜೈಲಿನಿಂದ 27 ಕೈದಿಗಳಿಗೆ ಬಿಡುಗಡೆ ಭಾಗ್ಯ]
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವೇಳೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಪ್ರತಿ ಜಿಲ್ಲೆಯಲ್ಲೂ ವಿಚಾರಣಾಧೀನ ಪರಿಶೀಲನಾ ಸಮಿತಿ ರಚಿಸಿ, ಸಿಆರ್ ಪಿಸಿ ಸೆಕ್ಷನ್ 436ಎ ಅಡಿ ಪ್ರಯೋಜನ ಪಡೆಯಲು ಅರ್ಹರಾದ ಕೈದಿಗಳಿಗೆ ನೆರವಾಗಲು ಸೂಚಿಸಿತ್ತು. ಜುಲೈ 1, 2015 ಹಾಗೂ ಜನವರಿ 31, 2016ರ ಮಧ್ಯೆ ಆರು ಸಾವಿರ ಕೈದಿಗಳು ಬಿಡುಗಡೆಯಾದರು ಎಂದು ಹೋರಾಟಗಾರ ಸೇನೆ ಹೇಳುತ್ತಾರೆ.
ಆದರೂ ಅದು ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಶೇ 2ರಷ್ಟು ಮಾತ್ರ. ಐಪಿಸಿ ಅಪರಾಧಗಳಲ್ಲಿ ಬಾಕಿಯಿರುವ ಪ್ರಕರಣಗಳು ಶೇ 84ರಿಂದ 86ರಷ್ಟಿದೆ. 2015ರ ಡಿಸೆಂಬರ್ ವೇಳೆಗೆ ದೇಶದಾದ್ಯಂತ ಕೆಳಹಂತದ ಕೋರ್ಟ್ ಗಳಲ್ಲಿ ಬಾಕಿಯಿದ್ದ ಎರಡೂವರೆ ಕೋಟಿ ಪ್ರಕರಣಗಳು ಇತ್ಯರ್ಥವಾಗುವುದಕ್ಕೆ ಹನ್ನೆರಡು ವರ್ಷ ಬೇಕಾಗುತ್ತದೆ.