ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯು ಶನಿವಾರ ಸಂಜೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಇದಕ್ಕೂ ಮೊದಲು ಗುಂಡಿನ ಚಕಮಕಿ ನಡೆದಿದೆ. ಆ ವೇಳೆ ಹಾರಿಸಿದ ಗುಂಡಿಗೆ ಉಗ್ರರಿಬ್ಬರು ಬಲಿಯಾಗಿದ್ದಾರೆ
ಶ್ರೀನಗರ್, ಏಪ್ರಿಲ್ 22: ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ಶನಿವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಪಹರೆಯಲ್ಲಿದ್ದ ಸೇನಾ ಗುಂಪಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ವೇಳೆ ಪ್ರತಿಯಾಗಿ ಮಾಡಿದ ಗುಂಡಿನ ದಾಳಿಯಲ್ಲಿ ಉಗ್ರರು ಹತರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ರೈಫಲ್ಸ್ 53ನ ತಂಡದ ಮೇಲೆ ಹಯಾತ್ ಪುರ ಹಳ್ಳಿಯಲ್ಲಿ ದಾಳಿ ನಡೆಸಿದರು. ಆಗ ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಶ್ರೀನಗರದಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಹಯಾತ್ ಪುರದಲ್ಲಿ ಸಂಜೆ ಆರು ಗಂಟೆ ವೇಳೆಗೆ ಗುಂಡಿನ ಚಕಮಕಿ ನಡೆದಿದೆ. ಹಳ್ಳಿಯೊಳಗೆ ಇದ್ದ ಉಗ್ರರನ್ನು ನೆಲಕ್ಕುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಕಾಶ್ಮೀರದಲ್ಲಿನ್ನು ಸೇನೆಯಿಂದ ಪ್ಲಾಸ್ಟಿಕ್ ಗುಂಡುಗಳ ಬಳಕೆ]
ಈಚೆಗೆ ಉಗ್ರರು ಪೊಲೀಸರಿಂದ ರೈಫಲ್ಸ್ ಗಳನ್ನು ಕಸಿಯುವ ಪ್ರಕರಣ ಹೆಚ್ಚಾಗಿದೆ. ನೋಟು ಅಮಾನ್ಯದ ನಿರ್ಧಾರ ನಂತರ ಉಗ್ರರಿಗೆ ಹಣ ಪೂರೈಕೆ ಕಠಿಣವಾಗಿದ್ದು, ಶಸ್ತ್ರಾಸ್ತ್ರ ಪೂರೈಕೆ ಸಹ ಕಷ್ಟವಾಗಿದೆ. ಆದರೆ ಸರ್ಜಿಕಲ್ ಸ್ಟ್ರೈಕ್ ವೇಳೆಯಲ್ಲಿ ಭಾರತೀಯ ಸೇನೆ ನಾಶಪಡಿಸಿದ್ದ ಉಗ್ರರ ನೆಲೆಗಳು ಮತ್ತೆ ಆರಂಭವಾಗಿವೆ ಎಂದು ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದ ವೇಳೆ ಸೇನೆ ಮೂಲಗಳು ತಿಳಿಸಿದ್ದವು.