ನೇತಾಜಿ ಪುಣ್ಯಸ್ಮರಣೆ: ಶ್ರದ್ಧಾಂಜಲಿ ಅರ್ಪಿಸಿದ ಟ್ವಿಟ್ಟಿಗರು
ನವದೆಹಲಿ, ಆಗಸ್ಟ್ 18: ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯತಿಥಿ ಇಂದು.
1945 ಆಗಸ್ಟ್ 18 ರಂದು ತ್ವವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಕಾಲವಾದರು ಎಂಬ ಬಗ್ಗೆ ಇಂದಿಗೂ ಅನುಮಾನಗಳಿದ್ದರೂ, ಈ ದಿನವನ್ನು ಅವರ ಪುಣ್ಯಸ್ಮರಣೆಗೆಂದೇ ಮೀಸಲಿರಿಸಲಾಗಿದೆ. 'ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ' ಎಂಬ ಕುರಿತು ಈಗಾಗಲೇ ಸಾಕಷ್ಟು ವರದಿಗಳು ಪ್ರಕಟಗೊಂದಿದ್ದು, ನೇತಾಜಿಯವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ- ಫ್ರಾನ್ಸ್ ಗುಪ್ತಚರ ವರದಿ
ಒಡಿಶಾದ ಕಟಕ್ ನಲ್ಲಿ 1897 ರ ಜನವರಿ 23 ರಂದು ಜನಿಸಿದ ಸುಭಾಷ್ ಚಂದ್ರ ಬೋಸ್ ಅವರ ತಂದೆ ಜಾನಕೀನಾಥ್ ಬೋಸ್, ತಾಯಿ ಪ್ರಭಾವತಿ. ತತ್ವಶಾಸ್ತ್ರ ಪದವಿ(1919), ಇಂಗ್ಲೆಂಡ್ ನಿಂದ ಐಸಿಎಸ್ ಪದವಿ(1920) ಪಡೆದ ಬೋಸ್ 1921 ರಲ್ಲಿ ಭಾರತಕ್ಕೆ ಮರಳಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ಬೋಸ್ ಗೆ ಮಂದಗಾಮಿ ಚಿಂತನೆಯಲ್ಲಿ ನಂಬಿಕೆ ಇರಲಿಲ್ಲ. ಅವರದೇನಿದ್ದರೂ ಹೋರಾಟದ ಹಾದಿ. ಅದಕ್ಕೆಂದೇ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್ ಎ) ಸ್ಥಾಪಿಸಿ, ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬಲನೀಡಿದರು.
ಸದಾ ಭಾರತಕ್ಕಾಗಿ ತುಡಿಯುತ್ತಿದ್ದ ಬೋಸ್ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಇಂದಿಗೂ ಹಲವು ಭಾರತೀಯರಿಗೆ ಸಾಧ್ಯವಾಗಿಲ್ಲ. ಅದಕ್ಕೆಂದೇ ಬೋಸ್ ಅವರಿಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೇತಾಜಿ ಅವರಿಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಬಿಡುಗಡೆ ಮಾಡಿತಾದರೂ, ನೇತಾಜಿ ಸಾವು ಆಕಸ್ಮಿಕವಲ್ಲ, ಪಿತೂರಿ ಎಂಬ ಕುರಿತು ಅವುಗಳಿಂದ ಯಾವುದೇ ಸಾಕ್ಷಿ ಇದುವರೆಗೂ ದೊರೆತಿಲ್ಲ.
ನೇತಾಜಿ ಸಾವಿನ ನಿಗೂಢತೆಗೆ ಇನ್ನೂ ಅಂತ್ಯ ಸಿಕ್ಕಿಲ್ಲ!
ಇಂದು ಭಾರತದ ಕ್ರಾಂತಿ ಕಿಡಿ, ಸುಭಾಶ್ ಚಂದ್ರ ಬೋಸ್ ಅವರ 73 ನೇ ಪುಣ್ಯತಿಥಿ. ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಇಂಬು ನೀಡಿದ, ಭಾರತೀಯ ಯುವಕರಲ್ಲಿ ಹೋರಾಟದ ಕಿಚ್ಚುಹೊತ್ತಿಸಿ, ಸ್ಫೂರ್ತಿ ತುಂಬಿದ ನೇತಾಜಿ ಅವರನ್ನು ಟ್ವಿಟ್ಟಿಗರು ನೆನಪಿಸಿಕೊಂಡು, ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
|
ಹೃದಯಪೂರ್ವಕ ಅಶ್ರುತರ್ಪಣ
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಅರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಅವರ ಪುಣ್ಯತಿಥಿಯಂದು ಹೃದಯಪೂರ್ವಕ ಅಶ್ರುತರ್ಪಣ ಎಂದು ಮೇಜರ್ ಸುರೇಂದ್ರ ಪೋನಿಯಾ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮಹಾನ್ ರಾಷ್ಟ್ರೀಯತಾ ವಾದಿ
ಆಜಾದ್ ಹಿಂದ್ ಆರ್ಮಿಯ ಸಂಸ್ಥಾಪಕ ಮತ್ತು ಮಹಾನ್ ರಾಷ್ಟ್ರೀಯತಾವಾದಿ ಸುಭಾಶ್ ಚಂದ್ರ ಬೋಸ್ ಅವರಿಗೆ ಶ್ರದ್ಧಾಂಜಲಿ ಎಂದು ನೀತ್ ಪಾರ್ಮರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಸತ್ಯ ಹೊರಬರಲಿ
ಅವರ ಪುಣ್ಯತಿಥಿಯ ದಿನವಾದರೂ, ಅವರ ಸಾವಿನ ರಹಸ್ಯ ಬಯಲಾಗಲಿ. ಈಗಲೂ ಜನರು ನೇತಾಜಿ ಅವರ ಸಾವಿನ ನಿಗೂಢತೆಯ ಕುರಿತು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಪ್ರಜ್ಯೋತ್ ಮಿಶ್ರಾ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ನಿಗೂಢವಾಗಿಯೇ ಉಳಿದ ಸಾವಿನ ರಹಸ್ಯ
ಯಾವ ವ್ಯಕ್ತಿ ನಿಜವಾದ ನಾಯಕತ್ವದ ಗುಣ ಹೊಂದಿದ್ದರೋ, ಯಾರಿಗೆ ಭವಿಷ್ಯದ ಭಾರತದ ಕುರಿತು ನಿಜವಾದ ದೂರದೃಷ್ಟಿ ಇತ್ತೋ ಆ ವ್ಯಕ್ತಿ ಈಗಿಲ್ಲ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ ಎಂದು ಅಭಿಷೇಕ್ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.