ಹೆದ್ದಾರಿಯಲ್ಲಿ ಪೊಲೀಸರ ಆತಂಕಕ್ಕೆ ಕಾರಣವಾದ ಹಣ ತುಂಬಿದ ಲಾರಿ!
ಕರೂರ್, ಜುಲೈ 21 : ಕೋಟ್ಯಾಂತರ ರೂಪಾಯಿ ಹಣ ಸಾಗಿಸುತ್ತಿದ್ದ ಲಾರಿ ಕೆಟ್ಟು ನಿಂತು ಕೆಲವು ಕಾಲ ಆತಂಕ ಸೃಷ್ಟಿಯಾಗಿತ್ತು. ಮೈಸೂರಿನಿಂದ ಹೊರಟಿದ್ದ ಗರಿಗರಿ ನೋಟುಗಳನ್ನು ಹೊತ್ತ ಲಾರಿ ಹೆದ್ದಾರಿಯಲ್ಲಿ ಪೊಲೀಸರ ತಲೆನೋವಿಗೆ ಕಾರಣವಾಗಿತ್ತು.
ರಿಸರ್ವ ಬ್ಯಾಂಕಿನ ಮೈಸೂರು ಮುದ್ರಣಾಲಯದಿಂದ ಹೊಸ ನೋಟುಗಳನ್ನು ಹೊತ್ತ ಎರಡು ಲಾರಿಗಳು ಮಂಗಳವಾರ ತಿರುವನಂತಪುರದತ್ತ ಹೊರಟಿದ್ದವು. ಸಂಜೆ ವೇಳೆಗೆ ತಮಿಳುನಾಡಿನ ಕರೂರು ಸಮೀಪದ ಮಲೈಕೊವಿಲೂರಿನ ಬಳಿ ಒಂದು ಲಾರಿಯ ಆಕ್ಸೆಲ್ ಕಟ್ ಆಗಿ ಕೆಟ್ಟು ನಿಂತಿತು.[ಬ್ಯಾಂಕುಗಳಿಗೆ ಕೇಂದ್ರದಿಂದ 22 ಸಾವಿರ ಕೋಟಿ ರು.]
ಲಾರಿಗಳ ರಕ್ಷಣೆಗೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಎಂಟು ಯೋಧರು ಬಂದಿದ್ದರು. ಲಾರಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಟ್ಟು ನಿಂತಿದ್ದರಿಂದ ಅವರಿಗೂ ತಲೆನೋವು ಆರಂಭವಾಯಿತು. ಜಿಲ್ಲಾಡಳಿತಕ್ಕೆ ತಕ್ಷಣ ಈ ಬಗ್ಗೆ ಮಾಹಿತಿ ರವಾನಿಸಲಾಯಿತು.[ರಿಸರ್ವ್ ಬ್ಯಾಂಕಿಗೆ ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು]
ಜಿಲ್ಲಾಡಳಿತ ದೊಡ್ಡ ಪೊಲೀಸರ ದಂಡನ್ನು ಲಾರಿಯ ರಕ್ಷಣೆಗೆ ನಿಯೋಜನೆ ಮಾಡಿತು. ಮದುರೈನಿಂದ ತಂತ್ರಜ್ಞರನ್ನು ಲಾರಿ ಬೇಕಾದ ಬಿಡಿಭಾಗಗಳ ಜೊತೆ ಕರೆಸಲಾಯಿತು. ಕೆಲವು ಗಂಟೆಗಳಲ್ಲಿ ದುರಸ್ತಿ ಪೂರ್ಣಗೊಳಿಸಿ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು. ಲಾರಿ ಮಂದೆ ಸಾಗುತ್ತಿದ್ದಂತೆ ಪೊಲೀಸರು ನೆಮ್ಮದಿಯ ನಿಟ್ಟುಸಿರುಬಿಟ್ಟರು.[ದೋಸೆ ಬೆಲೆ ಇಳಿಕೆ ಆಗಿಲ್ಲವೇಕೆ? ಆರ್ ಬಿಐ ಗರ್ವನರ್ ಉತ್ತರ ಇಲ್ಲಿದೆ]
ಆರ್ಬಿಐ ಸೂಚನೆಯಂತೆ ಹೊಸದಾಗಿ ಮುದ್ರಣ ಮಾಡಲಾದ ಕೋಟ್ಯಾಂತರ ರೂಪಾಯಿ ಹಣವನ್ನು 40 ಅಡಿ ಉದ್ದದ ಕಂಟೇನರ್ ಹೊಂದಿರುವ ಎರಡು ಲಾರಿಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಆದರೆ, ಲಾರಿಯಲ್ಲಿ ಎಷ್ಟು ಹಣವಿತ್ತು? ಎಂಬುದು ಮಾತ್ರ ನಿಗೂಢವಾಗಿದೆ.