ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೊಂದು ಸಲಾಂ
ಬೆಂಗಳೂರು, ಅಕ್ಟೋಬರ್ 02 : 1965ರ ಭಾರತ-ಪಾಕ್ ಸಮರ. ಭಾರತದ ಮೇಲೆ ಪಾಕಿಸ್ತಾನದ ಜನರಲ್ ಅಯುಬ್ಖಾನ್ ಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದರು. ಭಾರತ ಸೇನಾಪಡೆಯ ವೀರ ಸೇನಾನಿ ಜನರಲ್ ಅರ್ಜುನ್ಸಿಂಗ್ ಯಾವುದೇ ಮುಲಾಜಿಲ್ಲದೆ ಪಾಕ್ ಸೈನ್ಯದ ವಿರುದ್ಧ ರಣಕಹಳೆ ಮೊಳಗಿಸಿದರು.
ಇಡೀ ಭಾರತದ ಸೈನ್ಯಕ್ಕೆ ಬೆಂಬಲವಾಗಿ, ಬೆನ್ನಲುಬಾಗಿ ನಿಂತು ಭಾರತೀಯರನ್ನು ಹುರಿದುಂಬಿಸುತ್ತಾ ಸಮರಾಂಗಣದಲ್ಲಿ ವಿಜಯೋತ್ಸವವನ್ನು ಆಚರಿಸುವಂತೆ ಮಾಡಿದವರು ದೇಶದ ಅಂದಿನ ಪ್ರಧಾನಿ ಭಾರತರತ್ನ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರು
1902ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮೊಗಲ್ ಸರಾಯ್ನಲ್ಲಿ ಶಾಲಾ ಶಿಕ್ಷಕ ಶಾರದಾ ಪ್ರಸಾದ್ ಮತ್ತು ರಾಮ್ ದುಲಾರಿದೇವಿ ದಂಪತಿಗಳ ಪುತ್ರರಾಗಿ ಜನಿಸಿದ ಶಾಸ್ತ್ರಿ ಅವರ ಪೂರ್ಣ ಹೆಸರು ಲಾಲ್ ಬಹದ್ದೂರ್ ಶ್ರೀವಾಸ್ತವ. 2 ವರ್ಷದ ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ತೀವ್ರ ಬಡತನದಲ್ಲಿ ಶಿಕ್ಷಣ ಮುಂದುವರೆಸಿದರು. [ಮರೆತುಹೋದ ಶಾಸ್ತ್ರಿಯನ್ನು ನೆನಪಿಸಿದ ಅಣ್ಣಾ ಹಜಾರೆ]
ಶಾಲೆಗಾಗಿ ಪಕ್ಕದ ಊರಿಗೆ ತೆರಳಬೇಕಾಗಿತ್ತು. ಆಗ ನದಿ ದಾಟಲು ದೋಣಿಯವನಿಗೆ ಹಣ ಕೊಡಲು ದುಡ್ಡಿಲ್ಲದೆ, ತೊಟ್ಟಿದ್ದ ಬಟ್ಟೆ ನೆನೆಯಬಾರದೆಂಬ ಉದ್ದೇಶದಿಂದ (ಏಕೆಂದರೆ ಅವರಲ್ಲಿದ್ದದ್ದೇ ಒಂದೇ ಜತೆ ಬಟ್ಟೆ) ಅವುಗಳನ್ನು ಕೈಯಲ್ಲಿ ಹಿಡಿದು ನದಿ ದಾಟಿ ನಂತರ ಬಟ್ಟೆ ತೊಟ್ಟು ಶಾಲೆಗೆ ಹೋಗಿ ಜ್ಞಾನಾರ್ಜನೆ ಮಾಡುತ್ತಿದ್ದರು. ಕಾಶೀ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 'ಶಾಸ್ತ್ರೀ' ಪದವಿ ಪಡೆದರು. ಇದರಿಂದಾಗಿ ಮುಂದೆ ಇವರ ಹೆಸರು ಲಾಲ್ ಬಹದ್ದೂರ್ ಶಾಸ್ತ್ರಿ ಎಂದೇ ಪ್ರಸಿದ್ಧವಾಯಿತು.
ಸರಳ ಬದುಕು ಇಷ್ಟಪಡುತ್ತಿದ್ದ ಶಾಸ್ತ್ರಿ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ ಅವರು ಸ್ಥಾಪಿಸಿದ್ದ ಜನತಾ ಸೇವಾ ಸಂಘದ ಕಾರ್ಯಕರ್ತರಾದರು. ಆ ಸಂಘವು ಅವರಿಗೆ ಸಂಭಾವನೆಯಾಗಿ ನೀಡುತ್ತಿದ್ದ 75 ರೂ.ಗಳಲ್ಲಿ ಜೀವನ ನಡೆಸುತ್ತಿದ್ದರು. ಉಪ್ಪಿನ ಸತ್ಯಾಗ್ರಹ, ಚಲೇಜಾವ್ ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆಗೆ ಹೋದರು, ಶಿಕ್ಷೆ ಅನುಭವಿಸಿದರು. [ಗಾಂಧೀಜಿ ದಾರಿಯಲ್ಲಿ ಶಾಸ್ತ್ರಿ ಮತ್ತು ಅಣ್ಣಾ ನಡಿಗೆ]
ಸ್ವಾತಂತ್ರ್ಯದ ನಂತರ ಸಕ್ರಿಯ ರಾಜಕಾರಣಕ್ಕೆ ಬಂದ ಲಾಲ್ ಬಹದ್ದೂರರು 1952ರಲ್ಲಿ ರಾಜ್ಯಸಭೆ ಸದಸ್ಯರಾಗಿ ಕೇಂದ್ರ ಮಂತ್ರಿ ಮಂಡಲದಲ್ಲಿ ರೈಲ್ವೆ ಸಚಿವರಾಗಿದ್ದರು. 1956ರಲ್ಲಿ ತಮಿಳುನಾಡಿನ ತುತೂಕುಡಿಯಲ್ಲಿ ಭೀಕರ ರೈಲು ದುರಂತ ಸಂಭವಿಸಿ ಸಾವು ನೋವುಗಳು ಉಂಟಾದಾಗ ಮನನೊಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನಂತರ ಲೋಕಸಭೆಗೆ ಆಯ್ಕೆಯಾಗಿ ಸಾರಿಗೆ, ಕೈಗಾರಿಕೆ, ವಾಣಿಜ್ಯ ಹಾಗೂ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದರು.