ಅಖಿಲೇಶ್ ಯಾದವ್ ಬ್ಯಾಗ್ ನೇ ವಿತರಿಸಿ ಎಂದ ಯೋಗಿ
ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಶಾಲಾ ಮಕ್ಕಳಿಗೆ ವಿತರಿಸಬೇಕೆಂದಿದ್ದ ಅಖಿಲೇಶ್ ಯಾದವ್ ಭಾವಚಿತ್ರವಿರುವ ಸ್ಕೂಲ್ ಬ್ಯಾಗ್ ಗಳು ಹಾಗೇ ಉಳಿದಿತ್ತು. ಈ ಬಾರಿ ಅವುಗಳನ್ನು ವಿತರಿಸಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅದೇಶಿಸಿದ್ದಾರೆ
ಲಖನೌ, ಮೇ 1: ಇದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಎಂಥವರೂ ಮೆಚ್ಚಬೇಕು ಎನಿಸುವಂಥ ನಿರ್ಧಾರ. ಏಕೆಂದರೆ ಈ ಹಿಂದೆ ಅಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ರ ಚಿತ್ರವಿರುವ ಬ್ಯಾಗ್ ಗಳನ್ನು ಶಾಲಾ ಮಕ್ಕಳಿಗೆ ವಿತರಿಸಿತ್ತು. ಆ ಪೈಕಿ ಕೆಲವು ಸಾವಿರ ಬ್ಯಾಗ್ ಗಳು ಹಾಗೇ ಉಳಿದಿದ್ದವು. ಅವುಗಳನ್ನೇ ಈ ಬಾರಿ ವಿತರಿಸಿ ಎಂದು ಯೋಗಿ ಸೂಚಿಸಿದ್ದಾರೆ.
ಸಾರ್ವಜನಿಕರ ಹಣ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಯೋಗಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಖಿಲೇಶ್ ರ ಭಾವಚಿತ್ರವಿರುವ ಮೂವತ್ತೈದು ಸಾವಿರ ಬ್ಯಾಗ್ ಗಳು ಹಾಗೇ ಉಳಿದಿದ್ದವು. ಕಳೆದ ಮಾರ್ಚ್ ನಲ್ಲಿ ಅಖಿಲೇಶ್ ಅಧಿಕಾರ ಕಳೆದುಕೊಂಡು, ಬಿಜೆಪಿ ಗದ್ದುಗೆ ಏರಿತ್ತು.[ಉ.ಪ್ರ ಹಾದಿಯಲ್ಲಿ ದೆಹಲಿ ಹೆಜ್ಜೆ, ರಜಾ ರದ್ದು ಮಾಡ್ತೀವಿ ಎಂದ ಮನೀಶ್ ಸಿಸೋಡಿಯಾ]
ಈಗ ಅಖಿಲೇಶ್ ಭಾವಚಿತ್ರವಿರುವ ಬ್ಯಾಗ್ ಗಳನ್ನೆಲ್ಲ ವಿತರಿಸಿಯಾದ ಮೇಲೆ ಹೊಸ ಬ್ಯಾಚ್ ನ ಬ್ಯಾಗ್ ಗಳ ಮೇಲೆ 'ಮುಖ್ಯಮಂತ್ರಿ ಯೋಜನಾ' ಅಥವಾ 'ಉತ್ತರಪ್ರದೇಶ ಯೋಜನಾ' ಎಂದು ಮಾತ್ರ ಇರುತ್ತದೆ. ಯಾವುದೇ ಯೋಜನೆಗಳಿಗೆ ವ್ಯಕ್ತಿಯ ಹೆಸರಿಡಬಾರದು ಎಂದು ಆದಿತ್ಯನಾಥ್ ನಿರ್ಧರಿಸಿದ್ದಾರೆ.
ಒಂದರಿಂದ ಎಂಟನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ವಿತರಿಸಲು 1.8 ಕೋಟಿ ಬ್ಯಾಗ್ ಗಳಿಗೆ ಮಂಜೂರಾತಿ ದೊರೆತಿತ್ತು. ಈ ಮಧ್ಯೆ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಾದ್ದರಿಂದ ಹಲವು ಬ್ಯಾಗ್ ಗಳನ್ನು ಜಿಲ್ಲಾ ಶಿಕ್ಷಣ ಕಚೇರಿಯಲ್ಲಿರಿಸಿ, ಮುಂದಿನ ಸರಕಾರದ ನಿರ್ಧಾರಕ್ಕೆ ಬಿಡಲು ತೀಮಾನಿಸಲಾಯಿತು.[ಸರ್ಕಾರಿ ಕಚೇರಿಗಳ ಸುಧಾರಣೆಗೆ ಸಿಎಂ ಯೋಗಿ ಮತ್ತೊಂದು ಹೆಜ್ಜೆ]
ಇದರ ಆರ್ಥಿಕ ಮೌಲ್ಯವನ್ನು ಲೆಕ್ಕ ಹಾಕಿ, ಅಖಿಲೇಶ್ ಯಾದವ್ ಬ್ಯಾಗ್ ನೇ ವಿತರಿಸಲು ಯೋಗಿ ನಿರ್ಧರಿಸಿದ್ದಾರೆ. ಆದರೆ ಮುಖ್ಯಮಂತ್ರಿಯ ಈ ಕ್ರಮವನ್ನು ಅಗತ್ಯಕ್ಕಿಂತ ಹೆಚ್ಚು ಹೊಗಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷ ಹೇಳಿದೆ. 2012ರಲ್ಲಿ ಅಖಿಲೇಶ್ ಅಧಿಕಾರಕ್ಕೆ ಬಂದ ಮೇಲೆ ಅವರಿಗೂ ಮುಂಚೆ ಅಧಿಕಾರದಲ್ಲಿದ್ದ ಮಾಯಾವತಿಯವರ ಯಾವ ಪ್ರತಿಮೆಯನ್ನೂ ಅಲ್ಲಿನ ಉದ್ಯಾನಗಳಿಂದ ತೆಗೆಸಲಿಲ್ಲ ಎಂಬುದನ್ನು ಎಸ್ ಪಿ ಮುಖಂಡರು ನೆನಪಿಸಿದ್ದಾರೆ.