ಪಡೆಯಪ್ಪನನ್ನು ಕೆಣಕಿದ ವಿಜಯಕಾಂತ್: ತಿರುಗಿಬಿದ್ದ ರಜನಿ ಫ್ಯಾನ್ಸ್
ರಜನಿಕಾಂತ್ ಅನ್ನೋ ಹೆಸರೇ ಕೋಟ್ಯಾಂತರ ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸುವಂತದ್ದು. ಹಾಗಿದ್ದಾಗ್ಯೂ, ಡಿಎಂಡಿಕೆ ಮುಖ್ಯಸ್ಥ ಕ್ಯಾಪ್ಟನ್ ವಿಜಯಕಾಂತ್ ಸುಖಾಸುಮ್ಮನೆ ಚುನಾವಣಾ ಪ್ರಚಾರದ ವೇಳೆ ರಜನಿಕಾಂತ್ ವಿರುದ್ದ ಕೆಣಕುವ ಹೇಳಿಕೆಯನ್ನು ನೀಡಿದ್ದಾರೆ.
ರಾಜಕೀಯದಲ್ಲಿ ತಂತ್ರಗಾರಿಕೆ ಬಹು ಮುಖ್ಯ, ಆದರೆ ಮುಖಂಡರು ನೀಡುವ ಹೇಳಿಕೆ ತಮ್ಮದೇ ಪಕ್ಷದ ಮತಬ್ಯಾಂಕಿಗೆ ಏಟು ಬಿದ್ದರೆ? ರಜನಿಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ ಎನ್ನುವುದನ್ನು ಅರಿತಿದ್ದರೂ ವಿಜಯಕಾಂತ್, ಜೇನುಗೂಡಿಗೆ ಕಲ್ಲೆಸೆದು ರಜನಿ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. (ಜಯಾ ವಿರುದ್ದ ಕಣಕ್ಕಿಳಿದ ಮಂಗಳಮುಖಿ)
ಒಮ್ಮೆ ಅಧಿಕಾರದಲ್ಲಿ ಇದ್ದವರು, ಇನ್ನೊಮ್ಮೆ ಅಧಿಕಾರದಲ್ಲೂ ಮುಂದುವರಿಯುತ್ತಾರೆ ಎನ್ನುವ ಗ್ಯಾರಂಟಿ ಇಲ್ಲದ ರಾಜ್ಯವೆಂದರೆ ಅದು ತಮಿಳುನಾಡು. ಇನ್ನು ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋದ್ದಕ್ಕಿಂತ ಬೋರ್ಡಿಗೇ ಇಲ್ಲ ಎನ್ನುವುದೇ ಸೂಕ್ತ.[ಅಸಹ್ಯವಾಗಿ ಯೋಗ ಮಾಡಿ ಅಪಹಾಸ್ಯಕ್ಕೀಡಾಗಿದ್ದ ವಿಜಯಕಾಂತ್]
ತಮಿಳುನಾಡಿನಲ್ಲಿ ಏನಿದ್ದರೂ ದ್ರಾವಿಡ ಪಕ್ಷಗಳದ್ದೇ ಕಾರುಬಾರು. ಎಐಡಿಎಂಕೆ ಮತ್ತು ಡಿಎಂಕೆ ಪ್ರಮುಖ ಪಕ್ಷಗಳಾಗಿದ್ದರೂ, ಡಿಎಂಡಿಕೆ, ಎಂಡಿಎಂಕೆ, ಪಿಎಂಕೆ ಸ್ಥಳೀಯ ಪಕ್ಷಗಳು ತಮಿಳುನಾಡು ಚುನಾವಣೆಯ ರಾಜಕೀಯ ಚಿತ್ರಣವನ್ನು ಬದಲಿಸುವ ಶಕ್ತಿಯನ್ನು ಹೊಂದಿರುವಂತಹ ಪಕ್ಷಗಳು. (ರಜನಿಗೆ ಪದ್ಮಪ್ರಧಾನ)
ರಜನಿಕಾಂತ್ ವಿರುದ್ದ ಈ ಹಿಂದೆ ಯಾವುದೇ ಹೇಳಿಕೆ ನೀಡದ ವಿಜಯಕಾಂತ್, ಚುನಾವಣೆಯ ಪ್ರಚಾರದ ವೇಳೆ ರಜನಿಯನ್ನು ಅಪಹಾಸ್ಯ ಮಾಡಿರುವುದು, ಅಲ್ಲಿನ ರಾಜಕೀಯ ಚಿತ್ರಣವನ್ನೇ ಬದಲಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಅಂದು ರಜನಿ ನೀಡಿದ್ದ ಹೇಳಿಕೆ, ಜಯಾ ಸರಕಾರವನ್ನೇ ಬುಡಮೇಲು ಮಾಡಿತ್ತು, ಮುಂದೆ ಸ್ಲೈಡಿನಲ್ಲಿ ಓದಿ...
ಜಯಲಲಿತಾಗೆ ಆಗಿತ್ತು ಹಿಂದೊಮ್ಮೆ ಅನುಭವ
1991ರ ಅಸೆಂಬ್ಲಿ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮತ್ತು ಕಾಂಗ್ರೆಸ್ ಒಕ್ಕೂಟ ಗೆದ್ದು ಅಧಿಕಾರಕ್ಕೆ ಬಂದಿತ್ತು. ಆದರೆ ಆ ಅವಧಿಯಲ್ಲಿ ನಡೆದ ಹಗರಣಗಳಿಂದ ಜನ ರೋಸಿ ಹೋಗಿದ್ದರು.
ಕೇವಲ ನಾಲ್ಕು ಸೀಟ್ ಗೆದ್ದಿದ್ದ ಜಯಾ
ಈ ಬಾರಿಯ (1996) ಚುನಾವಣೆಯಲ್ಲೂ ನೀವು ಜಯಾಗೆ ಮತ ಹಾಕಿದರೆ ಆ ದೇವರು ಕೂಡಾ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ರಜನಿಕಾಂತ್ ಹೇಳಿದ್ದರು. ಹಗರಣ ಮತ್ತು ರಜನಿ ಹೇಳಿಕೆಯ ಪ್ರಭಾವ ಎಷ್ಟಿತ್ತೆಂದರೆ ಜಯಾ ಕೇವಲ ನಾಲ್ಕು ಸೀಟ್ ಗೆದ್ದಿದ್ದರು. ಖುದ್ದು ಜಯಾ ಕೂಡಾ ಪರಾಭವ ಅನುಭವಿಸಿದ್ದರು. ಆ ಚುನಾವಣೆಯ ವೇಳೆ ರಜನಿ, ಡಿಎಂಕೆ ಪರವಾಗಿದ್ದರು.
ಕ್ಯಾಪ್ಟನ್ ಹೇಳಿದ್ದು
ತಿರುವಳ್ಳೂರು ಜಿಲ್ಲೆಯ ತಿರುಥಾನಿ ಎನ್ನುವಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕ್ಯಾಪ್ಟನ್ ವಿಜಯಕಾಂತ್, ರಜನಿ ಶೈಲಿಯಲ್ಲೇ ಮಾತನಾಡಿ ನಾನು ರಜನಿಕಾಂತ್ ರೀತಿಯಲ್ಲಿ ಭಯ ಪಡುವವನಲ್ಲ ಎಂದು ಹೇಳಿದ್ದರು.
ಸಿನಿಮೀಯ ಶೈಲಿಯಲ್ಲಿ ವಿಜಯಕಾಂತ್ ಭಾಷಣ
ಇದಾದ ನಂತರ ವಿಲ್ಲಿವಕ್ಕಂ ಎನ್ನುವಲ್ಲಿ ಭಾಷಣ ಮಾಡುತ್ತಾ ಕ್ಯಾಪ್ಟನ್, 'ನಾನು ವಿಜಯಕಾಂತ್, ಯಾವುದಕ್ಕೂ ಹೆದರುವವನಲ್ಲ. ನಾನು ಒಳ್ಳೆಯವರಿಗೆ ಒಳ್ಳೆಯವನು, ನಾನು ರಜನಿ ಅಣ್ಣನ ಹಾಗೇ ಹೆದರು ಪುಕ್ಲನಲ್ಲ' ಎಂದು ರಜನಿ ಹಿಂದಿನ ಚಿತ್ರದ ಸಂಭಾಷಣೆ ಶೈಲಿಯಲ್ಲೇ ಕ್ಯಾಪ್ಟನ್ ಹೇಳಿದ್ದರು.
ರಜನಿ ಅಭಿಮಾನಿಗಳ ಆಕ್ರೋಶ
ವಿಜಯಕಾಂತ್ ಹೇಳಿಕೆ ವಿರುದ್ದ ರಜನಿಕಾಂತ್ ಅಭಿಮಾನಿಗಳು ಅಲ್ಲಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ತಮ್ಮ ಪಕ್ಷ ಮತ್ತು ಪಕ್ಷದ ಪ್ರಣಾಳಿಕೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ವಿಜಯಕಾಂತ್, ರಜನಿ ಬಗ್ಗೆ ಮಾತನಾಡಿದ್ದು ತಪ್ಪು. ನಾವೆಲ್ಲಾ ರಜನಿ ಅಭಿಮಾನಿಗಳು ವಿಜಯಕಾಂತ್ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಮಾನಸಿಕ ಸ್ಥಿಮಿತ
ವಿಜಯಕಾಂತ್ ಮಾನಸಿಕ ಸ್ಥಿಮಿತ ಕಳೆದು ಕೊಂಡಿರಬೇಕು, ಹಾಗಾಗಿ ರಜನಿಕಾಂತ್ ಬಗ್ಗೆ ಮಾತನಾಡುತ್ತಾರೆ. ನಾವೆಲ್ಲಾ ರಜನಿ ಅಭಿಮಾನಿಗಳು ಈ ಬಾರಿ ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷವನ್ನು ಬೆಂಬಲಿಸಲಿದ್ದೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.