ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಹೃದಯಾಘಾತ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾಗೆ ಭಾನುವಾರ (ಡಿ 4) ಸಂಜೆ 4.30ರ ಸುಮಾರಿಗೆ ಹೃದಯಾಘಾತವಾಗಿದೆ ಎಂದು ಅಪೋಲೋ ಆಸ್ಪತ್ರೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚೆನ್ನೈ, ಡಿ 4: ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾಗೆ ಹೃದಯಾಘಾತವಾಗಿದೆ ಎಂದು ಅಪೋಲೋ ಆಸ್ಪತ್ರೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ (ಡಿ 4) ಸಂಜೆ 4.30ರ ಸುಮಾರಿಗೆ, ಜಯಾ ಹೃದಯಾಘಾತಕ್ಕೆ ಒಳಗಾಗಿದ್ದಾರೆಂದು ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಆಸ್ಪತ್ರೆಯ ನುರಿತ 8 ವೈದ್ಯರಿಂದ ಜಯಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಯಾಗೆ ಹೃದಯಾಘಾತವಾಗಿರುವ ಸುದ್ದಿ ಹರಿದಾಡುತ್ತಿದ್ದಂತೇ, ಅಪೋಲೋ ಆಸ್ಪತ್ರೆಯ ಮುಂದೆ ಜಯಾ ಅಭಿಮಾನಿಗಳು ದೌಡಾಯಿಸುತ್ತಿದ್ದು, ಆಸ್ಪತ್ರೆಯ ಮುಂದೆ ಅಭಿಮಾನಿಗಳು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ.
ಈ ನಡುವೆ ಮುಂಬೈನಲ್ಲಿರುವ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್, ಪ್ರವಾಸ ಮೊಟಕುಗೊಳಿಸಿ ಚೆನ್ನೈಗೆ ವಾಪಸ್ ಆಗುತ್ತಿದ್ದಾರೆ. ಪೊಲೀಸರು ಕಟ್ಟೆಚ್ಚರದಲ್ಲಿರುವಂತೆ ತಮಿಳುನಾಡಿನ ಎಲ್ಲಾ ಪೊಲೀಸ್ ಸ್ಟೇಷನ್ ಗಳಿಗೆ ಸೂಚಿಸಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ತಮಿಳುನಾಡು ರಾಜ್ಯಪಾಲರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದು, ಜಯಾ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ಸರಕಾರದ ಹಿರಿಯ ಸಚಿವರು, ಎಐಡಿಎಂಕೆ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಆಸ್ಪತ್ರೆಯ ಹಿರಿಯ ವೈದರು ತುರ್ತು ಸಭೆ ನಡೆಸುತ್ತಿದ್ದಾರೆ.
ಸೆ 22ರಂದು ಆಸ್ಪತೆಗೆ ದಾಖಲಾಗಿದ್ದ ಜಯಾ, ಆರೋಗ್ಯದ ಬಗ್ಗೆ ಹಲವು ಉಹಾಪೋಹ ವರದಿಗಳು ಹರಿದಾಡುತ್ತಲೇ ಇದ್ದವು. ಇದರ ನಡುವೆ, ಅಪೋಲೋ ಆಸ್ಪತ್ರೆ ತನ್ನ ಪತ್ರಿಕಾ ಪ್ರಕಟಣೆಯ ಮೂಲಕ ಜಯಾ ಆರೋಗ್ಯ ಸುಧಾರಿಸುತ್ತಿದೆಯೆಂದು ಹೇಳಿಕೆ ನೀಡಿತ್ತು.
ಜಯಾಲಲಿತಾ ಅವರಿಗೆ ಇದು ಮೂರನೇ ಬಾರಿ ಹೃದಯಾಘಾತವಾಗಿದ್ದು, ಕೇಬಲ್ ಟಿವಿ ಪ್ರಸಾರವನ್ನು ತಮಿಳುನಾಡಿನಲ್ಲಿ ಸದ್ಯ ಸ್ಥಗಿತಗೊಳಿಸಲಾಗಿದೆ.