ಯೋಧರ ಮೇಲೆ ಉಗ್ರರ ಕೇಕೆ: ಮೋದಿ 56 ಇಂಚು ಎದೆ ಪ್ರದರ್ಶನ ಯಾವಾಗ?
ದೇಶದ ಸ್ವಾಭಿಮಾನವನ್ನೇ ಕೆಣಕುವಂತಹ, ಸೈನಿಕರ ಶಕ್ತಿಯನ್ನೇ ಅಡಗಿಸುವಂತಹ, ಯೋಧರ ಮೇಲೆ ಉಗ್ರರು ನಡೆಸುತ್ತಿರುವ ಪದೇ ಪದೇ ದಾಳಿಗಳು ನಮ್ಮ ಬೇಹುಗಾರಿಕೆ ಇಲಾಖೆ, ರಕ್ಷಣಾ ಸಚಿವಾಲಯ, ಪ್ರಧಾನಿ ಮೋದಿ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.
ಭಾನುವಾರ (ಸೆ 18) ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದ ಬಾರಾಮುಲ್ಲ ಉರಿ ಕ್ಯಾಂಪ್ ಮೇಲೆ, ಭಾರತದ ಸೇನೆಯ ಮೇಲೆ ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದಂತಹ ಭಯೋತ್ಪಾದಕರ ದಾಳಿ ನಡೆದು, ದೋಗ್ರಾ ರೆಜಿಮೆಂಟ್ ಮತ್ತು ಬಿಹಾರ ರೆಜಿಮೆಂಟಿನ 18 ಯೋಧರು ಹುತಾತ್ಮರಾಗಿದ್ದಾರೆ. (17 ಯೋಧರು ಹುತಾತ್ಮ, 4 ಉಗ್ರರು ಹತ್ಯೆ)
ಭಾರತೀಯ ಸೇನೆಯ ಪ್ರಾಧಮಿಕ ತನಿಖೆಯ ಪ್ರಕಾರ ಪಾಕಿಸ್ತಾನ ಮೂಲದ ಜೈಸ್ ಇ ಮೊಹಮ್ಮದ್ ಸಂಘಟನೆಯ ನಾಲ್ಕು ಉಗ್ರರು ಈ ಪೈಶಾಚಿಕ ಕೃತ್ಯವನ್ನು ನಡೆಸಿ ಇಹಲೋಕದಿಂದ ತೊಲಗಿದ್ದಾರೆ.
ಭಾರತ - ಪಾಕ್ ನಿಯಂತ್ರಣ ರೇಖೆಯ (LoC) ಕೆಲವೇ ಕಿಲೋಮೀಟರ್ ದೂರದಲ್ಲಿರುವ ಉರಿ ಕ್ಯಾಂಪ್ ಸದಾ ಯೋಧರ ಚಲನವಲನದಿಂದ ಕೂಡಿರುವಂತದ್ದು. ಹಾಗಿದಾಗ್ಯೂ, ಉಗ್ರರ ಈ ಅಟ್ಟಹಾಸ ಸೇನೆಯ ಹಿರಿಯ ಅಧಿಕಾರಿಗಳನ್ನೇ ತಬ್ಬಿಬ್ಬಾಗಿಸುವಂತೆ/ಮುಜುಗರಕ್ಕೀಡಾಗುವಂತೆ ಮಾಡಿದೆ. ಜೊತೆಗೆ ಮೋದಿ ಸರಕಾರವನ್ನೂ ಕೂಡಾ..
ಘಟನೆ ವರದಿಯಾಗುತ್ತಿದ್ದಂತೇ ಸೇನೆ ಬಾರಾಮುಲ್ಲಾದಿಂದ ಉರಿಗೆ ತುರ್ತು ಸೌಲಭ್ಯ ಕಳುಹಿಸಿದರೂ, ಅಷ್ಟೊತ್ತಿಗೆ ಹದಿನೇಳು ಯೋಧರನ್ನು ದೇಶ ಕಳೆದುಕೊಂಡರೆ, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ದೇಶ ತನ್ನ ಸೈನಿಕರನ್ನು ಕಳೆದುಕೊಂಡಿದ್ದು ಒಂದೆಡೆಯಾದರೆ, ಹುತಾತ್ಮರಾದ ಕುಟುಂಬದ ಪರಿಸ್ಥಿತಿ ಹೇಗಿರಬೇಡ ಎನ್ನುವುದನ್ನು ಮೋದಿ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. (ಉಗ್ರರನ್ನು ಗಡಿಯಲ್ಲಿ ಹೊಡೆದುರುಳಿಸಿದ ಸೇನಾಪಡೆ)
ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ಉಗ್ರ ಚಟುವಟಿಕೆಗೆ ಪಾಕಿಸ್ತಾನ ಬಾಹ್ಯ/ಪ್ರತ್ಯಕ್ಷ ಬೆಂಬಲ ನೀಡುತ್ತಿರುವುದು ಊರಿಗೆಲ್ಲಾ ಗೊತ್ತಿರುವ ವಿಚಾರ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಭಯೋತ್ಪಾದನೆ ಮತ್ತು ಪಾಕಿಸ್ತಾನದ ವಿರುದ್ದ ಪ್ರಖರ ಭಾಷಣ ಮಾಡಿ 56 ಇಂಚು ಎದೆಯ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, ಪಾಕ್ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುವುದು ಯಾವಾಗ ಎನ್ನುವುದೇ ಇಲ್ಲಿ ಪ್ರಶ್ನೆ?
ಭಾರತದ ಯೋಧರು, ಆರ್ಮಿ ಕ್ಯಾಂಪ್ ಮತ್ತು ಜನರ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ಉಗ್ರರ ದಾಳಿಯ ವಿವರ, ಸ್ಲೈಡಿನಲ್ಲಿ..
ಮಾರ್ಚ್ 2013
ಮಾರ್ಚ್ 31, 2013ರಂದು ಶ್ರೀನಗರ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿದ ಉಗ್ರರು ಐದು ಯೋಧರು ಹತ್ಯೆಗೈದಿದ್ದರು.
ಜೂನ್ 2013
ಜೂನ್ 24, 2013ರಂದು ಶ್ರೀನಗರದ ಹೈದ್ರೋಪುರದಲ್ಲಿ ನಡೆದ ದಾಳಿಯಲ್ಲಿ ಎಂಟು ಯೋಧರು ಹುತಾತ್ಮರಾಗಿದ್ದರು.
ಆತ್ಮಹತ್ಯಾ ದಾಳಿ
ಸೆಪ್ಟಂಬರ್ 26, 2013ರಂದು ಜಮ್ಮು ಕಾಶ್ಮೀರದ ಕಥುರಾ ಮತ್ತು ಸಾಂಬಾ ಜಿಲ್ಲೆಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಎಂಟು ಯೋಧರು ಮತ್ತು ಇಬ್ಬರು ನಾಗರೀಕರು ಸಾವನ್ನಪ್ಪಿದ್ದರು.
ಡಿಸೆಂಬರ್ 2014
ಡಿಸೆಂಬರ್ 5, 2014ರಂದು ಮೊಹ್ರಾದಲ್ಲಿರುವ 31 ಫೀಲ್ಡ್ ರೆಜಿಮೆಂಟ್ ಕ್ಯಾಂಪ್ ಮೇಲೆ ದಾಳಿ, ಹನ್ನೊಂದು ಯೋಧರ ಸಾವು.
ಪಂಜಾಬಿನ ಗುರುದಾಸಪುರ
ಜುಲೈ 27,2015ರಂದು ಪಂಜಾಬಿನ ಗುರುದಾಸಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹತ್ತು ಯೋಧರು ಹುತಾತ್ಮರಾದರೆ, 15 ಜನರಿಗೆ ಗಾಯಗಳಾಗಿದ್ದವು.
ಅನಂತನಾಗ್ ಜಿಲ್ಲೆ
ಡಿಸೆಂಬರ್ 7, 2015ರಂದು ಅನಂತನಾಗ್ ಜಿಲ್ಲೆ ಬಿಜ್ ಬೆಹ್ರಾದಲ್ಲಿ ಆರು ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು.
ಪಠಾಣಕೋಟ್
ಜನವರಿ 2,2016ರಂದು ಪಠಾಣಕೋಟ್ ನ ವಾಯುನೆಲೆಯ ಮೇಳೆ ಉಗ್ರರು ದಾಳಿ ನಡೆಸಿದ್ದರು. ಏಳು ಯೋಧರು ಸಾವನ್ನಪ್ಪಿದ್ದರು.
ಕಾಶ್ಮೀರದ ಪಾಂಪೋರ್
ಜೂನ್ 25, 2016ರಂದು ಕಾಶ್ಮೀರದಿಂದ ಹದಿನಾಲ್ಕು ಕಿ.ಮೀ ದೂರದಲ್ಲಿರುವ ಪಾಂಪೋರ್ ನಲ್ಲಿರುವ ಪಂಥಾ ಚೌಕ್ ನಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ನಡೆದು, ಎಂಟು ಯೋಧರು ಹುತಾತ್ಮರಾಗಿದ್ದರು. ಜೊತೆಗೆ 20 ಜನ ಗಾಯಗೊಂಡಿದ್ದರು.
ಅಸ್ಸಾಂನ ಕೊಕ್ರೋಜಾರ್
ಆಗಸ್ಟ್ 5, 2016ರಂದು ಅಸ್ಸಾಂನ ಕೊಕ್ರೋಜಾರ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 14 ಸಾರ್ವಜನಿಕರು ಸಾವನ್ನಪ್ಪಿದ್ದರು. ಬಾಲಾಜಾನ್ ತಿನಿಯಾಲಿ ಮಾರ್ಕೆಟ್ ನುಗ್ಗಿದ್ದ ಉಗ್ರರು ಮನಸೋ ಇಚ್ಚೆ ಗುಂಡಿನ ಸುರಿಮಳೆಗೈದಿದ್ದರು.
ಬಾರಾಮುಲ್ಲಾದಲ್ಲಿ ದಾಳಿ
ಆಗಸ್ಟ್ 17,2016ರಂದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದಿದೆ. ಇಬ್ಬರು ಯೋಧರು ಸೇರಿದಂತೆ ಮೂವರು ಈ ದಾಳಿಯಲ್ಲಿ ಹುತಾತ್ಮರಾಗಿದ್ದು, ಐವರು ಯೋಧರು ಗಾಯಗೊಂಡಿದ್ದಾರೆ.
ಬಾರಾಮುಲ್ಲ ಉರಿ ಕ್ಯಾಂಪ್
ಜಮ್ಮು, ಕಾಶ್ಮೀರದ ಬಾರಾಮುಲ್ಲ ಉರಿ ಕ್ಯಾಂಪ್ ಮೇಲೆ ಸೆಪ್ಟಂಬರ್ 18, 2016ರಂದು ಉಗ್ರರ ದಾಳಿ, 18 ಯೋಧರು ಹುತಾತ್ಮ.