ಈ ಊರಲ್ಲಿ ಇರೋರೆಲ್ಲಾ ಮನೇಲಿ ತರಬೇತಿ ಪಡೆದ ಖತರ್ನಾಕ್ ಕಳ್ಳರು!
ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಐತಿಹಾಸಿಕ ಶ್ರೀರಂಗಂ ದೇವಾಲಯದಿಂದ ಕೂಗಳತೆ ದೂರದಲ್ಲಿರುವ ದಿಂಡಿಗಲ್ ರಸ್ತೆಯಲ್ಲಿರುವ ರಾಂಜಿ ನಗರ ಎನ್ನುವ ಹಳ್ಳಿ ವಿಶಿಷ್ಟ ಕಾರಣಕ್ಕಾಗಿ ಕುಪ್ರಸಿದ್ದಿ ಪಡೆದಿದೆ.
ಈ ಪುಟ್ಟ ಗ್ರಾಮದಲ್ಲಿರುವ ಎಲ್ಲಾ ಮನೆಯ ಸದಸ್ಯರು ಪ್ರಳಯಾಂತಕ ಕಳ್ಳರು, ಇವರ ವೃತ್ತಿಯೇ ಕಳ್ಳತನ. ಜನರನ್ನು ಯಾಮಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಈ ಗ್ರಾಮದವರಿಗೆ ಕಳ್ಳತನ ಮಾಡಲು ನಿರ್ದಿಷ್ಟ ಕ್ಷೇತ್ರದ ವ್ಯಾಪ್ತಿ ಅನ್ನೋದು ಇಲ್ಲ.
ಅಂದಾಜು 350 ಕುಟುಂಬ ವಾಸವಾಗಿರುವ ಈ ಹಳ್ಳಿಯಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಚಿಕ್ಕಂದಿನಿಂದಲೇ ಕಳ್ಳತನ ಮಾಡುವುದು ಹೇಗೆ, ಸಿಕ್ಕಿ ಹಾಕಿಕೊಂಡರೆ ಬಚಾವ್ ಆಗುವುದು ಹೇಗೆ ಎನ್ನುವುದರ ಬಗ್ಗೆ ಕುಟುಂಬದ ಹಿರಿಯ ಸದಸ್ಯರೇ ತರಬೇತಿ ನೀಡುತ್ತಾರೆ. (ಸಿಸಿಬಿ ಪೊಲೀಸರ ಬಲೆಗೆ ವಿಗ್ರಹ ಚೋರರು)
ತಮಿಳುನಾಡಿನಿಂದ ರೈಲಿನ ಮೂಲಕ ನಗರ ಪ್ರವೇಶಿಸುವ ಮುನ್ನವೇ ಈ ಕಳ್ಳರು, ಊರಿನ ಶ್ರೀಮಂತ ಬಡಾವಣೆಯ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಸ್ಕೆಚ್ ಹಾಕಿಕೊಂಡೇ ಬಂದಿರುತ್ತಾರೆ. ಹೆಚ್ಚಾಗಿ ಎಂಟರಿಂದ ಹನ್ನೆರಡು ಜನರ ತಂಡವಾಗಿ ಬರುವ ಈ ಕಳ್ಳರ ವೇಷಭೂಷಣ ಕಂಡರೆ ಮೇಲ್ನೋಟಕ್ಕೆ ಇವರು ಕಳ್ಳರಾ ಎನ್ನುವಂತೆ ಗರಿಗರಿ ಬಟ್ಟೆ ಧರಿಸಿರುತ್ತಾರೆ.
ಹಣ ಲಪಟಾಯಿಸಲು ಬರುವ ರಾಂಜಿ ಊರಿನ ಕಳ್ಳರು ನಗರದ ಹೊರವಲದ ಲಾಡ್ಜ್ ನಲ್ಲಿ ವಾಸ್ತ್ಯವ್ಯ ಹೂಡುತ್ತಾರೆ. ತಪ್ಪು ಮಾಹಿತಿ, ಪೂರ್ವ ಯೋಜನೆಯಂತೆ ಸಿದ್ದಪಡಿಸಿರುವ ಭಾವಚಿತ್ರವನ್ನು ವಸತಿಗೃಹದಲ್ಲಿ ನೀಡಿ ರೂಮ್ ಪಡೆದುಕೊಳ್ಳುತ್ತಾರೆ.
ಇವರು ಎಷ್ಟು ವೃತ್ತಿಪರತೆಯಿಂದ ಕೆಲಸ ಮಾಡುತ್ತಾರೆಂದರೆ ನಿರ್ದಿಷ್ಟ ಮೊತ್ತದ ನಗನಾಣ್ಯ ದೋಚುವ ಯೋಜನೆ ರೂಪಿಸಿಕೊಂಡು ನಗರ ಪ್ರವೇಶಿಸುವ ಇವರು, ತಮ್ಮ ಕೆಲಸ ಮುಗಿದೊಡನೇ ತಮ್ಮ ಊರಿಗೆ ವಾಪಸ್ ಹೊರಡುತ್ತಾರೆ. ಮುಂದೆ ಓದಿ..
ಗ್ರಾಹಕರ ಸೋಗಿನಲ್ಲಿ
ಗ್ರಾಹಕರ ಸೋಗಿನಲ್ಲಿ ಬ್ಯಾಂಕಿಗೆ ಎಂಟ್ರಿ ಕೊಡುವ ಇವರು ಹೆಚ್ಚು ಹಣ ಡ್ರಾ ಮಾಡುವವರನ್ನು ಹಿಂಬಾಲಿಸುತ್ತಾರೆ. ಹತ್ತು ರೂಪಾಯಿ ನೋಟು ಕೆಳಗೆ ಬಿದ್ದಿದೆ, ಬಟ್ಟೆ ಮೇಲೆ ಗಲೀಜು ಬಿದ್ದಿದೆ, ವ್ಹೀಲ್ ಪಂಕ್ಚರ್ ಆಗಿದೆ ಎಂದು ಗಮನ ಬೇರೆ ಕಡೆ ಸೆಳೆದು ಹಣ ಲಪಟಾಯಿಸುವುದರಲ್ಲಿ ಈ ಗ್ಯಾಂಗ್ ಎತ್ತಿದ ಕೈ.
ಮೈಸೂರಿನ ದೇವರಾಜ ಮತ್ತು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿ
2009ರಲ್ಲಿ ಈ ಗ್ಯಾಂಗ್ ಮೈಸೂರಿನ ದೇವರಾಜ ಮತ್ತು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಯೊಂದರಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಡ್ರಾ ಮಾಡಿದ ಗ್ರಾಹಕನಿಂದ ಹಣ ಲಪಾಟಯಿಸಿ ಪರಾರಿಯಾಗುತ್ತಿದ್ದಾಗ ತಂಡದ ಒಬ್ಬ ಸದಸ್ಯನನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸರು ಬರೀಗೈನಲ್ಲಿ ವಾಪಸ್
ತಂಡದ ಬಂಧಿತ ಸದಸ್ಯನ ಮಾಹಿತಿಯ ಮೇರೆಗೆ ರಾಂಜಿ ನಗರಕ್ಕೆ ಹೋದಾಗ ಹೆಚ್ಚಿನ ಯಾವ ಮಾಹಿತಿಯನ್ನು ಕಲೆಹಾಕಲಾಗದೇ ಪೊಲೀಸರು ಬರೀಗೈನಲ್ಲಿ ವಾಪಸಾಗಿದ್ದರು. ಬಂಧನಕ್ಕೊಳಗಾಗುವ ತಂಡದ ಸದಸ್ಯರನ್ನು ಬೇಲ್ ಮೇಲೆ ಬಿಡಿಸಲು ವಕೀಲರನ್ನೂ ಈ ಗ್ಯಾಂಗ್ ಹೊಂದಿದೆ.
ಮರಿಯಮ್ಮ ದೇವಾಲಯದ ಭಕ್ತರು
ಮರಿಯಮ್ಮ ದೇವಾಲಯದ ಭಕ್ತರಾಗಿರುವ ಈ ಗ್ಯಾಂಗಿನ ಸದಸ್ಯರಿಂದ ಮಾಹಿತಿ ಪಡೆಯಲು ಅಥವಾ ಕಳವಾದ ವಸ್ತುವನ್ನು ಪಡೆಯಲು ಪೊಲೀಸರು ರಾಂಜಿ ನಗರಕ್ಕೆ ಬಂದರೆ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಬೇರಡೆ ಸಾಗಿಸುವುದು ಇವರ ವೃತ್ತಿ ಧರ್ಮದ ಇನ್ನೊಂದು ಭಾಗ.
ಭರ್ಜರಿ ಭೇಟೆಯಾಡಿದ ಬೆಂಗಳೂರು ಪೊಲೀಸರು
ಮಫ್ತಿಯಲ್ಲಿ ತಮ್ಮೂರಿಗೆ ಬರುವ ಪೊಲೀಸರ ವಾಸನೆಯನ್ನು ಪತ್ತೆಹಚ್ಚುವಲ್ಲಿ ನಿಷ್ಣಾತರಾಗಿರುವ ಈ ಊರಿನವರು, ಪೊಲೀಸ್ ನಾಯಿ ವಂದಿಚ್ಚು (ಪೊಲೀಸ್ ನಾಯಿ ಬಂತು) ಎಂದು ಊರವರನ್ನೆಲ್ಲಾ ಅಲರ್ಟ್ ಮಾಡುತ್ತಾರೆ. ಸದ್ಯ, ಇತ್ತೀಚೆಗೆ ಭರ್ಜರಿ ಭೇಟೆಯಾಡಿರುವ ಬೆಂಗಳೂರು ಪೊಲೀಸರು ಈ ಗ್ಯಾಂಗಿನ ಹತ್ತು ಸದಸ್ಯರನ್ನು ಬಂಧಿಸಿದ್ದಾರೆ. ಇದರಿಂದ ಸುಮಾರು 15 ಪ್ರಕರಣಗಳು ಪತ್ತೆಯಾಗಿದೆ, ಲಕ್ಷಾಂತರ ರೂಪಾಯಿ ವಶ ಪಡೆದುಕೊಂಡಿದ್ದಾರೆ.