ಹೋಗಿ, ಕೆಲಸ ಮುಗಿಸಿ, ವಾಪಸ್ ಬನ್ನಿ: ತಲೆ ಎಣಿಸ್ತಾ ನಿಲ್ಲಬೇಕಿಲ್ಲ...
ಬೆಂಗಳೂರು, ಅಕ್ಟೋಬರ್ 9: ಅವರು ಹೋದರು, ನಾಶಪಡಿಸಿದರು ಮತ್ತು ವಾಪಸ್ ಬಂದರು. ವಿಶೇಷ ಪಡೆಯ ಸರ್ಜಿಕಲ್ ಸ್ಟ್ರೈಕ್ ನ ಭಾರತೀಯ ಸೇನೆ ಸಾರಾಂಶದ ರೀತಿ ಹೇಳುವುದು ಹೀಗೆ.
ಗುರಿಯನ್ನು ನಿಶ್ಚಯಿಸಿಕೊಂಡ ಮೇಲೆ, ಗಡಿನಿಯಂತ್ರಣ ರೇಖೆಯನ್ನು ದಾಟಿ ಆ ಗುರಿಯನ್ನು ಮುಗಿಸುವುದಷ್ಟೇ ಯೋಜನೆ. ಯಾವುದೇ ಭಯೋತ್ಪಾದಕರನ್ನು ಹಿಡಿದು ತರುವ ಅಗತ್ಯ ಇಲ್ಲ ಅಂತ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದರು.
ಐದು ಕಿಲೋಮೀಟರ್ ಫಾಸಲೆಯೊಳಗಿರುವ ಉಗ್ರರ ನೆಲೆಗಳನ್ನು ತಲುಪುವುದು ಸುಲಭದ ಸಂಗತಿಯಾಗಿರಲಿಲ್ಲ. ಅದಕ್ಕಾಗಿಯೇ ಸೇನೆ ಥರ್ಮಲ್ ಇಮೇಜರ್ಸ್ ನ ಬಳಸಿತ್ತು. ಜತೆಗೆ ಒಂದೇ ಒಂದು ತಪ್ಪಾಗದ ರೀತಿಯಲ್ಲಿ ಯೋಜನೆ ಸಿದ್ಧಗೊಂಡಾಗಿತ್ತು. ಕಾರ್ಯಾಚರಣೆ ಕ್ಷಿಪ್ರವಾಗಿರಬೇಕು. ಅಂದುಕೊಂಡ ಸಮಯಕ್ಕೆ ಮುಗಿಯಬೇಕು. ಒಂದು ಕ್ಷಣ ಕೂಡ ವ್ಯರ್ಥವಾಗಬಾರದು ಎಂಬ ಸೂಚನೆಯಿತ್ತು.[ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ನಿಜ : ಪಾಕ್ ಅಧಿಕಾರಿ]
ಗುರಿಯಾಗಿ ಇರಿಸಿಕೊಂಡಿದ್ದು ಏಳು ನೆಲೆಗಳನ್ನು. ಈ ಎಲ್ಲವೂ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದವು. ಗುಂಪುಗಳಾಗಿ ಬೇರ್ಪಡೆಯಾದ ತಂಡಗಳು ಏಕಕಾಲಕ್ಕೆ ದಾಳಿ ಮಾಡಿದವು. ಪ್ರತಿ ತಂಡಕ್ಕೆ ಉಗ್ರರ ನೆಲೆ ನಾಶ ಮಾಡುವುದಕ್ಕೆ ಬೇಕಾಗಿದ್ದು ಹದಿನೈದು ನಿಮಿಷಕ್ಕಿಂತ ಕಡಿಮೆ ಕಾಲ. ಲಿಪಾ, ಖೆಲ್, ಭಿಂಬರ್, ಅತ್ಮುಖಂ ಮತ್ತ ತತ್ತಾಪಾನಿಯಲ್ಲಿ ಇದ್ದ ನೆಲೆಗಳು ಛಿದ್ರವಾದವು.
ಗುರಿ ಪೂರ್ತಿ ಅದ ತಕ್ಷಣವೇ ವಾಪಸ್ ಬನ್ನಿ ಎಂಬ ಸೂಚನೆ ಇತ್ತು ವಿಶೇಷ ಪಡೆಗೆ. ಅದ್ದರಿಂದ ದಾಳಿ ವೇಳೆ ಎಷ್ಟು ಉಗ್ರರನ್ನು ಕೊಲ್ಲಲಾಯಿತು ಎಂಬ ಬಗ್ಗೆ ನಿಖರತೆ ಇಲ್ಲ. ಇನ್ನು ಮಾಧ್ಯಮಗಳಲ್ಲಿ ಬಂದ ಸಂಖ್ಯೆ ಅಂದಾಜಿನದು ಅಷ್ಟೇ. ಪ್ರತಿ ನೆಲೆಯಲ್ಲಿ ತಲಾ ಐವರು ಉಗ್ರರು ಇರಬಹುದು. ಇದು ನಮಗೆ ಸಿಕ್ಕ ಅಂದಾಜಿನ ಲೆಕ್ಕ ಎಂದು ಅಧಿಕಾರಿಗಳು ಕೂಡ ಹೇಳಿದ್ದಾರೆ.[ಸರ್ಜಿಕಲ್ ಸ್ಟ್ರೈಕ್ ಬರೀ ಕಥೆ, ಸುಳ್ಳಿನ ಅಂತೆ..ಕಂತೆ: ಕಾಂಗ್ರೆಸ್ ಮುಖಂಡ]
ಉರಿ ಉಗ್ರರ ದಾಳಿಯಲ್ಲಿ ಭಾರತೀಯ ಸೈನಿಕರು 19 ಮಂದಿ ಹುತಾತ್ಮರಾಗಿದ್ದಾರೆ. ಅದು ವಿಶೇಷ ಪಡೆಯ ಮನಸಿನಲ್ಲಿದ್ದ ವಿಷಯ. ಅದಕ್ಕೆ ಪ್ರತೀಕಾರ ಹೇಳಬೇಕು. ಈ ವಿಚಾರದಲ್ಲಿ ಭಾವನಾತ್ಮಕರಾಗಬಾರದು. ಗುರಿ ಪೂರ್ತಿ ಮಾಡಬೇಕಷ್ಟೇ. ಇಷ್ಟೇ ಆಲೋಚನೆ ಇದ್ದದ್ದು. ನಮಗೆ ಯಾರಿಗೂ ಗಾಯ ಕೂಡ ಆಗಲ್ಲ. ಈ ಕಾರ್ಯಾಚರಣೆ ಯಶಸ್ವಿಯಾಗುತ್ತೆ-ಇದು ಆ ಪಡೆ ಹೇಳಿದ ಮಾತು. ಅದರಂತೆಯೇ ನಡೆಯಿತು.
ಇಡೀ ಕಾರ್ಯಾಚರಣೆ ಮುಗಿದ ಬಳಿಕ ದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ವಾರ್ ರೂಮ್ ಗೆ ವಿಶೇಷ ಪಡೆ ತಲುಪಿಸಿದ ಸಂದೇಶ ಏನು ಗೊತ್ತಾ? "ಗುರಿ ಪೂರ್ತಿಯಾಗಿದೆ: ಒಂದು ತರಚು ಗಾಯ ಕೂಡ ಆಗದೆ ವಾಪಸ್ ಬಂದಿದ್ದೀವಿ'.