ಇವಿಎಂ ದುರ್ಬಳಕೆ ಸಾಧ್ಯ: ಹಾಗಾದ್ರೆ ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೀಗೇನಾ?
ಇವಿಎಂ ಟ್ಯಾಂಪರ್ ಮಾಡುವುದು ಹೇಗೆ ಎಂದು ನನಗೆ ತಿಳಿದಿಲ್ಲ. ಆದರೆ ಇವಿಎಂ ದುರ್ಬಳಕೆ ಮಾಡಲು ಹತ್ತು ದಾರಿಗಳಿವೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ.
ನವದೆಹಲಿ, ಏ 16: ಇವಿಎಂ (ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ದುರ್ಬಳಕೆ ಮಾಡಲು ಹತ್ತು ದಾರಿಗಳಿವೆ ಎನ್ನುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ಈಗ ಹೊಸ ಚರ್ಚೆಗೆ ನಾಂದಿಹಾಡಿದೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, ಇವಿಎಂ ಟ್ಯಾಂಪರ್ ಮಾಡುವುದು ಹೇಗೆ ಎಂದು ನನಗೆ ತಿಳಿದಿಲ್ಲ. ಆದರೆ ಅದನ್ನು ದುರ್ಬಳಕೆ ಮಾಡಲು ಹತ್ತು ದಾರಿಗಳಿವೆ ಎನ್ನುವುದನ್ನು ನಾನು ಬಲ್ಲೆ ಎಂದು ಹೇಳಿದ್ದಾರೆ.
ಐಐಟಿ ಖರಗಪುರದ ಮೆಕ್ಯಾನಿಕ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪದವೀಧರರಾಗಿರುವ ಕೇಜ್ರಿವಾಲ್, ಇವಿಎಂ ಚಿಪ್ ಅನ್ನು ತಯಾರು ಮಾಡುವಾಗ ಕೆಲವೊಂದು ಕೋಡ್ ಅನ್ನು ಬಳಸಿ ಮೆಷಿನ್ ಅನ್ನು ದುರ್ಬಳಕೆ ಮಾಡಲು ಸಾಧ್ಯವಿದೆ ಎಂದು ಕೇಜ್ರಿ ಹೇಳಿದ್ದಾರೆ.
ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಎಷ್ಟೇ ಸ್ಪಷ್ಟನೆ ನೀಡಿದರೂ, ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ನಂತರವೂ ಇವಿಎಂ ಸಂಬಂಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.
ಇವಿಎಂ ಹ್ಯಾಕ್ ಮಾಡಬಹುದು ಎನ್ನುವ ಕಾರಣಕ್ಕಾಗಿಯೇ ತಂತ್ರಜ್ಞಾನದಲ್ಲಿ ಮುಂದುವರಿದಿರುವ ಅಮೆರಿಕಾ ಮುಂತಾದ ರಾಷ್ಟ್ರಗಳು ಚುನಾವಣೆಗೆ ಈ ಪದ್ದತಿ ಬಳಸಿಕೊಳ್ಳುತ್ತಿಲ್ಲ. ಜಪಾನ್ ನಲ್ಲಿ ಬ್ಯಾಲಟ್ ಪೇಪರ್ ಬಳಸಲಾಗುತ್ತದೆ.
ಮಧ್ಯಪ್ರದೇಶದ ಭಿಂಡ್ ಮತ್ತು ಧೋಲಾಪುರದ ಚುನಾವಣೆಯಲ್ಲಿ ಇವಿಎಂನಲ್ಲಿ ಯಾವುದೇ ಬಟನ್ ಒತ್ತಿದರೂ ಅದು ಬಿಜೆಪಿ ಪರವಾಗುತ್ತಿತ್ತು ಎನ್ನುವ ವರದಿ ಪ್ರಸಾರವಾಗಿತ್ತು.
ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯನ್ನು ಸ್ವಲ್ಪದಿನದ ಮಟ್ಟಿಗೆ ಮುಂದೂಡಬೇಕೆಂದು ನಾವು ಆಯೋಗವನ್ನು ಒತ್ತಾಯಿಸಿದ್ದೇವೆ ಎಂದು ಕೇಜ್ರಿವಾಲ್ ಸಂದರ್ಶನದಲ್ಲಿ ಹೇಳಿದ್ದಾರೆ. ಇವಿಎಂ ದುರ್ಬಳಕೆಗೆ ಹತ್ತು ದಾರಿಗಳಿಗೆ ಎಂದಿರುವ ಕೇಜ್ರಿವಾಲ್, ವಿವರಿಸಿದ್ದು ಮಾತ್ರ ಒಂದನ್ನು.
ಫೆಬ್ರವರಿ 2015ರಲ್ಲಿ ನಡೆದ ದೆಹಲಿ ಅಸೆಂಬ್ಲಿ ಚುನಾವಣೆಯ ಒಟ್ಟು 70ಕ್ಷೇತ್ರಗಳಲ್ಲಿ 67 ಸ್ಥಾನವನ್ನು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗೆದ್ದಿತ್ತು. ಬಿಜೆಪಿ ಮೂರು ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ.
ಇವಿಎಂ ಮೇಲೆ ಆರೋಪ ಹೊರಿಸುತ್ತಿರುವ ಕೇಜ್ರಿವಾಲ್ ಪಕ್ಷಕ್ಕೆ ಅಂದು ದೆಹಲಿಯಲ್ಲಿ ಸಿಕ್ಕಿದ್ದ ಅಭೂತಪೂರ್ವ ಜಯ ಇವಿಎಂ ದುರ್ಬಳಕೆ ಇಂದಾಗಿರಬಹುದೇ ಎನ್ನುವ ಮಾತು/ ಟ್ರೋಲ್ ಅಲ್ಲಲ್ಲಿ ಕೇಳಿಬರುತ್ತಿದೆ.