ಬಾಬರಿ ಮಸೀದಿ ಧ್ವಂಸ: ವಿಚಾರಣೆಯನ್ನು 2 ವಾರ ಮುಂದೂಡಿದ ಸುಪ್ರೀಂ
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪಕ್ಷಗಳಿಗೆ ತನ್ನ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚನೆ ನೀಡಿದೆ.
ನವದೆಹಲಿ, ಮಾರ್ಚ್. 23 : 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಪರಾಧ ಸಂಚು ಆರೋಪ ಎದುರಿಸುತ್ತಿರುವ ಎಲ್.ಕೆ.ಅಡ್ವಾಣಿ, ಎಂಎಂ.ಜೋಷಿ ಹಾಗೂ ಬಿಜೆಪಿಯ ಇತರ ಮುಖಂಡರು ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಆರ್.ಎಫ್.ನಾರಿಮನ್ ಅವರಿದ್ದ ನ್ಯಾಯಪೀಠವು ಪ್ರಕರಣದಲ್ಲಿರುವ ಎಲ್ಲ ಪಕ್ಷಗಳು ಏಪ್ರಿಲ್ 6ರೊಳಗೆ ಲಿಖಿತ ರೂಪದಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿದೆ.[25 ವರ್ಷ ಕಳೆದರೂ ಅಡ್ವಾಣಿಯನ್ನು ಬೆಂಬಿಡದ 'ಬಾಬ್ರಿ ಮಸೀದಿ' ಭೂತ]
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಪರಾಧ ಸಂಚು ಆರೋಪದಿಂದ ಬಿಜೆಪಿ ನಾಯಕರ ವಿರುದ್ಧ ವಿಚಾರಣೆ ಕೈ ಬಿಡುವ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಮಾರ್ಚ್ 6ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ತಾಂತ್ರಿಕ ಕಾರಣ ನೀಡಿ ಪ್ರಕರಣದ 13 ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವುದು ತಪ್ಪು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.