ಇದೇನು ಗಡ್ಕರಿಯವರೇ, ಗೋ ರಕ್ಷಕರ ಬಗ್ಗೆ ಹಿಂಗೆ ಹೇಳಿಬಿಟ್ರಿ?!!
ಬಿಜೆಪಿಯು ಗೋ ಮಾಂಸ ನಿಷೇಧದ ಕುರಿತಾದ ನಿಲುವು ಹೊಂದಿದೆ. ಹಾಗೆಂದ ಮಾತ್ರಕ್ಕೆ ಗೋ ರಕ್ಷಣೆಗೆ ಸ್ವಯಂ ಸೇವಕರನ್ನು ಬಿಟ್ಟಿದೆ ಎಂದರ್ಥವಲ್ಲ ಎಂದೂ ಗಡ್ಕರಿ ಹೇಳಿರುವುದು ಗೋ ಸಂರಕ್ಷರು ಒಮ್ಮೆ ತಮ್ಮನ್ನು ತಾವು ಪರಾಮರ್ಶಿಸಿಕೊಳ್ಳುವಂತಾಗಿದೆ.
ನವದೆಹಲಿ, ಮೇ 26: ''ಗೋ ಸಂರಕ್ಷಣೆ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿಯುವವರು ಬಿಜೆಪಿಯವರೂ ಅಲ್ಲ, ಆರೆಸ್ಸೆಸ್ ನವರಲ್ಲ ಅಥವಾ ಸಂಘ ಪರಿವಾರದವರೂ ಅಲ್ಲ'' - ಗೋ ಸಂರಕ್ಷಣೆ ಅಭಿಯಾನದ ಸ್ವಯಂ ಸೇವಕರ ಬಗ್ಗೆ ಇಂಥದ್ದೊಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಸಾಮಾನ್ಯವಾಗಿ, ದೇಶದ ಯಾವುದೇ ಭಾಗದಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ಗಲಾಟೆ, ಜಗಳ, ಹಲ್ಲೆಗಳು ನಡೆದರೆ ಅದಕ್ಕೆ ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘ ಪರಿವಾರದವರ ಕುಮ್ಮಕ್ಕಿತ್ತು ಎಂದು ಜನರು ಭಾವಿಸುತ್ತಿದ್ದರು. ಆದರೆ, ನಿತಿನ್ ಗಡ್ಕರಿಯವರ ಈ ಹೇಳಿಕೆ ಇಂಥ ನಂಬಿಕೆಗಳನ್ನು ತಲೆಕೆಳಗು ಮಾಡುವಂತಾಗಿದೆ.
ಗೋ ರಕ್ಷಕರ ಬಗ್ಗೆ ಮತ್ತೊಂದು ಮಾತು ಹೇಳಿರುವ ನಿತಿನ್, ''ಬಿಜೆಪಿಯು ಗೋ ಮಾಂಸ ನಿಷೇಧದ ಕುರಿತಾದ ನಿಲುವು ಹೊಂದಿದೆ. ಹಾಗೆಂದ ಮಾತ್ರಕ್ಕೆ ಗೋ ರಕ್ಷಣೆಗೆ ಸ್ವಯಂ ಸೇವಕರನ್ನು ಬಿಟ್ಟಿದೆ ಎಂದರ್ಥವಲ್ಲ'' ಎಂದಿದ್ದಾರೆ.
ಇದು ಈವರೆಗೆ ಗೋವುಗಳ ಸಾಗಾಣಿಗೆ ವಾಹನಗಳ ಮೇಲೆ, ಅಕ್ರಮ ಗೋ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುತ್ತಿದ್ದ ಸ್ವಯಂ ಗೋ ರಕ್ಷಕರು ಮುಂದೆ ಇಂಥ ಕೆಲಸಗಳಿಗೆ ಅಣಿಯಾಗುವ ಮುಂಚೆ ಹತ್ತು ಸಾರಿ ಯೋಚಿಸುವಂತೆ ಮಾಡಿದೆ.
ಅದೇನೋ ಸರಿ. ಆದರೆ, ನಿತಿನ್ ಅವರ ಈ ಹೇಳಿಕೆ 'ಜಾಣತನ'ದಿಂದ ಕೂಡಿದೆ ಎಂಬುದಲ್ಲಿ ಎರಡು ಮಾತಿಲ್ಲ ಎಂದೆನಿಸದಿರದು.