ಆ ಒಂದು ಘಟನೆಯೇ ಯೋಗಿ ಸಿಎಂ ಆಗಲು ಮೂಲ ಕಾರಣ!
2013ರಲ್ಲಿ ಅಮಿತ್ ಶಾ ಅವರು, ಉತ್ತರ ಪ್ರದೇಶ ಬಿಜೆಪಿಯ ಹೊಣೆ ಹೊತ್ತಿದ್ದಾಗ ನಡೆದಿದ್ದ ಈ ಘಟನೆ, ಯೋಗಿ ಆದಿತ್ಯಾನಂದರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದನ್ನು ಅಮಿತ್ ಶಾ ಅವರಿಗೆ ಪರಿಚಯ ಮಾಡಿಕೊಟ್ಟಿತ್ತು.
ಲಕ್ನೋ, ಮಾರ್ಚ್ 21: ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ಬಿಜೆಪಿಯು ಭಾರೀ ಬಹುಮತದೊಂದಿಗೆ ಅಲ್ಲಿ ಸರ್ಕಾರ ರಚಿಸುವುದು ಖಾತ್ರಿಯಾಗುತ್ತಿದ್ದಂತೇ, ಮುಂದಿನ ಸಿಎಂ ಆಗೋರು ಯಾರು ಎಂಬ ವಿಚಾರ ಭಾರೀ ಕುತೂಹಲ ಹುಟ್ಟುಹಾಕಿತ್ತು.
ಇದು ಕೇವಲ ಜನ ಸಾಮಾನ್ಯರಿಗಷ್ಟೇ ಅಲ್ಲ, ಖುದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಗೊಂದಲವನ್ನುಂಟು ಮಾಡಿತ್ತು.[ಮಾತು ಉಳಿಸಿಕೊಳ್ಳಲು ಉ.ಪ್ರ. ಬಿಜೆಪಿ ಸರಕಾರಕ್ಕೆ ಬೇಕು 27 ಸಾವಿರ ಕೋಟಿ]
ಆದರೆ, ಒಂದೆರಡು ದಿನಗಳ ಚಿಂತನೆಯ ತರುವಾಯ ಅಮಿತ್ ಶಾ, ಅವರು ಎಲ್ಲರನ್ನೂ ಬಿಟ್ಟು ಆರಿಸಿದ್ದೇ ಯೋಗಿ ಆದಿತ್ಯಾನಂದ ಅವರನ್ನು.
ಹೌದು. ಆದಿತ್ಯಾನಂದರ ಆಯ್ಕೆಯ ಹಿಂದೆ ಆರ್ ಎಸ್ಎಸ್ ಅಥವಾ ಬಿಜೆಪಿಯ ಥಿಂಕ್ ಟ್ಯಾಂಕ್ ಆಗಿರುವ ಅಖಿಲ ಭಾರತೀಯ ಪ್ರತಿನಿಧಿ ಮಹಾಸಭಾದ ಶಿಫಾರಸ್ಸಾಗಲೀ ಇರಲಿಲ್ಲ. ಇದು ಅಮಿತ್ ಶಾ ಅವರ ಸ್ವತಂತ್ರ ಆಯ್ಕೆ. ಆನಂತರವಷ್ಟೇ, ಅವರು, ಮೋದಿಯನ್ನು ಯೋಗಿಯನ್ನು ಸಿಎಂ ಗದ್ದುಗೆಗೆ ಏರಿಸಲು ಮನವೊಲಿಸಿದರು.[15 ದಿನದೊಳಗೆ ಆದಾಯ ವಿವರ ನೀಡಿ: ಯೋಗಿ ಆದಿತ್ಯನಾಥ್]
ಇದಕ್ಕೆಲ್ಲಾ ಕಾರಣ ಆ ಒಂದು ಘಟನೆ. ಆ ಘಟನೆಯೇ ಇಷ್ಟಕ್ಕೆಲ್ಲಾ ಪ್ರೇರಣೆಯಾಗಿದ್ದು ಹಾಗೂ ಅಮಿತ್ ಅವರಿಗೆ ಯೋಗಿಯವರ ತಾಕತ್ತೇನೆಂಬುದನ್ನು ಅರ್ಥ ಮಾಡಿಸಿದ್ದು. ಅದರ ವಿವರಣೆ ಇಲ್ಲಿದೆ.
ಆಗ ಯುಪಿಯಲ್ಲಿದ್ದರು ಅಮಿತ್ ಶಾ
ಅದು 2013. ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿದ್ದ ಅಮಿತ್ ಶಾ, ಆ ವರ್ಷ ನಡೆದಿದ್ದ ಉಪ ಚುನಾವಣೆಗಳ ಕಾಲದಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದರು. ಅಷ್ಟರಲ್ಲಾಗಲೇ ಗೋರಖ್ ಪುರ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲಿ ಯೋಗಿ ಆದಿತ್ಯಾನಂದ ಅವರು ತಮ್ಮ ಪ್ರಬಲ ಹಿಂದುತ್ವ ಸಿದ್ಧಾಂತಗಳಿಂದ ಸಾಕಷ್ಟು ಖ್ಯಾತಿ ಗಳಿಸಿದ್ದರು. ಹೀಗಿರುವಾಗ, 2013ರಲ್ಲಿ ಪ್ರಚಾರ ಕಾರ್ಯ ನಿಮಿತ್ತ ಗೋರಖ್ ಪುರದ ಹಳ್ಳಿಗಳ ಕಡೆಗೆ ಅಮಿತ್ ಶಾ ಕಾರುಗಳಲ್ಲಿ ತೆರಳಿದ್ದರು. ಆಗ ಅಮಿತ್ ಶಾ ಅವರಿಗೆ ಈಗಿರುವಂತೆ ಭಾರೀ ಬಿಗಿ ಭದ್ರತೆಯೇನೂ ಇರಲಿಲ್ಲ. ಹಾಗೆ, ಹಳ್ಳಿಗಳ ಕಡೆಯಿಂದ ಸಾಗುವಾಗ ಅದೊಂದು ಸ್ಥಳದಲ್ಲಿ ಕೆಲವಾರು ಹಳ್ಳಿಗರು ಅಮಿತ್ ಶಾ ಅವರ ಕಾರನ್ನು ಅಡ್ಡಗಟ್ಟಿದ್ದರು.[ಯೋಗಿ ಎಫೆಕ್ಟ್: ಅಲಹಾಬಾದ್ ನಲ್ಲಿ ಎರಡು ಕಸಾಯಿ ಖಾನೆಗಳಿಗೆ ಬೀಗ]
ಸಂಧಾನ ವ್ಯರ್ಥವಾಗಿತ್ತು
ಹಳ್ಳಿಗರ ಗುಂಪು ದಾಂಧಲೆ ನಡೆಸಲೂ ಮುಂದಾಗಿತ್ತು. ಪ್ರಾಯಶಃ ಅವರು, ಅಮಿತ್ ಶಾ ಅವರು ಸಚಿವರೋ, ಶಾಸಕರೋ ಆಗಿರಬೇಕು ಎಂಬುದು ಅವರು ಅಂದುಕೊಂಡಿದ್ದಿರಬೇಕು. ತಮ್ಮ ಹಳ್ಳಿಗೆ ಅದು ಬೇಕು, ಇದು ಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಕಾರಿಗೆ ಘೆರಾವ್ ಹಾಕಿದ್ದರು ಅವರು. ಅಮಿತ್ ಶಾ ಅವರ ಡ್ರೈವರ್, ಕಾರಿನಲ್ಲಿದ್ದ ಕೆಲವೇ ಕೆಲವು ಬಿಜೆಪಿ ನಾಯಕರು ಕೆಳಗಿಳಿದು ಹೋಗಿ ಜನರನ್ನು ಎಷ್ಟೇ ಸಮಾಧಾನಪಡಿಸಿದರೂ ಜನ ಒಪ್ಪಲು ಸಿದ್ಧರಿರಲಿಲ್ಲ. ಅಲ್ಲದೆ, ನೋಡ ನೋಡುತ್ತಿದ್ದಂತೆ ಜನರ ಗುಂಪೂ ದೊಡ್ಡದಾಗಿ ಹೋಗಿ ಬಿಜೆಪಿ ನಾಯಕರಿಗೆ ಒಂದು ರೀತಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಯಿತು.[ಮಿಸ್ಟರ್ 'ಯೋಗಿ'- ವಿವಾದ, ಹಿಂದುತ್ವ, ಸನ್ಯಾಸದ ಮಿಕ್ಸ್ಚರ್]
ಖುದ್ದು ಅಮಿತ್ ಅವರೇ ಬೆರಗಾಗಿದ್ದರು!
ಆಗಲೇ, ಕಾರಿನೊಳಗಿದ್ದ ಅಮಿತ್ ಶಾ ಅವರಿಗೆ ಒಂದು ಉಪಾಯ ಹೊಳೆದಿದ್ದು. ತಕ್ಷಣವೇ ಅವರು ಯೋಗಿ ಆದಿತ್ಯಾನಂದ ಅವರಿಗೆ ಫೋನಾಯಿಸಿ ವಿಷಯ ತಿಳಿಸಿದರು. ಅಷ್ಟೇ. ಕೆಲವೇ ನಿಮಿಷಗಳಲ್ಲಿ ಮೋಟಾರ್ ಬೈಕ್ ಗಳಲ್ಲಿ ಬಂದು ನೋಡಿ ಯೋಗಿ ಅವರ ಶಿಷ್ಯಂದಿರ ಪಡೆ. ನೋಡ ನೋಡುತ್ತಿದ್ದಂತೆ ನೂರಾರು ಬೈಕ್ ಗಳಲ್ಲಿ ಆಗಮಿಸಿದರು ಅವರ ಬೆಂಬಲಿಗರು. ಇಷ್ಟು ಜನರನ್ನು ನೋಡಿ ಖುದ್ದು ಅಮಿತ್ ಶಾ ಅವರೇ ಬೆಕ್ಕಸ ಬೆರಗಾದರು. ಫೋನ್ ಮಾಡಿದರೆ ಪೊಲೀಸರೂ ಇಷ್ಟು ಬೇಗ ಬರುತ್ತಿರಲಿಲ್ಲವೇನೋ ಎಂದೆನಿಸಿತ್ತು ಅವರಿಗೆ.[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]
ಆದಿತ್ಯನಾಥ್ ಬಗೆಗಿನ ಅಭಿಮಾನ ಕಣ್ಣಮುಂದೆ
ಕಣ್ಣ ಮುಂದೆ ನೂರಾರು ಜನ ಯೋಗಿ ಆದಿತ್ಯಾನಂದ ಅವರ ಶಿಷ್ಯಂದಿರು, ಅವರ ಮುಂದೆ ನೂರಾರು ಹಳ್ಳಿಗರು. ಅದೇನು ಗಲಭೆಯಾಗುತ್ತೋ, ಅದೇನು ಹಿಂಸಾಚಾರವಾಗುತ್ತೋ ಎಂದು ಒಂದು ಕ್ಷಣ ಅಮಿತ್ ಶಾ ಅವರೇ ಬೆದರಿಬಿಟ್ಟರು. ಆದರೆ, ಏನೂ ಆಗಲಿಲ್ಲ. ಕಾರಣ.... ಹಾಗೆ ಮೋಟಾರ್ ಬೈಕ್ ಗಳಲ್ಲಿ ಬಂದವರು ಹಳ್ಳಿಗರತ್ತ ವಾದ ವಿವಾದಕ್ಕಿಳಿಯಲಿಲ್ಲ. ಇವರು ಆದಿತ್ಯನಾಥರ ಆಪ್ತರು. ದಾರಿ ಬಿಡಿ. ತೊಂದರೆ ಕೊಡಬೇಡಿ ಎಂದು ಶಿಷ್ಯರ ಪಡೆ ಹೇಳಿದ ಒಂದೇ ಒಂದು ಮಾಡಿಗೆ ತಪ್ಪಾಯ್ತು ಕ್ಷಮಿಸಿ ಎನ್ನುತ್ತಾ ದಾರಿ ಬಿಟ್ಟರು ಹಳ್ಳಿಗರು. ಇದು ಆದಿತ್ಯನಾಥ್ ಅವರು ಆ ಪ್ರಾಂತ್ಯದಲ್ಲಿ ಅದರಲ್ಲೂ ಹಳ್ಳಿಗರ ಅಭಿಮಾನ ಸಂಪಾದಿಸಿದ್ದರ ಸಾಕ್ಷಾತ್ ದರುಶನವನ್ನು ಅಮಿತ್ ಶಾ ಅವರಿಗೆ ತೆರೆದಿಟ್ಟಿತು.
ಇತ್ತೀಚೆಗಿನ ಸಮೀಕ್ಷೆಯೂ ಸಹಾಯ ಮಾಡಿತ್ತು
ಅಲ್ಲಿಂದ ಆದಿತ್ಯ ಅವರನ್ನು ದೂರದಿಂದಲೇ ಅಧ್ಯಯನ ಮಾಡಿದ್ದ ಶಾ, ಅವರ ನಾಯಕತ್ವ ಗುಣ, ಜನರನ್ನು ಒಗ್ಗೂಡಿಸುವ ಕಲೆಗಾರಿಕೆಯನ್ನು ಮೆಚ್ಚಿಕೊಂಡಿದ್ದರು. ತೀರಾ ಇತ್ತೀಚೆಗೆ, ಅವರು ಯುಪಿಯಲ್ಲಿ ಪ್ರಧಾನಿ ಮೋದಿ ಬಿಟ್ಟರೆ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ವ್ಯಕ್ತಿ ಯೋಗಿ ಎಂಬುದು ಮನದಟ್ಟಾಗಿತ್ತು. ಯುಪಿಯಲ್ಲಿ ಇಂಥ ಒಬ್ಬ ಪವರ್ ಫುಲ್ ಲೀಡರ್ ಇರಬೇಕು ಎಂದುಕೊಂಡಿದ್ದರು ಶಾ. ಹಾಗಾಗಿಯೇ, ಅವರು ಯುಪಿ ಸಿಎಂ ಆಯ್ಕೆ ವಿಚಾರದಲ್ಲಿ ಯೋಗಿಗೆ ಪ್ರಾಶಸ್ತ್ರ್ಯ ಕೊಟ್ಟರು.