ಕೊಡಲಿಯೇಟಿಗೆ ಸಿದ್ಧವಾಗಿದ್ದ ಮರಗಳಿಗೆ ಮರುಜೀವ!
ವಿಜಯವಾಡಾ, ಮೇ 09 : ಒಂದೆಡೆ ತಮಗೆ ಉಳಿಗಾಲವಿಲ್ಲವೆಂದು ಬೆಂಗಳೂರಿನಲ್ಲಿ ಸಾವಿರಾರು ಮರಗಳು ಮೌನವಾಗಿ ನರಳಾಡುತ್ತಿದ್ದರೆ, ಮತ್ತೊಂದೆಡೆ ವಿಜಯವಾಡಾದಲ್ಲಿ ಕತ್ತಿಗೆ ಗುರಿಯಾಗದೆ ಮತ್ತೊಂದೆಡೆ ಸ್ಥಳಾಂತರಗೊಂಡ ಹಲವಾರು ಮರಗಳು ಖುಷಿಯಿಂದ ಹಾರಾಡುತ್ತಿವೆ.
ಜನಪ್ರತಿನಿಧಿಗಳು ಇಚ್ಛಿಸಿದರೆ ಏನು ಕೂಡ ಮಾಡಲು ಸಾಧ್ಯ ಎಂಬುದನ್ನು ಪೆನಮಲೂರು ಶಾಸಕ ಬೋಡೆ ಪ್ರಸಾದ್ ಅವರು ತೋರಿಸಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಜ್ ಗಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಸಿದ್ಧರಾಗಿದ್ದ ಕೆಜೆ ಜಾರ್ಜ್ ಮತ್ತಿತರರು ಇದರಿಂದ ಪಾಠ ಕಲಿಯುತ್ತಾರಾ? [ಉಕ್ಕಿನ ಸೇತುವೆ ಬದಲು ಎಲಿವೇಟೆಡ್ ರಸ್ತೆ, ಅಳಿಯ ಅಲ್ಲ...!]
ವಿಜಯವಾಡಾ-ಮಚಲಿಪಟ್ಟಣಂ ಹೆದ್ದಾರಿಯನ್ನು ಅಗಲೀಕರಣ ಮಾಡಲಿಕ್ಕಾಗಿ ಜಿಲ್ಲಾಡಳಿತ ಎಂದಿನಂತೆ ಮರಗಳಿಗೆ ಕೊಡಲು ಹಾಕಲು ಕಾರ್ಯಕ್ರಮ ರೂಪಿಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಬೋಡೆ ಪ್ರಸಾದ್ ಅವರು ತಾವೇ ಮರಗಳನ್ನು ಉಳಿಸಲು ಕಾರ್ಯಕ್ರಮ ರೂಪಿಸಿದ್ದಾರೆ.
ಎಷ್ಟಿದ್ದರೂ ತಾವು ಹುಟ್ಟಿದಾಗಿಂದ ನೋಡುತ್ತಿದ್ದ, ತಮ್ಮೊಂದಿಗೇ ಬೆಳೆದಿದ್ದ ಮರಗಳಲ್ಲವೆ? ಅದರಲ್ಲೊಂದು ನೂರು ವರ್ಷಕ್ಕೂ ಹಳೆಯ ಆಲದ ಮರವೂ ಇತ್ತು. ಈ ಮರಗಳಿಗೆ ಕೊಡಲಿಯೇಟು ಬೀಳುತ್ತದೆ ಎಂದು ತಿಳಿಯುತ್ತಿದ್ದಂತೆ ಅವರ ಕರುಳು ಕೂಡ ಚುರ್ ಎಂದಿದೆ. ಆ ಮರಗಳೊಂದಿಗೆ ತಾವು ಭಾವನಾತ್ಮಕ ಸಂಬಂಧ ಹೊಂದಿರುವುದಾಗಿಯೂ ಅವರು ಹೇಳಿದ್ದಾರೆ. [ಬೆಂಗಳೂರು: ಜಾಹೀರಾತು ಕಾಣಿಸುವುದಿಲ್ಲ ಎಂದು ಮರಗಳಿಗೆ ವಿಷವಿಟ್ಟರು]
ಮರಗಳನ್ನು ಸ್ಥಳಾಂತರಿಸಲು ತಮ್ಮ ಬೊಕ್ಕಸದಿಂದ ಹಣ ಹಾಕಿ ಕ್ರೇನ್ ಮತ್ತು ಕೆಲಸಗಾರರನ್ನು ನಿಯೋಜಿಸಿದ್ದಾರೆ. ಮರಗಳ ಸುತ್ತ ಬೃಹತ್ ತೆಗ್ಗು ತೆಗೆದು, ಬೇರುಗಳಿಗೆ ಕೊಂಚವೂ ಹಾನಿಯಾಗದಂತೆ ಮರಗಳನ್ನು ಕ್ರೇನ್ ಸಹಾಯದಿಂದ ಭಾನುವಾರ ರಾತ್ರಿ ಮೇಲೆತ್ತಲಾಗಿದೆ.
ನಂತರ, ಮತ್ತೊಂದು ಸ್ಥಳದಲ್ಲಿ ತೆಗ್ಗನ್ನು ತೆಗೆದು ಅಲ್ಲಿಯೇ ಈ ಮರಗಳಿಗೆ ಮರುಜೀವ ನೀಡಲಾಗಿದೆ. ರಸ್ತೆ ಅಗಲೀಕರಣ ಆದೇಶ ಬರುತ್ತಿದ್ದಂತೆ ರಸ್ತೆಬದಿಯಿರುವ ಮರಗಳಿಗೆ ಕೊಡಲಿಯೇಟು ಹಾಕುವುದರ ಬದಲು ಅವನ್ನು ಸ್ಥಳಾಂತರಿಸಲು ಸಾಧ್ಯವೆ ಎಂದು ನೋಡಿ ಎಂದು ಬೋಡೆ ಪ್ರಸಾದ್ ಅವರು ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ.
ಇಂಥದೊಂದು ಉದಾತ್ತ ಕಾರ್ಯ ಮಾಡಿರುವ ಬೋಡೆ ಪ್ರಸಾದ್ ಅವರಿಗೆ ಆ ಎಲ್ಲ ಮರಗಳ ಪರವಾಗಿ ಒಂದು ಧನ್ಯವಾದ. ಹಾಗೆಯೆ, ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಜ್ ಬದಲಾಗಿ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ಸಜ್ಜಾಗಿರುವ ಸಿದ್ದರಾಮಯ್ಯ ಅಂಡ್ ಸಹೋದ್ಯೋಗಿಗಳಿಗೂ ಇಂಥ ಬುದ್ಧಿ ಬರಲೆಂದು ಹಾರೈಸಿ. [ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?]