ಹಿಂದು ಸಾಧುಗಳ ಉತ್ಸಾಹ ಕುಗ್ಗಿಸದ ಭಯೋತ್ಪಾದಕ ದಾಳಿ!
ಶ್ರೀನಗರ, ಜುಲೈ 15 : ಅಮರನಾಥ ಯಾತ್ರೆ ಎಂದೊಡನೆ ಹಿಂದು ಸಾಧುಗಳ ಕಣ್ಣರಳುತ್ತದೆ. ಸಮುದ್ರ ಮಟ್ಟದಿಂದ 3888 ಮೀ. ಎತ್ತರದಲ್ಲಿರುವ ಅಮರನಾಥನನ್ನು ಕಣ್ತುಂಬಿಸಿಕೊಳ್ಳುವುದಕ್ಕಾಗಿ ದೇಶ, ವಿದೇಶದಿಂದ ಲಕ್ಷಾಂತರ ಭಕ್ತರು ಬರುತ್ತಾರೆ.
ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...
ಅದಕ್ಕೆಂದೇ ಭಯೋತ್ಪಾದಕ ದಾಳಿಗಳು ನಡೆದರೂ ಅಮರನಾಥ ಯಾತ್ರೆಗೆ ತೆರಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಇಂದಿನಿಂದ(ಜು.15) ಸುಮಾರು 3300 ಭಕ್ತರು ಅಮರನಾಥ ಯಾತ್ರೆ ಆರಂಭಿಸಿದ್ದು, ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಬೆಳಗ್ಗೆ 3:30 ಕ್ಕೇ ಯಾತ್ರೆ ಆರಂಭವಾಗಿದೆ. ದಾಳಿ ನಡೆದ ಮರುದಿನದಿಂದಲೇ ಅಮರನಾಥ ಯಾತ್ರೆ ಯಾವ ಅಡೆತಡೆಯಿಲ್ಲದೆ ನಡೆದಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಭಿಗಿ ಭದ್ರತೆ ನಡುವೆ ಎಂದಿನಂತೆ ಅಮರನಾಥ ಯಾತ್ರೆ ಆರಂಭ
132 ವಾಹನಗಳಲ್ಲಿ ಯಾತ್ರಿಗಳು ಅಮರನಾಥನ ದರ್ಶನಕ್ಕೆಂದು ಹೊರಟಿದ್ದು, ಎಲ್ಲಾ ವಾಹನಕ್ಕೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಯಾವಾಗಲೂ ಬಿಗಿ ಬಂದೋಬಸ್ತ್
ಕಾಶ್ಮೀರ ಕಣಿವೆಯ ಶ್ರೀನಗರದಿಂದ 141 ಕಿ.ಮೀ.ದೂರದಲ್ಲಿರುವ ಅಮರನಾಥ ಯಾತ್ರೆ ಆರಂಭವಾಗುತ್ತಿದ್ದಂತೆಯೇ ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಸರ್ಕಾರಗಳೂ ಬಿಗಿ ಬಂದೋಬಸ್ತ್ ಏರ್ಪಡಿಸುತ್ತವೆ.
ಆ ಕರಾಳ ದಿನ
ಅದಕ್ಕೆ ಕಾರಣ ಈ ಸ್ಥಳದಲ್ಲಿ ಈಗಾಗಲೇ ಹಲವು ಬಾರಿ ನಡೆದ ಭಯೋತ್ಪಾದಕ ದಾಳಿ. ಮೊನ್ನೆ ಮೊನ್ನೆ ಅಂದರೆ ಜುಲೈ 10 ರಂದು ಇಲ್ಲಿನ ಅನಂತ್ ನಾಗ್ ಜಿಲ್ಲೆಯ ಬಟೆಂಗೊ ಎಂಬಲ್ಲಿ ನಡೆದ ಉಗ್ರರ ದಾಳಿಯಲ್ಲಿ 7 ಜನ ಅಮರನಾಥ ಯಾತ್ರಿಗಳು ಬಲಿಯಾಗಿದ್ದರು.
ಭಯೊತ್ಪಾದಕರ ವಿರುದ್ಧ ಕಾರ್ಯಾಚರಣೆ
ಘಟನೆಯನ್ನು ಇಡೀ ದೇಶವೂ ವ್ಯಾಪಕವಾಗಿ ಖಂಡಿಸಿತ್ತಲ್ಲದೆ, ಆ ನಂತರ ಸೇನೆ ಉಗ್ರರ ಹುಟ್ಟಡಗಿಸಲು ನಿರಂತರವಾಗಿ ಕಾಶ್ಮೀರದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಈಗಾಗಲೇ ಐವರು ಉಗ್ರರನ್ನು ಬಲಿಹಾಕಲಾಗಿದ್ದು, ಓರ್ವ ಉಗ್ರನನ್ನು ಜೀವಂತ ಸೆರೆ ಹಿಡಿಯಲಾಗಿದೆ.
ಉತ್ಸಾಹ ಮಾತ್ರ ಕುಗ್ಗಿಲ್ಲ
ಇಷೆಲ್ಲ ಆದಮೇಲೂ ಹಿಂದುಗಳ ಉತ್ಸಾಹ ಕುಗ್ಗಿಲ್ಲ. ಭಯೋತ್ಪಾದಕರ ಕರಿನೆರಳಿನ ನಡುವಲ್ಲೂ ಅಮರನಾಥದ ಹಿಮಲಿಂಗದ ಬಗೆಗಿನ ಸೆಳೆದ ತಗ್ಗಿಲ್ಲ. ಅದಕ್ಕೆಂದೇ ಮತ್ತೆ ಯಾತ್ರೆ ಆರಂಭವಾಗಿದೆ. ಜೂನ್ 29 ರಂದು ಆರಂಭವಾಗಿರುವ ಯಾತ್ರೆ, ಆಗಸ್ಟ್ 7 ರಂದು ಮುಕ್ತಾಯವಾಗಲಿದ್ದು, ಅಮರನಾಥ ಗುಹೆಯಲ್ಲಿ ಸೃಷ್ಟಿಯಾಗುವ ನೈಸರ್ಗಿಕ ಅಮರನಾಥನನ್ನು ಲಕ್ಷಾಂತರ ಜನ ಭಕ್ತರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.