ಅಹ್ಮದ್ ಪಟೇಲ್ ಶಿಕಾರಿಯಾದರೆ ಗುಜರಾತ್ ನಲ್ಲಿ ಕಾಂಗ್ರೆಸ್ ಗತಿ ಅಷ್ಟೇ!
ಗಾಂಧಿನಗರ (ಗುಜರಾತ್), ಆಗಸ್ಟ್ 8: ಮೂರು ರಾಜ್ಯಸಭಾ ಸ್ಥಾನಗಳಿಗೆ ಗುಜರಾತ್ ನಲ್ಲಿ ಮಂಗಳವಾರ ಮತದಾನ ಮುಗಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಇದು ಪ್ರತಿಷ್ಠೆಯ ಹಣಾಹಣಿಯಾಗಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಂಸತ್ ಗೆ ಪದಾರ್ಪಣೆ ಮಾಡಲಿದ್ದಾರೆ.
ಗುಜರಾತ್ ರಾಜ್ಯಸಭಾ ಚುನಾವಣೆ LIVE: 61 ಬಿಜೆಪಿ, 43 ಕಾಂಗ್ರೆಸ್ ಶಾಸಕರಿಂದ ಮತದಾನ
ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆಲುವು ಕೂಡ ಸಲೀಸು ಎಂಬುದು ಗೊತ್ತಾಗುತ್ತದೆ. ಆದರೆ ಕಾಂಗ್ರೆಸ್ ನ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಮೂರನೆಯವರಾಗಿ ಆಯ್ಕೆ ಆಗಲು ಹೆಣಗಾಡುತ್ತಿದ್ದಾರೆ. ಅಹ್ಮದ್ ಪಟೇಲ್ ಪಾಲಿಗೆ ಅಡ್ಡವಾಗಿ ಬಿಜೆಪಿಯು ಬಂಡೆಯಂತೆ ನಿಂತುಬಿಟ್ಟಿದೆ.
ನನ್ನ ಇಡೀ ರಾಜಕೀಯ ಜೀವನದಲ್ಲೇ ಈ ರೀತಿಯ ಉದ್ವಿಗ್ನ ಸನ್ನಿವೇಶ ಎದುರಿಸಿಲ್ಲ ಎಂದು ಅಹ್ಮದ್ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರಿಗೆ ತಮ್ಮ ಆಯ್ಕೆ ಖಚಿತ ಎಂಬ ವಿಶ್ವಾಸ ಇದೆ. ಗುಜರಾತ್ ನ ನೂರಾ ಎಪ್ಪತ್ತಾರು ಶಾಸಕರು ಮತ ಚಲಾಯಿಸಿ ಆಗಿದೆ. ಇನ್ನೇನು ಫಲಿತಾಂಶ ಅಷ್ಟೇ ಬಾಕಿ ಇದೆ.
ಗುಜರಾತ್ ನಲ್ಲಿ ಬಿರುಗಾಳಿ ಎಬ್ಬಿಸಿದ ಅಡ್ಡ ಮತದಾನ, ಕಾಂಗ್ರೆಸ್ ಕಂಗಾಲು
ರಾಜ್ಯಸಭೆಗೆ ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ ನಡೆದ ಪ್ರಮುಖ ಹತ್ತು ಬೆಳವಣಿಗೆಗಳನ್ನು ಇಲ್ಲಿ ಕೊಡಲಾಗಿದೆ.
ಎನ್ ಸಿಪಿ, ಜೆಡಿಯುನತ್ತ ನೋಟ
ಅಹ್ಮದ್ ಪಟೇಲ್ ಮತ್ತೆ ರಾಜ್ಯಸಭೆಗೆ ಆಯ್ಕೆ ಆಗಬೇಕು ಅಂದರೆ ನಲವತ್ತೈದು ಶಾಸಕರ ಬೆಂಬಲ ಬೇಕು. ಅವರಿಗೆ ನಲವತ್ನಾಲ್ಕು ಶಾಸಕರು ಬೆಂಬಲಿಸಿದ್ದಾರೆ. ಒಬ್ಬರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಆದ್ದರಿಂದ ಅಹ್ಮದ್ ಪಟೇಲ್ ಈಗ ಜೆಡಿಯು ಶಾಸಕ ಚೌಟುಭಾಯಿ ಅಸಾವ ಹಾಗೂ ಶರದ್ ಪವಾರ್ ಅವರ ಎನ್ ಸಿಪಿಯ ಇಬ್ಬರು ಶಾಸಕರ ಬೆಂಬಲಕ್ಕೆ ಕಾಯುವಂತಾಯಿತು.
ಸೇಡು ತೀರಿಸಿಕೊಳ್ಳಲು ಮುಂದಾದ ವಘೇಲಾ
ತಮ್ಮನ್ನು ಮೂಲೆಗುಂಪು ಮಾಡಿದ ಕಾಂಗ್ರೆಸ್ ವಿರುದ್ಧ ಕುದಿಯುತ್ತಿರುವ ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ಅವರು ಅಹ್ಮದ್ ಪಟೇಲ್ ಗೆ ನಲವತ್ತು ಮತಗಳು ಕೂಡ ಸಿಗಲ್ಲ ಎಂದಿದ್ದಾರೆ. ತಾವು ಅಹ್ಮದ್ ಪಟೇಲ್ ವಿರುದ್ಧ ಮತ ಹಾಕಿದ್ದಾಗಿ, ಸೋಲುವ ಅಭ್ಯರ್ಥಿಗೆ ಯಾರು ಮತ ಹಾಕುತ್ತಾರೆ ಎಂದು ವಘೇಲಾ ಹೇಳಿದ್ದಾರೆ.
ಕಾಂಗ್ರೆಸ್ ನ ಆರು ಶಾಸಕರ ರಾಜೀನಾಮೆ
ಎರಡು ವಾರದ ಹಿಂದೆ ವಘೇಲಾ ಕಾಂಗ್ರೆಸ್ ನಿಂದ ಹೊರಬಂದರು. ಆ ನಂತರ ಕಾಂಗ್ರೆಸ್ ನ ಆರು ಶಾಸಕರು ರಾಜೀನಾಮೆ ನೀಡಿದರು. ಆ ಪೈಕಿ ಮೂವರು ಬಿಜೆಪಿ ಸೇರಿದರು. ಒಬ್ಬರು ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ಅವರು ಬಲವಂತ್ ಸಿನ್ಹಾ ರಜಪೂತ್. ಆತ ಶಂಕರ್ ಸಿಂಗ್ ವಘೇಲಾರ ಸಂಬಂಧಿ.
ಮೊದಲ ಪ್ರಾಶಸ್ತ್ಯದ ಮತವಾಗಿ ನಲವತ್ತೈದು
ಈಗ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಆರು ಮಂದಿಗೆ ಮತ ಹಾಕುವ ಹಕ್ಕಿಲ್ಲ. ಆದ್ದರಿಂದ ಗುಜರಾತ್ ಒಟ್ಟು ಸಂಖ್ಯಾಬಲ 182ರಿಂದ 176ಕ್ಕೆ ಕುಸಿದಿದೆ. ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತವಾಗಿ ನಲವತ್ತೈದು ಮತಗಳನ್ನು ಪಡೆಯಬೇಕಿದೆ. ಅಂದರೆ ಪ್ರತಿಯೊಬ್ಬರು ತಲಾ ನಲವತ್ತೈದು ಶಾಸಕರ ಮೊದಲ ಪ್ರಾಶಸ್ತ್ಯದ ಮತ ಪಡೆಯಬೇಕಿದೆ.
ತಲಾ ನಲವತ್ತೈದು ಷಾ ಹಾಗೂ ಸ್ಮೃತಿಗೆ, ರಜಪೂತ್ ಗೆ ಮೂವತ್ತೊಂದು
ಒಟ್ಟು ನೂರಾ ಇಪ್ಪತ್ತೊಂದು ಬಿಜೆಪಿ ಸದಸ್ಯರ ಪೈಕಿ ತಲಾ ನಲವತ್ತೈದು ಮತ ಅಮಿತ್ ಷಾ ಹಾಗೂ ಸ್ಮೃತಿ ಇರಾನಿ ಅವರ ಪಾಲಾಗುತ್ತದೆ. ಬಾಕಿ ಮೂವತ್ತೊಂದು ಮತ ಬಲವಂತ್ ಸಿನ್ಹಾ ರಜಪೂತ್ ಪಾಲಾಗಲಿದೆ.
ವಿಪ್ ಜಾರಿಯಾಗಿದೆ
ಕಾಂಗ್ರೆಸ್ ಗೆ ಶಂಕರ್ ಸಿಂಗ್ ವಘೇಲಾ ಸೇರಿ ಐವತ್ತೊಂದು ಶಾಸಕರಿದ್ದಾರೆ. ಎಲ್ಲ ಶಾಸಕರಿಗೂ ವಿಪ್ ಜಾರಿ ಮಾಡಿ, ಅಹ್ಮ್ಮದ್ ಪಟೆಲ್ ಗೆ ಮತ ಹಾಕುವಂತೆ ಸೂಚಿಸಲಾಗಿದೆ.
ಆರು ಮತ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ
ಆದರೆ ಈ ಐವತ್ತೊಂದು ಶಾಸಕರ ಪೈಕಿ ಕನಿಷ್ಠ ಆರು ಮಂದಿ ಶಂಕರ್ ಸಿಂಗ್ ವಘೇಲಾ ನಿಷ್ಠರಿದ್ದಾರೆ. ಅವರ ಲೆಕ್ಕವನ್ನು ಕಾಂಗ್ರೆಸ್ ಇಟ್ಟುಕೊಂಡಿಲ್ಲ. ಆ ಪೈಕಿ ಶಂಕರ್ ಮಗ ಮಹೇಂದ್ರ ಸಿಂಗ್ ವಘೇಲಾ ಕೂಡ ಇದ್ದಾರೆ. ಗುಜರಾತ್ ನಲ್ಲಿ ಮತ ಹಾಕಲು ತೆರಳುವ ವೇಳೆ ಆತ ಅಮಿತ್ ಷಾ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.
ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ
ಅಹ್ಮದ್ ಪಟೇಲ್ ಆಗಲೀ ಅಥವಾ ಬಲವಂತ್ ಸಿನ್ಹಾ ರಜಪೂತ್ ಆಗಲೀ ನೇರವಾಗಿ ನಲವತ್ತೈದು ಶಾಸಕರ ಬೆಂಬಲ ಪಡೆಯದಿದ್ದ ಪಕ್ಷದಲ್ಲಿ ಪ್ರತಿ ಶಾಸಕರ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಲೆಕ್ಕ ಹಾಕಲಾಗುತ್ತದೆ. ಅಲ್ಲಿಗೆ ಅಹ್ಮದ್ ಪಟೇಲ್ ಪಾಲಿನ ಆಟ ಮುಗಿದಂತಾಗುತ್ತದೆ. ಬಿಜೆಪಿಗೆ ನಿಚ್ಚಳವಾದ ಗೆಲುವು ಲಭಿಸುತ್ತದೆ.
ಸೋನಿಯಾ ಗಾಂಧಿಗೆ ರಾಜಕೀಯ ಕಾರ್ಯದರ್ಶಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಹ್ಮದ್ ಪಟೆಲ್ ರನ್ನು ಗೆಲ್ಲಿಸಲು ಶತಾಯಗತಾಯ ಪ್ರಯತ್ನಿಸಿದ್ದಾರೆ. ಏಕೆಂದರೆ ಸೋನಿಯಾ ಅವರಿಗೆ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್. ಪಕ್ಷದಲ್ಲಿ ಪ್ರಮುಖ ಹುದ್ದೆ ನಿಭಾಯಿಸುತ್ತಿರುವ ಪಟೇಲ್ ಪಾಲಿಗೆ ಸ್ಥಾನದ ಕಾರಣಕ್ಕೆ ನೆರವಾಗುವ ಯಾವ ಸೂಚನೆಯೂ ಇಲ್ಲ ಎಂಬುದನ್ನು ವೈಯಕ್ತಿಕವಾಗಿ ಪಟೇಲ್ ಹಾಗೂ ಪಕ್ಷ ಹೇಳಿಯಾಗಿದೆ.
ಕಾಂಗ್ರೆಸ್ ಆತ್ಮಸ್ಥೈರ್ಯಕ್ಕೆ ಹೊಡೆತ
ಒಂದು ವೇಳೆ ಅಹ್ಮದ್ ಪಟೆಲ್ ಈ ಚುನಾವಣೆಯಲ್ಲಿ ಸೋತರೆ ಕಾಂಗ್ರೆಸ್ ಪಾಲಿನ ಆತ್ಮಸ್ಥೈರ್ಯವೇ ಉಡುಗಿ ಹೋಗುತ್ತದೆ. ಇನ್ನೇನು ಗುಜರಾತ್ ನ ವಿಧಾನಸಭೆ ಚುನಾವಣೆ ಕಣ್ಣೆದುರು ಇದೆ. ಕಳೆದ ಎರಡು ದಶಗಳಿಂದ ನೆಲೆ ಕಳೆದುಕೊಂಡು ಬಿಜೆಪಿ ಎದುರು ಕಳಾಹೀನವಾಗಿರುವ ಕಾಂಗ್ರೆಸ್ ಪಾತಾಳಕ್ಕೆ ಇಳಿದಂತಾಗುತ್ತದೆ.