ಪತ್ರಕರ್ತರ ಕಲ್ಯಾಣಕ್ಕಾಗಿ 30 ಕೋಟಿ ಎತ್ತಿಟ್ಟ ತೆಲಂಗಾಣ
ಪತ್ರಕರ್ತರ ಕಲ್ಯಾಣಕ್ಕಾಗಿ 2017-18ರ ಬಜೆಟಿನಲ್ಲಿ ತೆಲಂಗಾಣ ಸರಕಾರ ಬರೋಬ್ಬರಿ 30 ಕೋಟಿ ರೂಪಾಯಿ ಎತ್ತಿಟ್ಟಿದೆ. ಈ ಹಣದಲ್ಲಿ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ಕೆ.ಸಿ ಚಂದ್ರ ಶೇಖರ್ ರಾವ್ ಸರಕಾರ ನೀಡಲಿದೆ.
ಹೈದರಾಬಾದ್, ಮಾರ್ಚ್ 13: ಪತ್ರಕರ್ತರ ಕಲ್ಯಾಣಕ್ಕಾಗಿ 2017-18ರ ಬಜೆಟಿನಲ್ಲಿ ತೆಲಂಗಾಣ ಸರಕಾರ ಬರೋಬ್ಬರಿ 30 ಕೋಟಿ ರೂಪಾಯಿ ಎತ್ತಿಟ್ಟಿದೆ. ಈ ಹಣದಲ್ಲಿ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ಕೆ.ಸಿ ಚಂದ್ರ ಶೇಖರ್ ರಾವ್ ಸರಕಾರ ನೀಡಲಿದೆ.
ಪತ್ರಕರ್ತರು ಅನಾರೋಗ್ಯಕ್ಕೆ ಈಡಾದಾಗ ಅವರ ನೆರವಿಗೆ ಮತ್ತು ಕುಟುಂಬದ ನೆರವಿಗೆ ಸರಕಾರ ಧಾವಿಸಲಿದ್ದು ಅದಕ್ಕಾಗಿ ಈ ಹಣ ಎತ್ತಿಡಲಾಗಿದೆ. ಕಳೆದ ಎರಡು ಬಜೆಟುಗಳಲ್ಲಿ ಸರಕಾರ ತಲಾ 10 ಕೋಟಿ ಎತ್ತಿಟ್ಟಿತ್ತು. ಈ ಬಾರಿಯ ಬಜೆಟಿನಲ್ಲಿ 10 ಕೋಟಿ ಎತ್ತಿಟ್ಟಿದ್ದು, ಮುಂದಿನ ಬಜೆಟುಗಳಲ್ಲಿ ತಲಾ 10 ಕೋಟಿಯಂತೆ ಹೆಚ್ಚುವರಿ 20 ಕೋಟಿ ಎತ್ತಿಡುವ ಘೋಷಣೆ ಮಾಡಿದ್ದಾರೆ. ಈ ಮೂಲಕ ಒಟ್ಟು 50 ಕೋಟಿ ರೂಪಾಯಿಗಳನ್ನು ಪತ್ರಕರ್ತರ ಕಲ್ಯಾಣಕ್ಕಾಗಿಯೇ ಎತ್ತಿಟ್ಟಿದೆ.
ಅಲ್ಲಿನ ಮಾಧ್ಯಮ ಅಕಾಡೆಮಿ ಮೂಲಕ ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳನ್ನು ಸರಕಾರ ಅನುಷ್ಠಾನ ಮಾಡಲಿದೆ. ಸರಕಾರ 50 ಕೋಟಿಯಲ್ಲ 100 ಕೋಟಿಯನ್ನು ಪತ್ರಕರ್ತರ ಕಲ್ಯಾಣಕ್ಕಾಗಿ ಮೀಸಲಿಡಬೇಕು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಅಲ್ಲಂ ನಾರಾಯಣ ಬೇಡಿಕೆಯನ್ನೂ ಸಲ್ಲಿಸಿದ್ದಾರೆ.
ಈ ಹಣದಲ್ಲಿ ಯಾವುದೇ ಪತ್ರಕರ್ತ ವೃತ್ತಿಯಲ್ಲಿರುವಾಗ ಸಾವನ್ನಪ್ಪಿದ್ದರೆ ಕುಟುಂಬದವರಿಗೆ 1 ಲಕ್ಷ ಪರಿಹಾರ ಹಾಗೂ ತಿಂಗಳಿಗೆ 3,000 ರೂಪಾಯಿ ಪಿಂಚಣಿಯನ್ನೂ ಸರಕಾರ ನೀಡಲಿದೆ. ಈಗಾಗಲೇ ತೆಲಂಗಾಣ ರಾಜ್ಯ ರಚನೆಯಾಗಿ ಸಾವಿಗೀಡಾದ 69 ಪತ್ರಕರ್ತರ ಕುಟುಂಬಗಳಿಗೆ ಈಗಾಗಲೇ 1 ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ.
ಇನ್ನು ಪತ್ರಕರ್ತರ ಮಕ್ಕಳು 10 ನೇ ತರಗತಿಯ ಕೆಳಗೆ ಓದುತ್ತಿದ್ದರೆ ಗರಿಷ್ಠ ಇಬ್ಬರು ಮಕ್ಕಳಿಗೆ ತಿಂಗಳಿಗೆ ತಲಾ 1,000 ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಿದೆ. ಹಾಗೂ ವಿದೇಶ ವ್ಯಾಸಾಂಗಕ್ಕೆ ತರಳಿದರೆ ಅವರಿಗೆ ವಿಶೇಷ ಸ್ಕಾಲರ್ ಶಿಪ್ ಗಳನ್ನೂ ನೀಡಲಿದೆ.
ಇದಲ್ಲದೆ ಪತ್ರಕರ್ತರ ಕುಟುಂಬದಲ್ಲಿ ಯಾರಾದರೂ ಹೆಣ್ಣು ಮಕ್ಕಳು ಮದುವೆಯಾದರೆ ಅದಕ್ಕೂ 3 ಲಕ್ಷ ರೂಪಾಯಿಗಳನ್ನು ಸರಕಾರ ನೀಡಲಿದೆ. ಸದ್ಯ ತೆಲಂಗಾಣ ರಾಜ್ಯದಲ್ಲಿ ಒಟ್ಟು 20,000 ಪತ್ರಕರ್ತರಿದ್ದು ಅವರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಹೆಚ್ಚಿನ ಸೌಲಭ್ಯ ನೀಡುವುದರಿಂದ ಪತ್ರಕರ್ತರು ಹೆಚ್ಚಿನ ನಿಷ್ಠೆಯಿಂದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದುಕೊಳ್ಳಲಾಗಿದೆ.