ಹಗ್ಗ ಹಿಡಿದು ಸೆಲ್ಫಿ ತೆಗೆದುಕೊಂಡ ಟೆಕ್ಕಿ ನಿಮಿಷಗಳಲ್ಲೇ ಪ್ರಾಣಬಿಟ್ಟ
ಕಳೆದ ವರ್ಷ ಡಿಸೆಂಬರ್ ನಲ್ಲಿ ಪುಣೆಯ ಐಟಿ ಕ್ಯಾಂಪಸ್ಸಿನಲ್ಲೇ ಟೆಕ್ಕಿಯೊಬ್ಬರ ಹತ್ಯೆಯಾಗಿತ್ತು. ಕಳೆದ ವಾರವಷ್ಟೇ ಇನ್ಫೋಸಿಸ್ ನಲ್ಲಿ ಕೇರಳ ಮೂಲಕ ಮಹಿಳಾ ಟೆಕ್ಕಿಯೊಬ್ಬರ ಹತ್ಯೆಯೂ ನಡೆದಿತ್ತು.
ಪುಣೆ, ಫೆಬ್ರವರಿ 4: ಇತ್ತೀಚೆಗಷ್ಟೇ ಪುಣೆಯ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಕೇರಳ ಮೂಲದ ರಾಸಿಲಾ ಎಂಬ ಉದ್ಯೋಗಿಯ ಕೊಲೆಯ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಟೆಕ್ಕಿ ಬಲಿಯಾಗಿರುವ ಘಟನೆ ಎಲ್ಲರನ್ನೂ ತಲ್ಲಣಗೊಳಿಸಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಕಾನ್ಪುರ ಮೂಲದ ಅಭಿಷೇಕ್ ಕುಮಾರ್ ಎಂಬಾತ ತನ್ನ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಆತ್ಮಹತ್ಯೆಗೂ ಮುನ್ನವೇ ಹಗ್ಗವನ್ನು ಫ್ಯಾನ್ ಗೆ ಕಟ್ಟಿ ಕುಣಿಕೆಯನ್ನೂ ಹಾಕಿದ ನಂತರ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಆತ, ಆ ಫೋಟೋವನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾನೆ.
ಇದರಿಂದ ಗಾಬರಿ ಬಿದ್ದ ಆತನ ಸ್ನೇಹಿತ, ಇತರ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಬಂದು ನೋಡುವಷ್ಟರಲ್ಲಿ ಅಭಿಷೇಕ್ ಸಾವಿಗೆ ಶರಣಾಗಿದ್ದಾನೆ.
ಯಾರೀತ ಅಭಿಷೇಕ್?: ಪುಣೆಯಲ್ಲಿನ ರಾಜೀವ್ ಗಾಂಧಿ ಇನ್ಫೋಟೆಕ್ ಪಾರ್ಕ್ ನಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ಅಭಿಷೇಕ್ ಕುಮಾರ್ ಸೇವೆ ಸಲ್ಲಿಸುತ್ತಿದ್ದ. ತನ್ನ ಅಪಾರ್ಟ್ ಮೆಂಟ್ ನಲ್ಲಿ ಆತ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರೇನಂತಾರೆ?: ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ನೀಡಿರುವ ವರದಿಯ ಪ್ರಕಾರ, ಪ್ರೇಮವೈಫಲ್ಯವೇ ಅಭಿಷೇಕ್ ಸಾವಿಗೆ ಕಾರಣ ಎನ್ನಲಾಗಿದೆ. ಹೀಗಾಗಿ, ಅಭಿಷೇಕ್ ನ ಮಾಜಿ ಪ್ರೇಯಸಿ ಯಾರೆಂಬ ಪ್ರಶ್ನೆಯ ಉತ್ತರ ಹುಡುಕಲು ಹೊರಟಿರುುವ ಪೊಲೀಸರು ಆತನ ಸ್ನೇಹಿತರಿಂದ, ಸಹೋದ್ಯೋಗಿಗಳಿಂದ ಮಾಹಿತಿ ಪಡೆಯಲು ಆರಂಭಿಸಿದ್ದಾರಲ್ಲದೆ, ಅಭಿಷೇಕ್ ದೂರವಾಣಿ ಕರೆಗಳ ದಾಖಲೆಗಳನ್ನೂ ಪಡೆದು ಪರಿಶೀಲಿಸಲು ತೊಡಗಿದ್ದಾರೆ.
'ಅಭಿಷೇಕ್ ಪುಣೆ ಅಪಾರ್ಟ್ ಮೆಂಟ್ ಒಂದರಲ್ಲಿ ತನ್ನ ಕೆಲವು ಸ್ನೇಹಿತರೊಂದಿಗೆ ವಾಸ್ತವ್ಯ ಹೂಡಿದ್ದ. ಇತ್ತೀಚೆಗೆ ಭಾರಿ ವ್ಯಾಕುಲದಿಂದ ಬಳಲುತ್ತಿದ್ದ ಅಭಿಷೇಕ್, ಗುರುವಾರ ಬೆಳಗ್ಗೆಯಿಂದಲೂ ಖಿನ್ನನಾಗಿದ್ದ ಆತ ಮಧ್ಯಾಹ್ನದ ವೇಳೆಗೆ, ತಾನು ಮಲಗುವುದಾಗಿ ಹೇಳಿ ತನ್ನ ಬೆಡ್ ರೂಮಿನೊಳಕ್ಕೆ ಹೋಗಿ ಒಳಗಿನಿಂದ ಬೋಲ್ಟ್ ಹಾಕಿಕೊಂಡು ಆತ್ಮಹತ್ಯಯೆ ಮಾಡಿಕೊಂಡಿದ್ದಾನೆ' ಎನ್ನಲಾಗಿದೆ.
ಆದರೆ, ಅಭಿಷೇಕ್ ಮತ್ತೊಬ್ಬ ಸ್ನೇಹಿತನೊಬ್ಬನು, ಅಭಿಷೇಕ್ ಅಪಾರ್ಟ್ ಮೆಂಟ್ ನಲ್ಲಿನ ಆತ ಸಹವಾಸಿಗಳಿಗೆ ಫೋನಾಯಿಸಿ, ಅಭಿಷೇಕ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಏನಾಯ್ತು ನೋಡಿ ಎಂದಿದ್ದಾನೆ. ಇದರಿಂದ ಗಾಬರಿಗೊಂಡ ಆತನ ಸ್ನೇಹಿತರು ಅಭಿಷೇಕ್ ನ ಬೆಡ್ ರೂಮಿನ ಬಾಗಿಲು ಬಡಿದಿದ್ದು, ಆತನಿಂದ ಯಾವುದೇ ಪ್ರತಿಕ್ರಿಯಿ ಸಿಕ್ಕಿಲ್ಲ. ತಕ್ಷಣವೇ ಕಿಟಕಿಯಿಂದ ಬೆಡ್ ರೂಮಿನೊಳಕ್ಕೆ ಇಣುಕಿ ನೋಡಿದಾಗ ಆತ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.
ಕಿಟಕಿಯನ್ನು ಮುರಿದೇ ಒಳಪ್ರವೇಶಿಸಿದ ಆತ ಸಹಚರರು ತಕ್ಷಣವೇ ಆತನನ್ನು ಫ್ಯಾನಿನಿಂದ ಆತನ ದೇಹವನ್ನು ಕೆಳಗಿಳಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಅಸುನೀಗಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದು, ಅಭಿಷೇಕ್ ನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ತರುವಷ್ಟರಲ್ಲೇ ಆತನ ಜೀವ ಹೊರಟುಹೋಗಿತ್ತು ಎಂದು ತಿಳಿಸಿದ್ದಾರೆ.
ಮೂರನೇ ಮರಣ: ಪುಣೆಯಲ್ಲಿ ಮೇಲಿಂದ ಮೇಲೆ ಸಾಫ್ಟ್ ವೇರ್ ಇಂಜಿನಿಯರ್ ಗಳು ಬಲಿಯಾಗುತ್ತಿರುವುದು ಅಲ್ಲಿನ ಸಾಫ್ಟ್ ವೇರ್ ವಲಯದಲ್ಲಿ ಅಭದ್ರತೆಯ ಭೀತಿ ಸೃಷ್ಟಿಸಿದೆ. ಡಿಸೆಂಬರ್ ನಲ್ಲಿ ಪುಣೆಯ ಐಟಿ ಕ್ಯಾಂಪಸ್ಸಿನಲ್ಲೇ ಮಹಿಳಾ ಟೆಕ್ಕಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಇನ್ಫೋಸಿಸ್ ಕಚೇರಿಯಲ್ಲಿ ಮಹಿಳಾ ಟೆಕ್ಕಿ ಕೊಲೆಯಾಗಿತ್ತು.