ಸಹಿ ಹಾಕಲಾಗದಷ್ಟು ಸಿಎಂ ಜಯಲಲಿತಾ ಅಶಕ್ತರಾಗಿ ಹೋದರೇ?
ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡಿನ ಮೂರು ಕ್ಷೇತ್ರಗಳ ಅಸೆಂಬ್ಲಿ ಚುನಾವಣೆಗೆ ಎಐಎಡಿಎಂಕೆ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಿಫಾರಂ ವಿತರಿಸಿದ್ದು, ಫಾರಂಗೆ ತಮಿಳುನಾಡು ಸಿಎಂ ಜಯಲಲಿತಾ ಅವರ ಸಹಿ ಬದಲು ಹೆಬ್ಬೆಟ್ಟು ತೆಗೆದುಕೊಳ್ಳಲಾಗಿದೆ.
ಚೆನ್ನೈ, ಅ 29: ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡಿನ ಮೂರು ಕ್ಷೇತ್ರಗಳ ಅಸೆಂಬ್ಲಿ ಚುನಾವಣೆಗೆ ಎಐಎಡಿಎಂಕೆ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಿಫಾರಂ ವಿತರಿಸಿದೆ.
ಬಿಫಾರಂಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರ ಸಹಿ ಬದಲು ಹೆಬ್ಬೆಟ್ಟು ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. (ಮುಖ್ಯಮಂತ್ರಿ ಜಯಲಲಿತಾ ಮೇಲೆ ವಾಮಾಚಾರ)
ಜಯಲಲಿತಾ ಸಹಿ ಹಾಕಲಾಗದಷ್ಟು ಅಶಕ್ತರಾಗಿದ್ದಾರೆಯೇ ಎನ್ನುವ ಹೊಸ ಚರ್ಚೆಗೆ ಈ ವಿದ್ಯಮಾನ ನಾಂದಿ ಹಾಡಿದೆ. ಜಯಾ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ, ದೀಪಾವಳಿ ಹೊತ್ತಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನುವ ಸುದ್ದಿಯ ನಡುವೆ ಈ ಘಟನೆ ಮತ್ತೆ ಜಯಾ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಚಿಂತಿಸುವಂತಾಗಿದೆ.
ಚುನಾವಣೆಗೆ ಸ್ಪರ್ಧಿಸುವ ವೇಳೆ ಪಕ್ಷದ ಪ್ರಮುಖರ ಸಹಿ ಇರುವ ಬಿ ಫಾರಂ ಅನ್ನು ಚುನಾವಣಾ ಆಯೋಗಕ್ಕೆ ನೀಡುವ ನಿಯಮವಿದೆ. ಪಕ್ಷದ ಪ್ರಮುಖರ ಆರೋಗ್ಯದಲ್ಲಿ ಏರುಪೇರಾಗಿದ್ದಲ್ಲಿ ಹೆಬ್ಬೆಟ್ಟು ಒತ್ತಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕೃತಕ ಉಸಿರಾಟ ವ್ಯವಸ್ಥೆಯ ಪ್ರಕ್ರಿಯೆಯಲ್ಲಿರುವ ಜಯಲಲಿತಾ ಅವರ ಬಲಗೈ ಊದಿಕೊಂಡಿರುವ ಕಾರಣ ಎಡಗೈ ಹೆಬ್ಬೆಟ್ಟನ್ನು ಬಿ ಫಾರಂಗೆ ಹಾಕಲಾಗಿದೆ ಎಂದು ಮದ್ರಾಸ್ ವೈದಕೀಯ ಕಾಲೇಜಿನ ಡಾ. ಬಾಲಾಜಿ ಪ್ರಮಾಣೀಕರಿಸಿದ್ದಾರೆ.
ಜಯಲಲಿತಾ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸಿಕೊಳ್ಳುತ್ತಿದೆ, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆಂದು ಅಪೊಲೋ ಆಸ್ಪತ್ರೆ ಮತ್ತು ಎಐಎಡಿಎಂಕೆ ಪತ್ರಿಕಾ ಪ್ರಕಟಣೆ ನೀಡಿದ್ದರೂ, ಇದುವರೆಗೂ ಆಸ್ಪತ್ರೆಯಲ್ಲಿರುವ ಜಯಾ ಅವರ ಫೋಟೋ ಆಗಲಿ ವಿಡಿಯೋವನ್ನಾಗಲಿ ಬಿಡುಗೊಡೆಗೊಳಿಸಲಿಲ್ಲ.
ಅರವಾಕುರಿಚಿ, ತಂಜಾವೂರು ಮತ್ತು ತಿರುಪ್ಪನಕುಂದ್ರಂ ಅಸೆಂಬ್ಲಿ ಕ್ಷೇತ್ರದ ಮರುಚುನಾವಣೆ ನವೆಂಬರ್ ತಿಂಗಳಲ್ಲಿ ನಿಗದಿಯಾಗಿದೆ.