ಗಂಗಾ ಶುದ್ಧೀಕರಣː ಕೇಂದ್ರಕ್ಕೆ ಮತ್ತೆ ಸುಪ್ರೀಂ ಚಾಟಿ
ನವದೆಹಲಿ, ಅ. 30: ಗಂಗಾ ನದಿಯನ್ನು ಕಲುಷಿತಗೊಳಿಸುತ್ತಿರುವ ಉದ್ಯಮಗಳ ವಿರುದ್ಧ ಕಠಿಣ ಕ್ರಮ ಯಾಕೆ ತೆಗೆದುಕೊಂಡಿಲ್ಲ? ಒಂದು ಉತ್ತಮ ಯೋಜನೆ ಸಾಕಾರಕ್ಕೆ ನೀವೇ ಹಿಂದೇಟು ಹಾಕಿದರೆ ಹೇಗೆ ಎಂದು? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧವೂ ತನ್ನ ಅಸಮಾಧಾನ ಹೊರಹಾಕಿದೆ.
ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಗಾಳಿಗೆ ತೂರಿ ನದಿಗೆ ವಿಷಪೂರಿತ ತ್ಯಾಜ್ಯಗಳನ್ನು ಸೇರಿಸುತ್ತಿರುವ ಕೈಗಾರಿಕೆಗಳನ್ನು ಮುಚ್ಚುವ ಬದಲು ಯಾಕೆ ಕೈ ಕಟ್ಟಿ ಕುಳಿತುಕೊಂಡಿದ್ದೀರಿ. ನಿಮ್ಮ ಕ್ರಮ ನಿರಾಶೆ ತಂದಿದೆ ಎಂದು ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.[ಗಂಗಾ ಶುದ್ಧೀಕರಣ ವಿಳಂಬ: ಕೇಂದ್ರಕ್ಕೆ ಸುಪ್ರೀಂ ಚಾಟಿ]
ಪರಿಸರ ನಿಯಮ ಉಲ್ಲಂಘಿಸುವ ಕೈಗಾರಿಕಾ ಘಟಕಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಈ ಬಗ್ಗೆ ಮಾಹಿತಿ ಕಲೆಹಾಕಬೇಕು. 2015ರ ಮಾರ್ಚ್ 31ರೊಳಗೆ ಕಲುಷಿತ ನೀರನ್ನು ಬಿಡುಗಡೆ ಮಾಡುವ ಸ್ಥಳಗಳಲ್ಲಿ ಸೆನ್ಸಾರ್ ಅಳವಡಿಕೆ ಕಡ್ಡಾಯ. ಇದರ ಜವಾಬ್ದಾರಿ ಸರ್ಕಾರ ಮತ್ತು ಹಸಿರು ನ್ಯಾಯಾಧಿಕರಣಕ್ಕಿರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.[ದೇಣಿಗೆ ನೀಡಿ, ತೆರಿಗೆ ಲಾಭ ಪಡೆಯಿರಿ]
ಗಂಗಾ ಶುದ್ಧೀಕರಣದಂಥ ಮಹತ್ವದ ಯೋಜನೆಗೆ ಪದೆ ಪದೆ ಯಾಕೆ ಹಿಂದೇಟು ಬೀಳುತ್ತಿದೆ? ಪವಿತ್ರ ನದಿಯನ್ನು ಶುದ್ಧ ಮಾಡುವುದು ಎಲ್ಲರ ಕಾರ್ಯ. ಕೆಲವೊಮ್ಮೆ ಉತ್ತಮ ಕೆಲಸ ಮಾಡಲು ಅನಿವಾರ್ಯವಾಗಿ ಕೆಲ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕೈಗಾರಿಕೆಗಳ ತ್ಯಾಜ್ಯ ತಡೆಯದಿದ್ದರೆ ನದಿ ಮತ್ತಷ್ಟು ಕಲುಷಿತಗೊಳ್ಳುತ್ತದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.