ಜಾಧವ್ ಗೆ ಮರಣದಂಡನೆಯಾದರೆ ಪರಿಣಾಮ ನೆಟ್ಟಗಿರಲ್ಲ: ಪಾಕ್ ಗೆ ಸುಷ್ಮಾ ವಾರ್ನಿಂಗ್
ಪಾಕಿಸ್ತಾನವು ಕುಲಭೂಷಣ್ ಜಾಧವ್ ಗೆ ಮರಣ ದಂಡನೆಯನ್ನು ಜಾರಿ ಮಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ
ನವದೆಹಲಿ, ಏಪ್ರಿಲ್ 11: ದೇಶದ ಮಗನ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಕುಲಭೂಷಣ್ ಜಾಧವ್ ರ ವಿಚಾರಣೆ ಒತ್ತಡದಿಂದ ಆಗಿರುವಂಥದ್ದು. ಒಂದು ವೇಳೆ ಈ ತೀರ್ಪು ಜಾರಿಯಾದರೆ ಅದರ ಪರಿಣಾಮವನ್ನು ಪಾಕಿಸ್ತಾನವು ದ್ವಿಪಕ್ಷೀಯ ಮಾತುಕತೆ ವೇಳೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ
"ಅಮಾಯಕ ಭಾರತೀಯನೊಬ್ಬನ ವಿರುದ್ಧ ಬಂದಿರುವ ತೀರ್ಪಿದು. ನಾವು ಏನು ಮಾಡಲು ಸಾಧ್ಯವಾಗಲಿಲ್ಲ. ಈ ತೀರ್ಪು ಪೂರ್ವನಿಯೋಜಿತ ಹತ್ಯೆಯಂಥದ್ದು" ಎಂದು ಅವರು ಟೀಕಿಸಿದ್ದಾರೆ.[ಜಾಧವ್ ನ ನೇಣಿಗೇರಿಸಿದರೆ ಅದು ಪಾಕ್ ನ ಪೂರ್ವನಿಯೋಜಿತ ಕೊಲೆ]
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಹೈ ಕಮಿಷನ್ ಗೆ ತೀರ್ಪು ಬಂದ ಮೂರು ಗಂಟೆ ನಂತರವಷ್ಟೇ ತಿಳಿಸಲಾಯಿತು. ಜಾಧವ್ ಅವರಿಗೆ ರಾಯಭಾರ ಸಂಪರ್ಕಕ್ಕೆ ಅವಕಾಶವೇ ನೀಡಿಲ್ಲ ಎಂದು ಜಾಧವ್ ಗೆ ಭಾರತದ ನೆರವಿನ ಬಗ್ಗೆ ಗುಲಾಂ ನಬಿ ಆಜಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಆತನ ನೆರವಿಗಾಗಿ ಭಾರತ ಎಲ್ಲವನ್ನೂ ಮಾಡುತ್ತದೆ ಎಂದು ಸುಷ್ಮಾ ಹೇಳಿದ್ದಾರೆ.
ಕುಲಭೂಷಣ್ ಬಳಿ ಭಾರತದ ಅಧಿಕೃತ ಪಸ್ ಪೋರ್ಟ್ ಇತ್ತು. ಆತ ಹೇಗೆ ಗೂಢಚಾರ ಆಗುವುದಕ್ಕೆ ಸಾಧ್ಯ ಎಂದು ಸಂಸತ್ ನಲ್ಲಿ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು, ಕುಲಭೂಷಣ್ ಗೆ ಭಾರತದಿಂದ ಯಾವುದೇ ರಾಜತಾಂತ್ರಿಕ ನೆರವು ಒದಗಿಸದಂತೆ ಪಾಕಿಸ್ತಾನ ನಿರಾಕರಿಸಿತು ಎಂದಿದ್ದಾರೆ.
ಕುಲಭೂಷಣ್ ಜಾಧವ್ ಗಾಗಿ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲವನ್ನೂ ಭಾರತ ಮಾಡುತ್ತದೆ ಮತ್ತು ಅವರಿಗೆ ನ್ಯಾಯ ಸಿಗುವಂತೆ ಮಾಡುವ ಭರವಸೆ ನೀಡುತ್ತೇನೆ ಎಂದು ಲೋಕಸಭೆಯಲ್ಲಿ ಸಿಂಗ್ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೇಳಿದ ಪ್ರಶ್ನೆಗೆ ರಾಜ್ ನಾಥ್ ಸಿಂಗ್ ಉತ್ತರಿಸಿದರು.[ಪಾಕಿಸ್ತಾನ ಮಿಲಿಟರಿ ಕೋರ್ಟ್ ನಲ್ಲಿ ಕುಲಭೂಷಣ್ ಜಾಧವ್ ಗೆ ಮರಣದಂಡನೆ]
ಕುಲಭೂಷಣ್ ಜಾಧವ್ ಗೆ ಸೋಮವಾರ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಮರಣದಂಡನೆ ವಿಧಿಸಿದೆ. ಜಾಧವ್ ಗೆ ಆಗಿರುವ ತೊಂದರೆ ನಿವಾರಿಸಲು ಲೋಕಸಭೆಯಲ್ಲಿ ನಾವೆಲ್ಲ ಒಟ್ಟಾಗಿ ಯತ್ನಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರ ರಾಜ್ ನಾಥ್ ಸಿಂಗ್ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.