ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು
ನವದೆಹಲಿ, ಸೆಪ್ಟೆಂಬರ್ 29 : ಪಾಕ್ ಬೆಂಬಲಿತ ಉಗ್ರರ ಕ್ಯಾಂಪಿಗೆ ನುಗ್ಗಿ 38 ಭಯೋತ್ಪಾದಕರನ್ನು ಮತ್ತು ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದಿರುವ ಭಾರತ ಪಾಕಿಸ್ತಾನದ ವಿರುದ್ಧ ಪ್ರಮುಖ ಜಯ ಸಾಧಿಸಿದೆ. ಉರಿ ಪ್ರದೇಶದಲ್ಲಿ ಮಲಗಿದ ಸೈನಿಕರನ್ನು ಹತ್ಯೆಗೈದು ಅಟ್ಟಹಾಸ ಮೆರೆದಿದ್ದ ಉಗ್ರರಿಗೆ ಮತ್ತು ಪಾಕಿಸ್ತಾನಕ್ಕೆ ನೆನಪಿನಲ್ಲುಳಿಯುವಂತೆ ಬರೆ ಹಾಕಿದೆ.
ಇದು ಕೇವಲ ಮಿತಿಯಲ್ಲಿ ಮಾಡಿದ ದಾಳಿ. ಇನ್ನೂ ಹೆಚ್ಚಿನ ದಾಳಿ ನಡೆಸಲು ರಣತಂತ್ರ ರೂಪಿಸುತ್ತಿದೆ. ಉರಿ ಪ್ರದೇಶದಲ್ಲಿ ಭಾರತದ ಸೈನಿಕರನ್ನು ಹತ್ಯೆಗೈದ ಸೇಡನ್ನು ಭಾರತ ತೀರಿಸಿಕೊಂಡಿದೆ. ಭಾರತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಶಾಂತಿ ಭಂಗಕ್ಕೆ ಯತ್ನಿಸಿದರೆ ತಿರುಗೇಟು ನೀಡುವುದರಿಂದ ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಈ ಮೂಲಕ ರವಾನಿಸಿದ್ದಾರೆ. [ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]
ಈ ಅದ್ಭುತ ಜಯಕ್ಕೆ ಇಡೀ ಭಾರತವೇ ಜೈಜೈಕಾರ ಹೇಳುತ್ತಿದೆ, ಸೈನಿಕರನ್ನು ಭಾರತದ ಜನತೆ ಕೊಂಡಾಡುತ್ತಿದೆ. ಹೇಡಿಯಂತೆ ಭಾರತದೊಳಗೆ ನುಸುಳಿ ಸೈನಿಕರ ಮೇಲೆ, ನಾಗರಿಕರ ಮೇಲೆ ದಾಳಿ ನಡೆಸುತ್ತಿದ್ದ ಪಾಕಿ ಭಯೋತ್ಪಾದಕರಿಗೆ ಪಾಠ ಕಲಿಸಲು ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ 10 ಪ್ರಮುಖ ಬೆಳವಣಿಗೆಗಳು ಇಲ್ಲಿವೆ. ['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]
ಗುಪ್ತಚರ ಇಲಾಖೆಗೆ ಸ್ಪಷ್ಟ ಮಾಹಿತಿ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಗಡಿ ನಿಯಂತ್ರಣಾ ರೇಖೆಯ ಬಳಿ ಸದ್ದಿಲ್ಲದೆ ಭಾರತದೊಳಗೆ ನುಸುಳಲು ಸನ್ನದ್ಧವಾಗಿದ್ದ 7 ಭಯೋತ್ಪಾದಕ ನೆಲೆಗಳನ್ನು ಸ್ಥಾಪಿಸಿರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. [ಎಷ್ಟು ಉಗ್ರರ ಕ್ಯಾಂಪ್ ಧ್ವಂಸ, ಎಷ್ಟು ಜನ ಉಗ್ರರು ಬಲಿ?]
ದಾಳಿ ನಡೆಸಲು ಕರಾರುವಾಕ್ಕಾದ ಯೋಜನೆ
ಉಗ್ರರ ನೆಲೆಗಳ ಮೇಲೆ ಸದಾ ಕಣ್ಣಿಟ್ಟಿದ್ದ ಭಾರತೀಯ ಸೇನೆ ಸಾಕಷ್ಟು ಅಧ್ಯಯನ ನಡೆಸಿದ ಬಳಿಕ ಆ ಏಳು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ಕರಾರುವಾಕ್ಕಾದ ಯೋಜನೆ ರೂಪಿಸಿದೆ.
ಸರ್ಜಿಕಲ್ ಸ್ಟ್ರೈಕ್ ಗೆ ತಂತ್ರಗಾರಿಕೆ
ಭೀಮ್ಬರ್ಗ್, ಹಾಟ್ಸ್ಪ್ರಿಂಗ್, ಕೇಲ್ ಮತ್ತು ಲೀಪಾ ಪ್ರದೇಶದಲ್ಲಿ ಭಾರತೀಯ ಸೇನೆ ತನ್ನ ಹದ್ದಿನ ಕಣ್ಣನ್ನು ನೆಟ್ಟಿದೆ. ಉಗ್ರರನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ಮಟ್ಟಹಾಕಲು ತಂತ್ರಗಾರಿಕೆ ಹೆಣೆದಿದೆ.
ಗುಪ್ತ ಕಾರ್ಯಾಚರಣೆಯ ಬಗ್ಗೆ ಪ್ರಧಾನಿಗೆ ಮಾಹಿತಿ
ಮುಂದೆ ನಡೆಸಬೇಕಾದ ವಿಶೇಷ ಮತ್ತು ಗುಪ್ತ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶವನ್ನು ರವಾನಿಸಿದೆ.
12 ಗಂಟೆಯ ಸುಮಾರಿಗೆ ದಾಳಿಗೆ ನಿರ್ಧಾರ
ಸರಿಯಾಗಿ ಬುಧವಾರ ರಾತ್ರಿ ಹನ್ನೆರಡು ಗಂಟೆಗೆಯ ಹೊತ್ತಿಗೆ ದಾಳಿ ನಡೆಸಲು ನಿರ್ಧರಿಸಲಾಯಿತು. ಗಡಿ ನಿಯಂತ್ರಣಾ ರೇಖೆಯ ಬಳಿ ಸೈನಿಕರನ್ನು ವಿಮಾನದ ಮುಖಾಂತರ ಇಳಿಸಲಾಗಿದೆ.
ಉಗ್ರರ ಕ್ಯಾಂಪಿನ ಬಳಿ ಸದ್ದಿಲ್ಲದೆ ನುಗ್ಗಿದ ಸೇನೆ
ಸರಿಯಾಗಿ ರಾತ್ರಿ 12.30ಕ್ಕೆ ಕಾರ್ಯಾಚರಣೆ ಆರಂಭವಾಗಿದೆ. ಗಡಿ ನಿಯಂತ್ರಣಾ ರೇಖೆ ದಾಟಿ ಸೈನಿಕರು ಉಗ್ರರ ಕ್ಯಾಂಪಿನ ಬಳಿ ಸದ್ದಿಲ್ಲದೆ ನುಗ್ಗಿದ್ದಾರೆ. ಪ್ಯಾರಾಕಮಾಂಡೋಗಳು ಹೆಲಿಕಾಪ್ಟರ್ ಮುಖಾಂತರ ಭೂಮಿಯ ಮೇಲೆ ತೆವಳುತ್ತ ಸಾಗಿದ ಸೈನಿಕರಿಗೆ ಸಹಾಯ ಮಾಡುತ್ತಿದ್ದರು.
ಅಜಿತ್ ಡೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್, ಸೇನಾ ಕಾರ್ಯಾಚರಣೆ ಮಹಾನಿರ್ದೇಶಕ ರಣಬೀರ್ ಸಿಂಗ್ ಈ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಿರಂತರವಾಗಿ ಮಾಡುತ್ತಿದ್ದರು.
ಉಗ್ರರ ಕ್ಯಾಂಪ್ ಮೇಲೆ ಮುಗಿಬಿದ್ದ ಸೇನೆ
ಗಡಿ ನಿಯಂತ್ರಣಾ ರೇಖೆಯಿಂದ 500 ಮೀಟರಿನಿಂದ ಹಿಡಿದು 2 ಕಿ.ಮೀ.ವರೆಗೆ ಗುರುತಿಸಲಾಗಿದ್ದ 7 ಭಯೋತ್ಪಾದನಾ ಕ್ಯಾಂಪ್ ಮೇಲೆ ಭಾರತೀಯ ಸೈನಿಕರು ಮುಗಿಬಿದ್ದಿದ್ದಾರೆ.
ಸೇನೆಯ ಗುಂಡಿಗೆ 38 ಉಗ್ರರು ಬಲಿ
ಪಾಕ್ ಬೆಂಬಲಿತ ಭಯೋತ್ಪಾದಕರು ಈ ದಾಳಿಗೆ ಪ್ರತಿಯಾಗಿ ತಿರುಗಿಬೀಳುವ ಮೊದಲೇ ಹತರಾಗಿದ್ದಾರೆ. ಕ್ಯಾಂಪಿನಲ್ಲಿದ್ದ 38 ಉಗ್ರರು ಮತ್ತು ಇಬ್ಬರು ಪಾಕಿಸ್ತಾನಿ ಸೈನಿಕರು ಭಾರತದ ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ.
4.30ರ ಸುಮಾರಿಗೆ ಸರ್ಜಿಕಲ್ ಸ್ಟ್ರೈಕ್ ಮುಕ್ತಾಯ
ಗುರುವಾರ ಬೆಳಗಿನ ಜಾವ 4.30ರ ಸುಮಾರಿಗೆ ಸರ್ಜಿಕಲ್ ಸ್ಟ್ರೈಕ್ ಮುಕ್ತಾಯವಾಗಿದೆ. ಮಾಡಬೇಕಾದ ಕಾರ್ಯವನ್ನು ಮಟ್ಟಸವಾಗಿ ಮುಗಿಸಿರುವ ಭಾರತೀಯ ಸೈನಿಕರು ಮತ್ತಷ್ಟು ದಾಳಿಗೆ ಸನ್ನದ್ಧರಾಗುತ್ತಿದ್ದಾರೆ.