ನಟ ಸುರೇಶ್ ಗೋಪಿಗೆ ಮೋದಿ ಕಡೆಯಿಂದ ಗಿಫ್ಟ್
ನವದೆಹಲಿ, ಮೇ.22: ಮಲೆಯಾಳಂ ನಟ, ಗಾಯಕ, ನಿರೂಪಕ ಸುರೇಶ್ ಗೋಪಿ ಅವರಿಗೆ ಕೊನೆಗೂ ನರೇಂದ್ರ ಮೋದಿ ಸರ್ಕಾರ ದಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಲಭ್ಯ ಮಾಹಿತಿ ಪ್ರಕಾರ ನ್ಯಾಷನಲ್ ಫಿಲಂ ಡೆವಲ್ಪ್ ಮೆಂಟ್ ಕಾರ್ಪೊರೇಷನ್ (ಎನ್ಎಫ್ ಡಿಸಿ) ಚೇರ್ಮನ್ ಆಗಿ ಸುರೇಶ್ ಗೋಪಿ ನೇಮಕ ಬಹುತೇಕ ಖಚಿತವಾಗಿದೆ.
ಇತ್ತೀಚಿಗೆ ಸುರೇಶ್ ಗೋಪಿ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಹಾಗೂ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಠ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಉನ್ನತ ಹುದ್ದೆಗೇರಿದ ಮೊದಲ ಮಲೆಯಾಳಿ ಎಂಬ ಗೌರವ ಸುರೇಶ್ ಗೋಪಿಗೆ ಸಲ್ಲುತ್ತದೆ. [ಕೋಲ್ಕತ್ತಾ ನಂತರ ಕೇರಳದತ್ತ ಮೋದಿ,ಶಾ ಚಿತ್ತ]
ರಾಜಕಾರಣಿ ಅಲ್ಲದ, ರಾಜಕೀಯ ನನಗೆ ಬೇಡ ಎನ್ನುವ ನಾಯರ್ ಕುಟುಂಬದ ಸುರೇಶ್ ಗೋಪಿಗೆ ಮೋದಿ ಮಣೆ ಹಾಕಿರುವುದು ಮಲ್ಲೂ ನಾಡಲ್ಲಿ ಕುತೂಹಲ ಕೆರಳಿಸಿತ್ತು. ಲೋಕಸಭೆ ಚುನಾವಣೆ 2014ರ ಸಂದರ್ಭದಲ್ಲಿ ಪ್ರಚಾರಕ್ಕಾಗಿ ದೇವರನಾಡಿಗೆ ಮೋದಿ ಅವರು ಕಾಲಿಟ್ಟಾಗ ಗೋಪಿ ಅವರು ಸ್ವಾಗತಿಸಿದ್ದಲ್ಲದೆ ಮೋದಿ ಅವರ ಮೆಚ್ಚುಗೆ ಪಡೆದುಕೊಂಡಿದ್ದರು.
ಸುರೇಶ್
ಗೋಪಿಗೆ
ಕೇಂದ್ರದ
ವಾರ್ತಾ
ಮತ್ತು
ಪ್ರಸಾರಾ
ಇಲಾಖೆ
ಅಡಿಯಲ್ಲಿ
ರಾಜ್ಯ
ಸಚಿವ
ಸ್ಥಾನಕ್ಕೆ
ಸಮಾನವಾದ
ಹುದ್ದೆಯನ್ನು
ಮೋದಿ
ಅವರು
ನೀಡಲು
ಮುಂದಾಗಿದ್ದಾರೆ.
ನಾಯರ್ ಕುಟುಂಬದ ಸುರೇಶ್ ಗೋಪಿ
ಮಲೆಯಾಳಂ ಚಿತ್ರರಂಗದ ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ. ಅದರೆ, ಗೋಪಿಯನ್ನು ಬಿಜೆಪಿ ಸೇರಿಸಿಕೊಳ್ಳುವ ಯತ್ನ ಯಾಕೋ ಸಫಲವಾಗಲಿಲ್ಲ. ಹೀಗಾಗಿ ಅವರಿಗೆ ಈ ರೀತಿ ಹುದ್ದೆಗೇರಿಸಲಾಗುತ್ತಿದೆ. ಕೋಟ್ಯಧಿಪತಿ ಕಾರ್ಯಕ್ರಮದ ಮಲೆಯಾಳಂ ಆವೃತ್ತಿಯ ನಿರೂಪಕರಾಗಿ ಮನೆ ಮಾತಾಗಿದ್ದಾರೆ ಕೂಡಾ. ಕನ್ನಡಿಗರಿಗೆ ನ್ಯೂಡೆಲ್ಲಿ ಚಿತ್ರದ ಮೂಲಕ ಪರಿಚಯ.
ರಮೇಶ್ ಸಿಪ್ಪಿ ಸ್ಥಾನಕ್ಕೆ ಮಲೆಯಾಳಿ
ಹಿರಿಯ ಚಿತ್ರಕರ್ಮಿ ರಮೇಶ್ ಸಿಪ್ಪಿ ಅವರ ಸ್ಥಾನಕ್ಕೆ ಮಲೆಯಾಳಿ ಗೋಪಿ ಅವರನ್ನು ಕರೆ ತರಲು ಎನ್ ಡಿಎ ಸರ್ಕಾರ ಯೋಜಿಸಿದೆ. ಈ ಹುದ್ದೆ ಕೇಂದ್ರದ ರಾಜ್ಯ ಸಚಿವರ ಹುದ್ದೆಗೆ ಸಮಾನವಾಗಿರುತ್ತದೆ. ಭಾರತದ ಎಲ್ಲಾ ಭಾಷೆಗಳ ಚಿತ್ರಗಳನ್ನು ವಿದೇಶದಲ್ಲಿ ಸದಭಿರುಚಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಹಾಗೂ ಅಲ್ಲಿಂದ ಉತ್ತಮ ಚಿತ್ರಗಳನ್ನು ಇಲ್ಲಿಗೆ ತರುವ ಯತ್ನ ಎನ್ ಎಫ್ ಡಿಸಿ ಮಾಡುತ್ತದೆ.
ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದ ಗೋಪಿ
ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದರು. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು.
ಸುರೇಶ್ ಗೋಪಿ ರಾಜಕೀಯ ಪ್ರವೇಶದ ಬಗ್ಗೆ
ಕಳೆದ ಹತ್ತು ವರ್ಷದಿಂದ ಸುದ್ದಿ ಇದೆ. ಈಗ ಐ ಚಿತ್ರದ ಜನಪ್ರಿಯತೆಯೂ ಸಾಥ್ ನೀಡಿದೆ. ಈ ಹಿಂದೆ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದು ಬಿಟ್ಟರೆ ಮೋದಿ ಅವರನ್ನು ಮಾತ್ರ ಮೆಚ್ಚಿಕೊಂಡಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಬಿಜೆಪಿ ಸೇರಿದಂತೆ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುವ ಸಾಧ್ಯತೆಗಳಿವೆ.
ಬಿಜೆಪಿ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ
ಕೇರಳದ ಬಿಜೆಪಿ ಘಟಕದ ಅಧ್ಯಕ್ಷ ವಿ ಮುರಳೀಧರನ್ ಅವರು ಗೋಪಿ ಜೊತೆ ಸಂಪರ್ಕದಲ್ಲಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸೇರುವಂತೆ ಅಧಿಕೃತವಾಗಿ ನಟ ಸುರೇಶ್ ಗೋಪಿ ಅವರಿಗೆ ಆಹ್ವಾನ ಕಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುರೇಶ್ ಗೋಪಿ ಅವರು ಬಿಜೆಪಿ ಆಹ್ವಾನ ಸ್ವೀಕರಿಸಿದ್ದು ಈ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದಿದ್ದಾರೆ.