ಟಿಡಿಕೆ ಬುದ್ಧು ಪಿಸಿ ಬಿಸಿ ಕೂಡ ಜೈಲು ಸೇರಬೇಕು : ಸ್ವಾಮಿ
"ಎಲ್ಲಿ ಗೆದ್ದಿದ್ದೀರಿ? ಶಶಿಕಲಾ ನಟರಾಜನ್ ಅವರನ್ನು ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಬೇಕೆಂದು ಬೊಂಬಡಾ ಹೊಡೆಯುತ್ತಿದ್ದವರೇ ನೀವು" ಎಂದು ಟ್ವಿಟ್ಟಿಗರೊಬ್ಬರು ಸ್ವಾಮಿ ತಲೆಯ ಮೇಲೆ ಕುಟ್ಟಿದ್ದಾರೆ.
ಚೆನ್ನೈ, ಫೆಬ್ರವರಿ 14 : "ಇಪ್ಪತ್ತು ವರ್ಷಗಳ ನಂತರ ನಾನು ಗೆದ್ದಿದ್ದೇನೆ. ಇನ್ನು ಟಿಡಿಕೆ, ಬುದ್ಧು, ಪಿಸಿ, ಬಿಸಿ ಮತ್ತು ಟಾಟಾ ಜೈಲು ಸೇರುವ ಸಮಯ" ಎಂದು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸದ್ಯದ ವಿದ್ಯಮಾನಗಳ ಕೇಂದ್ರಬಿಂದು.
1996ರಲ್ಲಿ ಜಯಲಲಿತಾ ಮತ್ತು ಸಂಗಡಿಗರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕೇಸನ್ನು ಜಡಿದಿದ್ದೇ ಸುಬ್ರಮಣಿಯನ್ ಸ್ವಾಮಿ. 20ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ವಿಚಾರಣೆ, ವಾದಗಳ ನಂತರ ತೀರ್ಪು ಪ್ರಕಟವಾಗಿದೆ. ಈ ಸಂದರ್ಭದಲ್ಲಿ ಉಳಿದ ಕ್ರಿಮಿನಲ್ ಗಳು ಕೂಡ ಜೈಲೂಟ ಮಾಡಲು ಇದು ಸಕಾಲ ಎಂದು ಟ್ವೀಟ್ ಮಾಡಿದ್ದಾರೆ ಸ್ವಾಮಿ.
ಹಾಗೆಯೆ 'ಗೆದ್ದಿದ್ದೇನೆ' ಎಂಬ ಸ್ವಾಮಿಯ ಮಾತು ಟೀಕೆಗೂ ಗುರಿಯಾಗಿದೆ. "ಎಲ್ಲಿ ಗೆದ್ದಿದ್ದೀರಿ? ಶಶಿಕಲಾ ನಟರಾಜನ್ ಅವರನ್ನು ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಬೇಕೆಂದು ಬೊಂಬಡಾ ಹೊಡೆಯುತ್ತಿದ್ದವರೇ ನೀವು" ಎಂದು ಟ್ವಿಟ್ಟಿಗರೊಬ್ಬರು ಸ್ವಾಮಿ ತಲೆಯ ಮೇಲೆ ಕುಟ್ಟಿದ್ದಾರೆ. [20 ವರ್ಷಗಳ ನಂತರ ಸತ್ಯಕ್ಕೆ ಗೆಲುವು: ಸ್ವಾಮಿ]
ಅದೇನೇ ಇರಲಿ, ತಮ್ಮ ಮೊನಚಾದ ಟ್ವೀಟ್ ಮುಖಾಂತರ ಖ್ಯಾತ ನಾಮರ ಕಾಲನ್ನು ಎಳೆಯುವುದು, ವಿವಾದಕ್ಕೆ ಗ್ರಾಸವಾಗುವುದು, ಕೆಲಬಾರಿ ನಗೆಪಾಟಲಿಗೆ ಈಡಾಗುವುದು ಸ್ವಾಮಿಯವರ ಹವ್ಯಾಸ. ಪ್ರಸ್ತುತ, ಇಂದು ಮಾಡಿರುವ ಟ್ವೀಟಿನಲ್ಲಿ ಇರುವ ಟಿಡಿಕೆ, ಬುದ್ಧು ಎಂಬಿತ್ಯಾದಿಗಳ ಅರ್ಥ ಹೀಗಿರಬಹುದೆ? [LIVE: ಅಂತಿಮವಾಗಿ ಧರ್ಮಕ್ಕೆ ಗೆಲುವಾಗಲಿದೆ: ಶಶಿಕಲಾ]
ಸೋನಿಯಾರನ್ನು ತಾಟಕಿಯೊಂದಿಗೆ ಹೋಲಿಕೆ
ಟಿಡಿಕೆ = TaDaKka ಅಂದ್ರೆ ತಾಟಕಾ. ಸೋನಿಯಾ ಗಾಂಧಿ ಅವರನ್ನು ಸುಬ್ರಮಣಿಯನ್ ಸ್ವಾಮಿ ಅವರು ರಾಮಾಯಣದಲ್ಲಿ ಬರುವ, ಮಾರೀಚನ ಸಹೋದರಿಯಾದ ತಾಟಕಿಗೆ ಹೋಲಿಸಿದ್ದಾರೆ. ಸ್ವಾಮಿ ಹೂಡಿರುವ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸೋನಿಯಾ ಗಾಂಧಿ ಕೂಡ ಒಬ್ಬ ಪ್ರಮುಖ ಆರೋಪಿ. [ಭಾರತ ನನ್ನ ಮನೆ, ಇಲ್ಲಿಯೇ ಸಾಯುತ್ತೇನೆ : ಸೋನಿಯಾ]
ರಾಹುಲ್ ರನ್ನು ಸ್ವಾಮಿ ಸಂಬೋಧಿಸುವ ರೀತಿ
ಬುದ್ಧು = ಮಂದಬುದ್ಧಿಯವನು. ಈ ಪದವನ್ನು, ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಆರ್ಥಿಕಶಾಸ್ತ್ರದಲ್ಲಿ ಪಿಎಚ್ಡಿ ಮಾಡಿರುವ ಸುಬ್ರಮಣಿಯನ್ ಸ್ವಾಮಿಯವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಂಬೋಧಿಸುವಂಥ ರೀತಿ. ರಾಹುಲ್ ಕೂಡ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸಹಆರೋಪಿ. ರಾಹುಲ್ ಗಾಂಧಿಯವರನ್ನು ಬ್ಯಾಂಬಿನೋ ಅಂತಲೂ ಸ್ವಾಮಿ 'ಪ್ರೀತಿಯಿಂದ' ಕರೆಯುತ್ತಾರೆ. [ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್]
ಪಿಸಿ ಅಂದ್ರೆ ಪಾಪಾ ಚೋರ್
ಪಿಸಿ = ಪಿ. ಚಿದಂಬರಂ. ಪಿಸಿ ಅಂದ್ರೆ ಪಾಪಾ ಚೋರ್ ಎಂಬ ಅರ್ಥವನ್ನೂ ಸ್ವಾಮಿಯವರೇ ನೀಡಿದ್ದಾರೆ. 1.67 ಲಕ್ಷ ಕೋಟಿ ರುಪಾಯಿಯ 2ಜಿ ಹಗರಣದಲ್ಲಿ ಪಿ ಚಿದಂಬರಂ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇದರಲ್ಲಿ ಪಿಸಿ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸುವ ಸುಬ್ರಮಣಿಯನ್ ಸ್ವಾಮಿ ಅವರ ಬಳಿ ಯಾವುದೇ ಸಾಕ್ಷಿ ಇಲ್ಲ.
ಬೇಬಿ ಚೋರ್ ಅಂದ್ರೆ ಪಾಪಾ ಚೋರ್
ಬಿಸಿ = ಬೇಬಿ ಚೋರ್ ಅಂದ್ರೆ ಪಾಪಾ ಚೋರ್ ಮಗ ಕಾರ್ತಿ ಚಿದಂಬರಂ ಅವರು. ಮ್ಯಾಕ್ಸಿಸ್ ಏರ್ಸೆಲ್ ಡೀಲ್ ನಲ್ಲಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರ ಕೈವಾಡವನ್ನು ಸುಬ್ರಮಣಿಯನ್ ಸ್ವಾಮಿ ಬಯಲಿಗೆಳೆದಿದ್ದಾರೆ. ಈ ಕೇಸಿನಲ್ಲಿ ಕಾರ್ತಿ ಚಿದಂಬರಂ ಕೂಡ ಜೈಲು ಸೇರಬೇಕೆನ್ನುವುದು ಸ್ವಾಮಿಯ ಮಹದಾಸೆ. [ಕಾರ್ತಿ ಚಿದಂಬರಂಗೆ ಸೇರಿದ ಬೆಂಗಳೂರು ಕಚೇರಿ ಮೇಲೆ ದಾಳಿ]
ಇನ್ನೂ ಹಲವಾರು ಕೋಡ್ ಪದಗಳು
ಸ್ವಾಮಿಯವರು ತಮ್ಮ ಟ್ವೀಟ್ ಗಳಲ್ಲಿ ಶ್ರೀ 420, ಪೊರ್ಕಿ, ಬೂಜ್ ಬಾಟಲ್, ವಿಕೆ (ವಿಷಕನ್ಯಾ), ಬ್ಯಾಂಬಿನೋ, ರಾಬ್ಬರ್ ದಾಮಾದ್, ಮೊಹಮ್ಮದ್ ಬಿನ್ ತುಘಲಕ್, ಆಪ್ಟಾರ್ಡ್ಸ್, ಎಂಎಂಎಸ್, ಜೆಜೆ ಮುಂತಾದ ಪದಗಳನ್ನು ಭಾರತದ ರಾಜಕೀಯದಲ್ಲಿರುವ ಹಲವಾರು ಖ್ಯಾತನಾಮರನ್ನು ಬಣ್ಣಿಸಲು ಬಳಸುತ್ತಲೇ ಇರುತ್ತಾರೆ. ಇವುಗಳ ಅರ್ಥವೇನೆಂದು ನೀವೇ ಹುಡುಕಿ.