'ಚಪ್ಪಲಿ' ಸಂಸದ ರವೀಂದ್ರ ಗಾಯಕ್ವಾಡ್ ಗೆ ಮತ್ತೆ ಮುಖಭಂಗ
ನವದೆಹಲಿ, ಮಾರ್ಚ್ 28: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಹಿನ್ನೆಲೆಯಲ್ಲಿ ವಿಮಾನ ಯಾನ ಸಂಸ್ಥೆಗಳ ಒಕ್ಕೂಟದಿಂದ ನಿಷೇಧಕ್ಕೊಳಗಾಗಿರುವ ಮಹಾರಾಷ್ಟ್ರದ ಒಸ್ಮಾನಾಬಾದ್ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ಮತ್ತೊಮ್ಮೆ ಮುಖಭಂಗವಾಗಿದೆ.
ಕಳೆದ ಗುರುವಾರ (ಮಾರ್ಚ್ 25) ಈ ಘಟನೆ ನಡೆದಿತ್ತು. ಆದರೆ, ನಾಲ್ಕೈದು ದಿನಗಳ ತರುವಾಯ ರವೀಂದ್ರ ಅವರು ಪುಣೆಯಿಂದ ನವದೆಹಲಿಗೆ ಪ್ರಯಾಣ ಬೆಳೆಸಲು ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ, ಅದನ್ನು ಗಮನಿಸಿರುವ ಏರ್ ಇಂಡಿಯಾ ಸಂಸ್ಥೆಯು ಅದನ್ನು ರದ್ದುಗೊಳಿಸಿದೆ.
ವಿಮಾನಯಾನ ಸಂಸ್ಥೆಗಳ ಒಕ್ಕೂಟದ ನಿಷೇಧದಿಂದಾಗಿ, ರವೀಂದ್ರ ಅವರು, ಪುಣೆಯಿಂದ ದೆಹಲಿಗೆ ಹಾಗೂ ದೆಹಲಿಯಿಂದ ಪುಣೆಗೆ ರೈಲಿನಲ್ಲಿ ಪ್ರಯಾಣ ಮಾಡುವ ಪರಿಸ್ಥಿತಿ ಬಂದೊದಗಿದೆ.
ಕಳೆದ ಗುರುವಾರ, ಮಾರ್ಚ್ 25ರಂದು ಪುಣೆಯಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದ ರವೀಂದ್ರ, ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂದು ವಿಮಾನದಲ್ಲೇ ಪ್ರತಿಭಟನೆಗೆ ಮುಂದಾಗಿ ಗಲಾಟೆ ಮಾಡಿಕೊಂಡಿದ್ದರು.