ಈ ದಿನ ಈವರೆಗೆ: ಶೃಂಗೇರಿ ಸ್ವರ್ಣ ಗೋಪುರ, ಇನ್ನಿತರ ಸಚಿತ್ರ ವರದಿ
ಇಡೀ ದೇಶವೇ ಬುಧವಾರ ಬಜೆಟ್ ನಲ್ಲಿ ಮುಳುಗೆದ್ದು ಬಂದಿದೆ. ಆದರಿನ್ನೂ ಮೈ ಆರಿಲ್ಲ! ಕೇಂದ್ರದಲ್ಲಿ ಬಜೆಟ್ ಮಂಡನೆಯಾದ ಮರುದಿನವೂ ಅದರ ಪರ ಹಾಗೂ ವಿರೋಧದ ಚರ್ಚೆಗಳಾಗುತ್ತಿವೆ.
ಆದರೆ, ಅದರ ಜತೆಯಲ್ಲೇ ಜನಜೀವನ ನಿತ್ಯ ಸಾಗುತ್ತಿದೆ. ಎಂದಿನಂತೇ ಸೂರ್ಯ ಉದಯಿಸಿದ್ದಾನೆ. ಎಂದಿನಂತೆ ಗಾಳಿಯೂ ಬೀಸುತ್ತಿದೆ. ಕಾಶ್ಮೀರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಗಾಢವಾದ ಮಂಜು ಇನ್ನೂ ಸುರಿಯುತ್ತಲೇ ಇದೆ. ದೇಶದೆಲ್ಲಡೆ ನಾನಾ ಸಭೆ, ಸಮಾರಂಭಗಳು ನಡೆದಿವೆ. ವಿದೇಶಗಳಲ್ಲೂ ಅಲ್ಲಿನ ಎಲ್ಲಾ ಒತ್ತಡಗಳ ನಡುವೆ ಜನಜೀವನ ಸಾಗಿದೆ.
ಗುರುವಾರ ದೇಶದ ನಾನಾ ಕಡೆ ಸಭೆ ಸಮಾರಂಭಗಳು ಜರುಗಿವೆ. ಕರ್ನಾಟಕದ ಶೃಂಗೇರಿಯ ಶ್ರೀ ಶಾರದಾ ಮಾತೆಯ ದೇಗುಲದ ಸ್ವರ್ಣಗೋಪುರದ ಕುಂಭಾಭಿಷೇಕ ನಡೆಯಿತು. ಅಹ್ಮದಾಬಾದ್ ನಲ್ಲಿ ನಟ ಶಾರೂಖ್ ಖಾನ್ ಅವರಿಗೆ ಅವರ ಅಭಿಮಾನಿಯೊಬ್ಬ ಗಾಂಧಿ ತತ್ವವನ್ನು ನೆನಪಿಸುವ ಚರಕವನ್ನು ನೀಡಿದ. ದೂರದ ಲಂಡನ್ ನಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರು, ಮಕ್ಕಳೊಂದಿಗೆ ಆಡಿ ಸಂಭ್ರಮಿಸಿದರು.
ಏತನ್ಮಧ್ಯೆ, ಮಂಗಳವಾರ ಸಂಸತ್ತಿನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಕೇರಳದ ಸಂಸದ ಇ. ಅಹ್ಮದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ದೆಹಲಿಯಲ್ಲಿ ಏರ್ಪಡಿಸಲಾಗಿತ್ತು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮುಂತಾದವರು ಮೃತರ ಅಂತಿಮ ದರ್ಶನ ಪಡೆದರು.
ಮೇಲೆ ಹೇಳಲಾದ ಕೆಲವಾರು ಕುತೂಹಲಕಾರಿ ಸಂದರ್ಭಗಳ ಫೋಟೋ ಝಲಕ್ ಇಲ್ಲಿ ನಿಮಗಾಗಿ....
ಶೃಂಗೇರಿ ಸನ್ನಿಧಿಗೆ ಹೊನ್ನಿನ ಗೋಪುರ
ಶೃಂಗೇರಿಯಲ್ಲಿ ಶ್ರೀ ಶಾರದಾ ಮಾತೆ ಸನ್ನಿಧಾನದ ಗರ್ಭಗುಡಿ ಗೋಪುರಕ್ಕೆ ಬಂಗಾರದ ಕವಚವನ್ನು ಹೊದಿಸಲಾಗಿದ್ದು, ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಗೋಪುರಕ್ಕೆ ಪೂಜೆ ಸಲ್ಲಿಸಿ ಲೋಕಾರ್ಪಣೆ ಮಾಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಹಾಜರಿ
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಮಂಗಳವಾರ ನಿಧನರಾದ ಸಂಸದ ಇ. ಅಹ್ಮದ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಪ್ರಧಾನಿಯಿಂದ ಅಂತಿಮ ದರ್ಶನ
ನವದೆಹಲಿಯ ಅಹ್ಮದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ನಿಧನರಾದ ಸಂಸದ ಇ.ಅಹ್ಮದ್ ಅವರ ಪಾರ್ಥಿವ ದರ್ಶನ ಪಡೆದರು.
ಇದು ನಮ್ಮ ಕಾಶ್ಮೀರ
ಕಳೆದ ಹತ್ತು ಹದಿನೈದು ದಿನಗಳಿಂದ ಸುರಿಯುತ್ತಿರುವ ಮಂಜಿನ ಮಳೆಯಿಂದ ಕಾಶ್ಮೀರ ಯೂರೋಪ್ ದೇಶಗಳಂತಾಗಿದೆ. ಹಿಮಚ್ಛಾದಿತ ಪ್ರದೇಶದಲ್ಲಿ ರೈಲೊಂದು ಚಲಿಸುತ್ತಿರುವ ಈ ಚಿತ್ರ ಫೋಟೋಗ್ರಾಫಿ ಪ್ರಿಯರಿಗೊಂದು ಖುಷಿ ನೀಡಬಲ್ಲದು.
ಎಂಟು ವರ್ಷದ ಮಕ್ಕಳೊಂದಿಗೆ ನಲಿವು
ಲಂಡನ್ ನ ಯಹೂದಿಗಳ ಶಾಲೆಯೊಂದಕ್ಕೆ ಗುರುವಾರ ಭೇಟಿ ನೀಡಿದ್ದ ಬ್ರಿಟನ್ ರಾಜಕುಮಾರ ಚಾರ್ಲ್ಸ್, ಕಮ್ಯೂನಿಟಿ ಸಮಾರಂಭವೊಂದರಲ್ಲಿ ಭಾಗವಹಿಸಿ ಎಂಟು ವರ್ಷದ ಎಳೆಯರೊಂದಿಗೆ ನಲಿದಾಡಿ ದಿನಗಳೆದರು.
ಶಾರೂಖ್ ಗೆ ಚರಕ
ಅಹ್ಮದಾಬಾದ್ ನಲ್ಲಿ ನಡೆದ ಸಮಾರಂಭವೊಂದಕ್ಕೆ ಆಗಮಿಸಿದ ಬಾಲಿವುಡ್ ನಟ ಶಾರೂಖ್ ಖಾನ್ ಗೆ ಅವರ ಅಭಿಮಾನಿಯೊಬ್ಬ ಚರಕವನ್ನು ಉಡುಗೊರೆಯಾಗಿ ನೀಡಿದ. ಈ ವಿಶೇಷ ಉಡುಗೊರೆಗೆ ಶಾರೂಖ್ ಕೂಡ ಮಂದಸ್ಮತಿ ಬೀರಿ ಸ್ವಾಗತಿಸಿದರು.
ಹೂಂಕರಿಸಿದ ಗೂಳಿ
ಮುಂಬೈನ ಷೇರು ಮಾರುಕಟ್ಟೆ ಬಜೆಟ್ ನಂತರದ ದಿನವೂ ಉತ್ತಮ ಸ್ಥಿತಿಯಲ್ಲಿತ್ತು. ನಾನಾ ಷೇರುಗಳನ್ನು ಭರವಸೆಯ ಹಾದಿಯಲ್ಲೇ ಸಾಗಿದವು. ಮುಂಬೈ ಷೇರು ಮಾರುಕಟ್ಟೆಯ ಮುಂದಿರುವ ಗೂಳಿಯ ಪ್ರತಿಮೆ ಇದನ್ನು ಬಿಂಬಿಸುವಂತಿತ್ತು.