ಶೀಘ್ರದಲ್ಲೇ ಯೋಧ ಚಂದು ಬಿಡುಗಡೆ ಮಾಡಲಿರುವ ಪಾಕಿಸ್ತಾನ
ಮುಂಬೈ, ಜನವರಿ 12: ಕಳೆದ ವರ್ಷ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯ ಯೋಧ ಚಂದು ಚವ್ಹಾಣ್ ಅವರನ್ನು ಶೀಘ್ರದಲ್ಲೇ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಾಮ್ರೆ ತಿಳಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿ ಗುರುವಾರ ನಡೆದ ಭಾರತೀಯ ನೌಕಾಪಡೆಯ ಖಂಡೇರಿ ಜಲಾಂತರ್ಗಾಮಿ ನೌಕೆಯ ರಾಷ್ಟ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಮಹಾರಾಷ್ಟ್ರದ ಭಮ್ರೆ ಜಿಲ್ಲೆಯ ಧುಲೆ ಎಂಬ ಊರಿನ ಚಂದು ಚವ್ಹಾಣ್, 2016ರ ಸೆಪ್ಟಂಬರ್ 30ರಂದು ತಮಗರಿವಿಲ್ಲದಂತೆಯೇ ಪಾಕಿಸ್ತಾನದ ಗಡಿ ದಾಟಿ ಹೋಗಿದ್ದರು. ಸಚಿವ ಸುಭಾಷ್ ಭಾಮ್ರೆ ಕೂಡಾ ಅದೇ ಸಂಸತ್ ಕ್ಷೇತ್ರದಿಂದಲೇ ಆರಿಸಿಬಂದವರಾಗಿದ್ದಾರೆ.[ಐಎನ್ಎಸ್ ಖಾಂಡೇರಿ ಜಲಾಂತರ್ಗಾಮಿ ರಾಷ್ಟ್ರಕ್ಕೆ ಸಮರ್ಪಣೆ]
"ಪಾಕಿಸ್ತಾನ ಗಡಿಯೊಳಕ್ಕೆ ನುಸುಳಿ ಅಲ್ಲಿ ಸೆರೆ ಸಿಕ್ಕಿದ್ದ ಯೋಧ ಚಂದು ಚವ್ಹಾಣ್ ಬಗ್ಗೆ ಮಾಹಿತಿ ಕಲೆಹಾಕಲು ಭಾರತದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಈವರೆಗೆ ಸುಮಾರು 15ರಿಂದ 20 ಬಾರಿ ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದಾರೆ. ಆ ಪ್ರಯತ್ನಗಳಿಂದಾಗಿ ಚಂದು ಬದುಕಿರುವುದು ದೃಢಪಟ್ಟಿತ್ತು. ಇದೀಗ, ಭಾರತದ ಸತತ ಪ್ರಯತ್ನಗಳಿಂದ ಪಾಕಿಸ್ತಾನ ಶೀಘ್ರವೇ ಆತನನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ" ಎಂದು ಸಚಿವರು ತಿಳಿಸಿದ್ದಾರೆ.